Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕಾರಿನ ಬಾನೆಟ್​​​ ಮೇಲೆ ಬಿದ್ದ ವ್ಯಕ್ತಿಯನ್ನು 2 ಕಿ.ಮೀ. ದೂರಕ್ಕೆ ಹೊತ್ತೊಯ್ದ ಚಾಲಕಿ; ಐವರು ಅರೆಸ್ಟ್

ಬೆಂಗಳೂರು ನಗರದ ಉಲ್ಲಾಳದಲ್ಲಿ 2 ಕಾರುಗಳ ನಡುವೆ ಸಣ್ಣ ಅಪಘಾತ ವಿಚಾರಕ್ಕೆ ಗಲಾಟೆ ನಡೆದಿದೆ. ಕಾರು ಚಾಲಕಿ ಬಾನೆಟ್​​​ ಮೇಲೆ ವ್ಯಕ್ತಿ ಬಿದ್ದರೂ 2 ಕಿ.ಮೀ. ಕಾರು ಚಲಾಯಿಸಿಕೊಂಡು ಅಮಾನವಿಯತೆ ಮೆರೆದಿದ್ದಾಳೆ.

ಬೆಂಗಳೂರು: ಕಾರಿನ ಬಾನೆಟ್​​​ ಮೇಲೆ ಬಿದ್ದ ವ್ಯಕ್ತಿಯನ್ನು 2 ಕಿ.ಮೀ. ದೂರಕ್ಕೆ ಹೊತ್ತೊಯ್ದ ಚಾಲಕಿ; ಐವರು ಅರೆಸ್ಟ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 20, 2023 | 6:36 PM

ಬೆಂಗಳೂರು: ನಗರದಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ 2 ಕಾರುಗಳ ನಡುವೆ ಸಣ್ಣ ಅಪಘಾತ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಕಾರು ಚಾಲಕಿ ಶ್ವೇತಾ ಎನ್ನುವ ಮಹಿಳೆಯು ಬಾನೆಟ್​​​ ಮೇಲೆ ವ್ಯಕ್ತಿ ಬಿದ್ದರೂ 2 ಕಿ.ಮೀ. ಕಾರು ಚಲಾಯಿಸಿಕೊಂಡು ಹೋಗಿ ಅಮಾನವಿಯತೆ ಮೆರೆದಿದ್ದಾಳೆ. ಸಿಗ್ನಲ್​​ನಲ್ಲಿ ದರ್ಶನ್ ಎಂಬುವವರ ಸ್ವಿಫ್ಟ್​ ಕಾರಿಗೆ ನೆಕ್ಸಾನ್​ ಕಾರು ಚಾಲಕಿ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಟಾಟಾ ನೆಕ್ಸಾನ್​ ಕಾರು ಚಲಾಯಿಸುತ್ತಿದ್ದ ಚಾಲಕಿ ಶ್ವೇತಾ, ಸ್ವಿಫ್ಟ್​ ಕಾರು ಚಲಾಯಿಸುತ್ತಿದ್ದ ದರ್ಶನ್​​​ ಜತೆ ಕೆಟ್ಟದಾಗಿ ಮಧ್ಯಬೆರಳು ತೋರಿಸಿ ಕೆಟ್ಟದಾಗಿ ವರ್ತಿಸಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಕೋಪಗೊಂಡ ದರ್ಶನ್ ಟಾಟಾ ನೆಕ್ಸಾನ್​ ಕಾರು ಹಿಂಬಾಲಿಸಿ ಮಹಿಳೆಯ ಕಾರು ಅಡ್ಡಗಟ್ಟಿ ಮಹಿಳೆಯ ಅಸಭ್ಯ ವರ್ತನೆ ಬಗ್ಗೆ ಪ್ರಶ್ನಿಸಿದ್ದಾನೆ.

ಕೋಪಗೊಂಡ ಶ್ವೇತಾ ಅವರು ಕಾರನ್ನು ಮುಂದೆ ಚಲಾಯಿಸಲು ಹೋಗುತ್ತಿದ್ದಂತೆ ದರ್ಶನ್ ರವರು ಕಾರಿನ ಬಾನೆಟ್ ಮೇಲೆ ಹತ್ತಿ ಕುಳಿತಿದ್ದಾರೆ. ಈ ವೇಳೆ ಏಕಾಏಕಿ ಟಾಟಾ ನೆಕ್ಸಾನ್ ಕಾರು ಚಲಾಯಿಸುತ್ತಿದ್ದ ಮಹಿಳೆ ಶ್ವೇತಾ ಬಚಾವ್​ ಆಗಲು ನೆಕ್ಸಾನ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದ ದರ್ಶನ್​ ಅವರನ್ನು ಸುಮಾರು 1 ಕಿಲೋ ಮೀಟರ್​ವರೆಗೂ ಕಾರು ಚಲಾಯಿಸಿಕೊಂಡು ಹೋಗಿದ್ದಾಳೆ. ದರ್ಶನ್ ಕಡೆಯವರು ಬಂದು ಕಾರ್ ಅಡ್ಡಗಟ್ಟಿ ನಿಲ್ಲಿಸಿ ಕಾರಿನ ಗ್ಲಾಸುಗಳನ್ನು ಹೊಡೆದು ಹಾಕಿ ಜೊತೆಗೆ ಶ್ವೇತಾ ರವರ ಗಂಡ ಪ್ರಮೋದ್ ರವರಿಗೆ ಕೈನಿಂದ ಗುದ್ದಿ ಗಾಯಪಡಿಸಿದ್ದಾರೆ. ನಂತರ ಪೊಲೀಸರು ಎರಡು ಕಡೆಯವರನ್ನು ಠಾಣೆಗೆ ಕರೆದುಕೊಂಡು ಬಂದು ದೂರನ್ನು ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಐವರು ಆರೋಪಿಗಳಾದ ಪ್ರಿಯಾಂಕ, ದರ್ಶನ್, ಸುಜನ್, ಯಶವಂತ, ವಿನಯ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:2025ರ ಅಂತ್ಯದೊಳಗೆ ರಸ್ತೆ ಅಪಘಾತಗಳನ್ನು ಶೇ50 ರಷ್ಟು ಕಡಿಮೆ ಮಾಡಲು ಎಲ್ಲರ ಪ್ರಯತ್ನಗಳು ಅಗತ್ಯ: ನಿತಿನ್ ಗಡ್ಕರಿ

ಇನ್ನು ಮೆಡಿಕಲ್ ಚೆಕಪ್ ಮುಗಿಸಿಕೊಂಡು ಠಾಣೆಗೆ ಬಂದ ಅರೋಪಿ ದರ್ಶನ್ ಅಂಡ್ ಗ್ಯಾಂಗ್ ಮಾಧ್ಯಮದ ಕ್ಯಾಮೆರಾಗಳ ಮುಂದೆ  ಕಿರುಚಾಡಿದೆ. ಸಣ್ಣದಾಗಿ ಕಾರು ಸ್ಕ್ರಾಚ್ ಆಗಿದ್ದನ್ನ ಮಹಿಳೆ ದೊಡ್ಡದು ಮಾಡಿದ್ದಾಳೆ. ನಾವುಗಳು ವ್ಯಾಪಾರ ಮಾಡಿಕೊಂಡಿರುವ ಹುಡುಗರು, ನಮ್ಮ ಮೇಲೆ ಎಲ್ಲಿಯೂ ಕೂಡ ದೂರುಗಳು ಇಲ್ಲ. ಹುಡುಗಿ ಕೊಟ್ಟಿರುವ ದೂರಿನ ರೀತಿಯಲ್ಲಿ ನಾವು ನಡೆದುಕೊಂಡಿಲ್ಲ. ಆ ಹುಡುಗಿ ಮಾಡಿದ ಕೆಲಸಕ್ಕೆ ನಾನು ಸತ್ತು ಹೋಗುತ್ತಿದ್ದೆ ಎಂದು ದರ್ಶನ್ ಹೇಳಿದ್ದಾರೆ.

ಹಂಪ್​ಗಳಿದ್ದರೂ ಗಾಡಿಯನ್ನ ಸ್ಪೀಡಾಗಿ ಡ್ರೈವ್ ಮಾಡಿದ್ದಾರೆ. 1ವರೆಯಿಂದ 2 ಕಿಲೋ ಮೀಟರ್ ಡ್ರೈವ್ ಮಾಡ್ಕೊಂಡು ಹೋಗಿದ್ದಾರೆ. ನಾವು ನೋಡಿ ಗಾಡಿ ಸ್ಟಾಪ್ ಮಾಡಿ ಅಂದ್ರು ಮಾಡಿಲ್ಲ. ಮಹಿಳೆ ಈ ರೀತಿ ಕಾರು ಡ್ರೈವ್ ಮಾಡಿದ್ದು ತಪ್ಪು ನಾವೇ ಕಾರನ್ನ ಫಾಲೋ ಮಾಡ್ಕೊಂಡು ಬಂದಿದ್ವಿ ಎಂದು ಈ ಘಟನೆಯನ್ನ ನೋಡಿದ ಪ್ರತ್ಯಕ್ಷದರ್ಶಿ ಸಂತೋಷ್ ಟಿವಿ9 ಗೆ ಹೇಳಿಕೆ ನೀಡಿದ್ದಾರೆ.

ಇನ್ನು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿಯವರು 10 ಗಂಟೆ ಸುಮಾರಿಗೆ ಸಣ್ಣ ಅಪಘಾತ ನಡೆದಿದ್ದು, ನೆಕ್ಸಾನ್ ಮತ್ತು ಸ್ವಿಫ್ಟ್ ಕಾರಿನಲ್ಲಿದ್ದವರ ಮೇಲೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಯುವತಿ ಚಲಾಯಿಸ್ತಿದ್ದ ಕಾರನ್ನ ಸ್ವಿಫ್ಟ್ ಕಾರಿನಲ್ಲಿದ್ದ ದರ್ಶನ್ ಮತ್ತು ಸ್ನೇಹಿತರು ಅಡ್ಡಗಟ್ಟಿದ್ದಾರೆ. ದರ್ಶನ್ ಸ್ಥಳೀಯ ನಿವಾಸಿಯಾಗಿದ್ದರಿಂದ ಸ್ನೇಹಿತರು ಜಮಾವಣೆಯಾಗಿದ್ದು ನೆಕ್ಸಾನ್ ಕಾರ್​ನಲ್ಲಿದ್ದ ಮಹಿಳೆ ಕಾರಿನಿಂದ ಇಳಿಯುವಂತೆ ಹೇಳಿದ್ದಾರೆ‌. ಇಳಿಯದಿದ್ದಾಗ ಬಾನೆಟ್ ಏರಿದ್ದ ದರ್ಶನ್ ಈ ವೇಳೆ ಮಹಿಳೆ ಕಾರನ್ನ ಚಲಾಯಿಸಿದ್ದಾರೆ. ಈ ಘಟನೆ ಸಂಬಂಧ ಎರಡು ಕಡೆಯವರ ದೂರಿನ ಹಿನ್ನಲೆ ದೂರು, ಪ್ರತಿದೂರು ಸಂಬಂಧ ಎಫ್​ಐಆರ್ ದಾಖಲಾಗಿದ್ದು, ಐವರನ್ನ ಬಂಧಿಸಲಾಗಿದೆ ಎಂದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:12 pm, Fri, 20 January 23