ಗ್ರೇಟರ್ ಬೆಂಗಳೂರಿನ ಜನರಿಗೆ ಬೋಟ್ ಭಾಗ್ಯ: ಬಿಬಿಎಂಪಿಯಿಂದ ಹೊಸ ಕೊಡುಗೆ
ಮಳೆಗೆ ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳು ಜಲಾವೃತಗೊಂಡಿದ್ದವು. ಸಾಯಿಲೇಔಟ್, ಯಲಹಂಕ, ಕೋರಮಂಗಲ ಸುತ್ತಮುತ್ತ ಇಡೀ ಏರಿಯಾ ನೀರಿನಿಂದ ಆವರಿಸಿಬಿಟ್ಟಿತ್ತು. ಇತ್ತ, ಮುಂಗಾರು ಮಳೆ ಆರಂಭವಾಗುತ್ತಿರುವ ಹೊತ್ತಿನಲ್ಲೇ ಪಾಲಿಕೆ ಸಮಸ್ಯೆಗೆ ಪರಿಹಾರ ಹುಡುಕುತ್ತೆ ಅಂತ ಜನರು ಕಾದುಕುಳಿತಿದ್ದಾರೆ. ಆದರೆ, ಪಾಲಿಕೆ ಮಾತ್ರ ಜನರಿಗೆ ಬೋಟ್ ಭಾಗ್ಯ ನೀಡಲು ತೀರ್ಮಾನಿಸಿದೆ. ಏನಿದು ಬೋಟ್ ಭಾಗ್ಯ? ಇಲ್ಲಿದೆ ವಿವರ

ಬೆಂಗಳೂರು, ಮೇ 30: ಐಟಿಬಿಟಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಉಂಟಾಗುವ ಮಳೆ ಅವಾಂತರಗಳನ್ನು ಸರಿಪಡಿಸಬೇಕಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇದೀಗ ಮಹಾನಗರದ ಮಂದಿಗೆ ಬೋಟ್ ಭಾಗ್ಯ ನೀಡಲು ಹೊರಟಿದೆ. ಅಗ್ನಿಶಾಮಕ ದಳ ಹಾಗೂ ಎಸ್ಡಿಆರ್ಎಫ್ ತಂಡಗಳು ಬೋಟ್ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತವೆ. ಆದರೆ, ಇದೀಗ ಬಿಬಿಎಂಪಿಯೇ ಬೋಟ್ ಖರೀದಿಗೆ ಮುಂದಾಗಿದ್ದು, ಪ್ರತಿ ಜೋನ್ಗೆ ಒಂದರಂತೆ ಏಳು ಬೋಟ್ಗಳನ್ನು ಖರೀದಿಸಲು, ಬರೋಬ್ಬರಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆದಿದೆ. ಬೋಟ್ಗಳ ಖರೀದಿ ಜೊತೆಗೆ 50 ಲೈಫ್ ಜಾಕೆಟ್, ಮೋಟಾರ್ ಪಂಪ್ಗಳನ್ನ ಖರೀದಿಸಲು ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಹಲವೆಡೆ ಮಳೆ ಬಂದಾಗ ನೀರು ನಿಂತು ಸಮಸ್ಯೆ ಎದುರಾಗುತ್ತೆ. ರಾಜಕಾಲುವೆಗಳು, ಕೆರೆಗಳ ಒತ್ತುವರಿ ತೆರವು ಮಾಡದೆ, ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದೆ ಬೋಟ್ ಖರೀದಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶಕ್ಕೆ ಹೊರಹಾಕುತ್ತಿದ್ದಾರೆ. ಅಲ್ಲದೇ, ಬಿಬಿಎಂಪಿಗೆ ಹಿಡಿಶಾಪ ಹಾಕಿದ್ದಾರೆ.
ಇದನ್ನೂ ಓದಿ: ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಗ್ಯಾಂಗ್ ಸಿಕ್ಕಿಬಿತ್ತು, ಮಾಡಿದ್ದೇನು ಗೊತ್ತಾ?
ಸದ್ಯ ರಾಜಧಾನಿಯಲ್ಲಿ ಮಳೆ ಬಂದಾಗ ಸೂಕ್ಷ್ಮ ಪ್ರದೇಶ ಅಂತ 200 ಸ್ಥಳಗಳನ್ನು ಗುರುತಿಸಿರುವ ಪಾಲಿಕೆ, ಈಗ ಮಳೆ ಬಿಡುವು ಕೊಟ್ಟರೂ ಕೂಡ ಆ ಸ್ಥಳಗಳಲ್ಲಿ ನಡೆಯಬೇಕಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸದ ಕೈ ಕಟ್ಟಿ ಕುಳಿತಿದೆ. ಇತ್ತ ಮಳೆ ಅವಾಂತರಗಳಿಂದ ಮುಕ್ತಿ ಕೊಡಿ ಅಂತಿರುವ ಜನರಿಗೆ ಬೋಟ್ ಭಾಗ್ಯ ಕೊಡಲು ಹೊರಟಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ನಡೆಗೆ ವಿರೋಧ ವ್ಯಕ್ತವಾಗ್ತಿದ್ದು, ಗ್ರೇಟರ್ ಬೆಂಗಳೂರನ್ನು ವಾಟರ್ ಬೆಂಗಳೂರು ಮಾಡಲು ಹೊರಟಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.






