ರಸ್ತೆ ಗುಂಡಿಗೆ ಬೇಸತ್ತ ಜನ: “ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ” ಆರಂಭಿಸಿದ ಬೆಂಗಳೂರಿಗರು

|

Updated on: Aug 21, 2023 | 9:56 AM

ನಗರದಲ್ಲಿನ ರಸ್ತೆ ಗುಂಡಿಗಳಿಗೆ ಜನರು ಬೇಸತ್ತು ಹೋಗಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಅನೇಕರ ಪ್ರಾಣಪಕ್ಷಿ ಹಾರಿಹೋಗಿದೆ. ಗುಂಡಿ ಮುಚ್ಚುವಂತೆ ಸಾರ್ವಜನಿಕರು ಎಷ್ಟೇ ಮನವಿ ಸಿಲ್ಲಿಸಿದ್ದರೂ ಸರ್ಕಾರ ಉದಾಸೀನತೆ ಪ್ರದರ್ಶಿಸುತ್ತಿದೆ. ಕೊನೆಪಕ್ಷ ಗುಂಡಿ ಮುಚ್ಚಿದರೂ ಅವು ಮತ್ತೆ ಮಳೆಗಾಲದಲ್ಲಿ ಬಾಯಿ ತೆರೆದುಕೊಳ್ಳುತ್ತವೆ. ಸರ್ಕಾರದ ಬೇಜವಾಬ್ದಾರಿ ಕಾರ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿ, ತಾವೆ ಸ್ವತಃ ಗುಂಡಿ ಮುಚ್ಚಲು ಆರಂಭಿಸಿದ್ದಾರೆ.

ರಸ್ತೆ ಗುಂಡಿಗೆ ಬೇಸತ್ತ ಜನ: ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ ಆರಂಭಿಸಿದ ಬೆಂಗಳೂರಿಗರು
ರಸ್ತೆಗುಂಡಿ
Follow us on

ಬೆಂಗಳೂರು: ನಗರದಲ್ಲಿನ ರಸ್ತೆ ಗುಂಡಿಗಳಿಗೆ (Pothole) ಜನರು ಬೇಸತ್ತು ಹೋಗಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಅನೇಕರ ಪ್ರಾಣಪಕ್ಷಿ ಹಾರಿಹೋಗಿದೆ. ಗುಂಡಿ ಮುಚ್ಚುವಂತೆ ಸಾರ್ವಜನಿಕರು ಎಷ್ಟೇ ಮನವಿ ಸಿಲ್ಲಿಸಿದ್ದರೂ ಸರ್ಕಾರ (Government) ಉದಾಸೀನತೆ ಪ್ರದರ್ಶಿಸುತ್ತಿದೆ. ಕೊನೆಪಕ್ಷ ಗುಂಡಿ ಮುಚ್ಚಿದರೂ ಅವು ಮತ್ತೆ ಮಳೆಗಾಲದಲ್ಲಿ ಬಾಯಿ ತೆರೆದುಕೊಳ್ಳುತ್ತವೆ. ಸರ್ಕಾರದ ಬೇಜವಾಬ್ದಾರಿ ಕಾರ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ಕಾರ್ಯದಿಂದ ಬೇಸತ್ತ ‘ಸಿಟಿಜನ್ಸ್​​ ಗ್ರೂಪ್​, ಈಸ್ಟ್​​ ಬೆಂಗಳೂರು’ ಸಂಘಟನೆ ಸದಸ್ಯರು ತಾವೇ ಗುಂಡಿ ಮುಚ್ಚಿದ್ದಾರೆ. ಅಲ್ಲದೇ “ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ”ವನ್ನೂ ಆರಂಭಿಸಿದ್ದಾರೆ.

ಹಾಲನಾಯಕಹಳ್ಳಿಯ ಮುನೇಶ್ವರ ಲೇಔಟ್​ ಮತ್ತು ಚೂಡಸಂದ್ರದ 6 ಕಿಮೀ ಉದ್ದದ ರಸ್ತೆಯಲ್ಲಿ ಗುಂಡಿಗಳನ್ನು ಸಂಘಟನೆಯ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ಮುಚ್ಚಿದ್ದಾರೆ. ಈ ಬಗ್ಗೆ ಸಂಘಟನೆಯ ಸ್ಥಾಪಕ, ಟೆಕ್ಕಿ ಆರಿಫ್ ಮುದ್ಗಲ್ (32) ಮಾತನಾಡಿ ನಾನು ಈ ಕೆಲಸಕ್ಕಾಗಿ 2.7 ಲಕ್ಷ ರೂ. ಸಾಲ ಮಾಡಿದ್ದೇನೆ. ಕೆಲವು ದಿನಗಳ ಹಿಂದೆ ನನ್ನ ಅಪಾರ್ಟ್‌ಮೆಂಟ್ ಬಳಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಅವರು ಪ್ರಯಾಣಿಸುತ್ತಿದ್ದ ಆಟೋ ಗುಂಡಿಗೆ ಸಿಕ್ಕಿ ಪಲ್ಟಿಯಾಗಿ ಗಾಯಗೊಂಡರು. ನಂತರ ಆಗಸ್ಟ್ 14 ರ ರಾತ್ರಿ ಅದೇ ಗುಂಡಿಯನ್ನು ತಪ್ಪಿಸಲು ಹೋಗಿ ಇ-ಕಾಮರ್ಸ್ ಸಂಸ್ಥೆಯ ಡೆಲಿವರಿ ಏಜೆಂಟ್ ಕಾರಿಗೆ ಡಿಕ್ಕಿ ಹೊಡೆದು ಕಾಲು ಮುರಿದುಕೊಂಡರು. ಇದರಿಂದ ನನಗೆ ತುಂಬಾ ಬೇಜಾರ ಆಗಿ ಸ್ವತಃ ಗುಂಡಿ ಮುಚ್ಚಲು ನಿರ್ಧರಿಸಿದೆ.

ಇದನ್ನೂ ಓದಿ: ಅಬಕಾರಿ ಸುಂಕ ಹೆಚ್ಚಳ ಎಫೆಕ್ಟ್; ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯಪ್ರಿಯರು, ಐಎಂಎಲ್‌ ಮಾರಾಟ ಪ್ರಮಾಣ ಶೇ.15ರಷ್ಟು ಕುಸಿತ

ಈ ‘ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು’ ಅನ್ನು ಐದು ವರ್ಷಗಳ ಹಿಂದೆ ಸ್ಥಾಪಿಸಿದೆ. ಈ ಸಂಘಟನೆಯ ಸದಸ್ಯರು ಗುಂಡಿ ಮುಚ್ಚಲು ಹಣ ನೀಡಿದ್ದಾರೆ. ಇದರ ಸಹಾಯದಿಂದ ನಾವು ಕೆಲವು ಗುಂಡಿಗಳನ್ನು ಮುಚ್ಚಿದ್ದೇವೆ. ಆದರೆ ನನ್ನ ಬಳಿ ಹಣವಿಲ್ಲ, ಹೀಗಾಗಿ ನಾನು ಸಾಲ ಮಾಡಿದೆ. ಗುಂಡಿಗಳನ್ನು ಮುಚ್ಚುವಂತೆ ಹಲವಾರು ಬಾರಿ ಕ್ಷೇತ್ರದ ಜನಪ್ರತಿನಿಧಿಗಳನ್ನು ಭೇಟಿ ಮಾಡಿದ್ದೇವೆ, ಆದರೆ ಯಾರೂ ಸ್ಪಂದಿಸಲಿಲ್ಲ ಎಂದು ಸಂಘಟನೆಯ ಸದಸ್ಯರು ಹೇಳಿದ್ದಾರೆ.

ರಾಜಕಾರಣಿಗಳು ಈ ವಿಷಯಗಳ ಬಗ್ಗೆ ಅಸಡ್ಡೆ ಹೊಂದಿದ್ದಾರೆ. ಈ ಪ್ರದೇಶಗಳ ನಿವಾಸಿಗಳು ಇತರ ರಾಜ್ಯಗಳು ಅಥವಾ ಸ್ಥಳಗಳಿಂದ ಬಂದವರು ಎಂದು ಅವರು ಭಾವಿಸುತ್ತಾರೆ. ಹೀಗಾಗಿ ನಾವು ಇನ್ಮುಂದೆ “ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ” ಆರಂಭಿಸಿದ್ದೇವೆ ಎಂದು ಸಂಘಟನೆಯ ಸದಸ್ಯ ಕುಮಾರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:54 am, Mon, 21 August 23