ವೃದ್ಧಾಪ್ಯದಲ್ಲಿ ಮಹಿಳೆಯರ ಚಪಲ: ಬೆಂಗಳೂರಲ್ಲಿ ವ್ಯಕ್ತಿ ಕಳೆದುಕೊಂಡಿದ್ದು ಲಕ್ಷ ಲಕ್ಷ ಹಣ

ಬೆಂಗಳೂರಿನಲ್ಲಿ 63 ವರ್ಷದ ವೃದ್ಧರೊಬ್ಬರು ಆನ್‌ಲೈನ್ ಡೇಟಿಂಗ್ ವಂಚನೆಗೆ ಸಿಲುಕಿ 32.2 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹೈ-ಪ್ರೊಫೈಲ್​ ಮಹಿಳೆಯರನ್ನು ಪರಿಚಯಿಸುವುದಾಗಿ ಆಮಿಷವೊಡ್ಡಿದ್ದ ವಂಚಕರು ನೋಂದಣಿ ಶುಲ್ಕ, ಸೇವಾ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಹಣ ಪಡೆದಿದ್ದಾರೆ. ಕೊನೆಗೆ ವಂಚನೆಗೊಳಗಾಗಿದ್ದನ್ನು ಅರಿತ ವೃದ್ಧರು ದೂರು ದಾಖಲಿಸಿದ್ದಾರೆ.

ವೃದ್ಧಾಪ್ಯದಲ್ಲಿ ಮಹಿಳೆಯರ ಚಪಲ: ಬೆಂಗಳೂರಲ್ಲಿ ವ್ಯಕ್ತಿ ಕಳೆದುಕೊಂಡಿದ್ದು ಲಕ್ಷ ಲಕ್ಷ ಹಣ
ಆನ್​ಲೈನ್​ ಡೇಟಿಂಗ್​ ಹೆಸರಲ್ಲಿ ವಂಚನೆ (ಸಾಂದರ್ಭಿಕ ಚಿತ್ರ)
Image Credit source: Google

Updated on: Oct 30, 2025 | 12:47 PM

ಬೆಂಗಳೂರು, ಅಕ್ಟೋಬರ್​ 30: ಆನ್​ಲೈನ್​ ಡೇಟಿಂಗ್ ಹೆಸರಲ್ಲಿ​ ವಂಚನೆಗೆ ಒಳಗಾಗಿ 63 ವರ್ಷದ ವ್ಯಕ್ತಿಯೋರ್ವರು ಲಕ್ಷ ಲಕ್ಷ ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ನಗರದ ಹೊರಮಾವು ನಿವಾಸಿಗೆ ಹೈ-ಪ್ರೊಫೈಲ್​ ಮಹಿಳೆಯರೊಂದಿಗೆ ಸಂಪರ್ಕ ಮಾಡಿಸುವ ಆಸೆ ತೋರಿಸಿ ವಂಚಕರು ಬರೋಬ್ಬರಿ 32 ಲಕ್ಷಕ್ಕಿಂತ ಅಧಿಕ ಹಣವನ್ನು ದೋಚಿದ್ದಾರೆ. ಅಂತಿಮವಾಗಿ ತಾನು ಮೋಸ ಹೋಗಿದ್ದೇನೆ ಎಂದು ಅರಿತ ವ್ಯಕ್ತಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

CEN ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಸೆಪ್ಟೆಂಬರ್​ 5ರಿಂದ ಅಕ್ಟೋಬರ್​ 18ರ ಅವಧಿಯಲ್ಲಿ ಈ ವಂಚನೆ ನಡೆದಿದೆ. ವಂಚನೆಗೊಳೆಗಾದ ವ್ಯಕ್ತಿಗೆ ಡೇಟಿಂಗ್​ ಸೇವೆ ಹೆಸರಲ್ಲಿ ಕರೆ ಬಂದಿದ್ದು, ಮಹಿಳೆಯರ ಜೊತೆ ಭೇಟಿ ಮಾಡಿಸುವ ಬಗ್ಗೆ ತಿಳಿಸಲಾಗಿದೆ. ಅಲ್ಲದೆ, ನೋಂದಣಿ ಶುಲ್ಕ ಎಂದು 1,950 ರೂ.ಗಳನ್ನ ಆನ್​ಲೈನ್​ ಮೂಲಕ ವಂಚಕರು ಪಾವತಿ ಮಾಡಿಸಿಕೊಂಡಿದ್ದಾರೆ. ಬಳಿಕ ವಾಟ್ಸ್ಯಾಪ್​ನಲ್ಲಿ ಮೂವರು ಮಹಿಳೆಯರ ಫೋಟೋವನ್ನು ಕಳುಹಿಸಲಾಗಿದ್ದು, ಆ ಪೈಕಿ ಒಬ್ಬರನ್ನು ವ್ಯಕ್ತಿ ಆಯ್ಕೆ ಮಾಡಿದ್ದರು. ಅವರು ಸೆಲೆಕ್ಟ್​ ಮಾಡಿದ್ದ ರಿತಿಕಾ ಹೆಸರಿನ ಮಹಿಳೆಯ ದೂರವಾಣಿ ಸಂಖ್ಯೆಯನ್ನ ಶೇರ್​ ಮಾಡಲಾಗಿತ್ತು. ಬಳಿಕ ರಿತಿಕಾ ಮತ್ತು ವ್ಯಕ್ತಿಯ ನಡುವೆ ಸಂವಹನ ಆರಂಭವಾಗಿದ್ದು, ಆತ್ಮೀಯತೆಯೂ ಬೆಳೆದಿತ್ತು. ನಿಮ್ಮನ್ನು ಬೇಗ ಭೇಟಿಯಾಗುವುದಾಗಿ ರಿತಿಕಾ ಕೂಡ ತಿಳಿಸಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: ಮಹಿಳೆಗೆ ಬ್ಲ್ಯಾಕ್​ಮೇಲ್​ ಆರೋಪ: ಶಾಸಕಿ ನಯನಾ ಮೋಟಮ್ಮ ಆಪ್ತ ಆದಿತ್ಯ ಅರೆಸ್ಟ್

ಹೀಗಿರುವಾಗ ದಸರಾ ಹಬ್ಬಕ್ಕೂ ಮೊದಲು, ತನ್ನ ಕುಟುಂಬವನ್ನು ಭೇಟಿಯಾಗಲು ತಾನು ಹೋಗುತ್ತಿದ್ದೇನೆ. ಹೀಗಾಗಿ ಕೆಲವು ದಿನಗಳ ಕಾಲ ನನಗೆ ಕರೆ ಮಾಡುವುದು ಅಥವಾ ಸಂದೇಶ ಕಳುಹಿಸುವುದನ್ನು ಮಾಡಬೇಡಿ ಎಂದು ವ್ಯಕ್ತಿಗೆ ರಿತಿಕಾ ತಿಳಿಸಿದ್ದಳು. ಇದರ ನಡುವೆ ಪ್ರೀತಿ ಎಂಬ ಹೆಸರಿನ ಮತ್ತೊಬ್ಬ ಮಹಿಳೆ ಕರೆ ಮಾಡಿದ್ದು, ರಿತಿಕಾ ಮತ್ತು ನಿಮ್ಮ ಭೇಟಿಗೆ ಅಗತ್ಯ ಸಿದ್ಧತೆ ಮಾಡುತ್ತಿದ್ದೇನೆ. ಹೀಗಾಗಿ ವಿವಿಧ ವ್ಯವಸ್ಥೆಗಳಿಗೆ ಹಣ ನೀಡುವಂತೆ ತಿಳಿಸಿದ್ದಳು. ಆಕೆಯ ಮಾತು ನಂಬಿ ವ್ಯಕ್ತಿ ಬೇರೆ ಬೇರೆ ಬ್ಯಾಂಕ್​ನ ಮೂರು ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ. ಲಕ್ಷ ಲಕ್ಷ ಹಣ ಪಾವತಿ ಬಳಿಕವೂ ಪ್ರೀತಿ ಮತ್ತೆ ಹೊಸ ವರಸೆ ತೆಗೆದು ಹಣ ಕೇಳುತ್ತಿದ್ದಳು. ಆಗ ಹಣ ನೀಡಲು ವ್ಯಕ್ತಿ ನಿರಾಕರಿಸಿದ್ದು, ಈ ವೇಳೆ ಕಾನೂನು ಕ್ರಮದ ಬೆದರಿಕೆಯನ್ನೂ ಆಕೆ ಹಾಕಿದ್ದಾಳೆ. ಹೀಗಾಗಿ ತಾನು ವಂಚನೆಗೆ ಒಳಗಾದ ಬಗ್ಗೆ ವ್ಯಕ್ತಿಗೆ ಜ್ಞಾನೋದಯವಾಗಿದ್ದು, ಅಷ್ಟರಲ್ಲಿ 32.2 ಲಕ್ಷ ರೂ. ಕಳೆದುಕೊಂಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:46 pm, Thu, 30 October 25

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us