
ಬೆಂಗಳೂರು, ಜುಲೈ 13: ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ರಸ್ತೆ ಬದಿಯಲ್ಲಿ ದೀರ್ಘಕಾಲ ನಿಂತಿರುವ ಅನಾಥ ಹಾಗೂ ಬಳಕೆಯಲ್ಲದ ವಾಹನಗಳನ್ನು ಗುರುತಿಸಿ, ಅವುಗಳಿಗೆ ಎಚ್ಚರಿಕೆ ಸ್ಟಿಕ್ಕರ್ ಅಂಟಿಸಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಜಿಬಿಎ (GBA) ನಡೆಸುತ್ತಿದೆ. ನಿಯಮ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಿಲ್ಲಿಸಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಇದೇ ನಿಯಮ ಜಿಬಿಎ ತನ್ನದೇ ಕಚೇರಿ ಆವರಣದಲ್ಲಿ ಅನ್ವಯಿಸುತ್ತಿಲ್ಲವೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಬಳಕೆಯಲ್ಲದ ಸ್ಥಿತಿಯಲ್ಲಿ ಕಾರುಗಳು ಜಿಬಿಎ ಮುಖ್ಯ ಕಚೇರಿ ಆವರಣದಲ್ಲಿ ಹಲವು ದಿನಗಳಿಂದ ನಿಂತಿರುವುದು ಕಂಡುಬಂದಿದೆ. ಕೆಲವು ವಾಹನಗಳ ಟೈರ್ಗಳು ಪಂಕ್ಚರ್ ಆಗಿದೆ. ಧೂಳು ಆವರಿಸಿರುವುದರಿಂದ ಅವು ಬಹಳ ದಿನಗಳಿಂದ ಬಳಸಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಕರ್ನಾಟಕ ನೋಂದಣಿ ಹೊಂದಿರುವ ವಾಹನಗಳ ಜೊತೆಗೆ ಅನ್ಯರಾಜ್ಯದ ನೋಂದಣಿ ಸಂಖ್ಯೆಯ ಕಾರುಗಳೂ ಕಚೇರಿ ಆವರಣದಲ್ಲಿ ದೀರ್ಘಕಾಲದಿಂದ ನಿಂತಿವೆ.
ನಗರದ ರಸ್ತೆಗಳಲ್ಲಿ ನಿಂತಿರುವ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿ ನೋಟಿಸ್ ನೀಡುವ ಅಧಿಕಾರಿಗಳು, ತಮ್ಮದೇ ಕಚೇರಿ ಆವರಣದಲ್ಲಿ ಇರುವ ಬಳಕೆಯಲ್ಲದ ವಾಹನಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ. ನಿಯಮ ಎಂದರೆ ಎಲ್ಲರಿಗೂ ಒಂದೇ ಆಗಬೇಕು. ಮೊದಲು ತಮ್ಮ ಕಚೇರಿ ಆವರಣದಲ್ಲಿ ಇರುವ ವಾಹನಗಳ ಪರಿಶೀಲನೆ ನಡೆಸಿ, ನಂತರ ನಗರದ ಜನರಿಗೆ ನಿಯಮ ಪಾಲನೆ ಬಗ್ಗೆ ಹೇಳಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಚಿವ ಕೃಷ್ಣಭೈರೇಗೌಡ ನೈಟ್ ರೌಂಡ್ಸ್: ಇಂಜಿನಿಯರ್ಗಳಿಗೆ ಕ್ಲಾಸ್
ಸಾರ್ವಜನಿಕರ ಆರೋಪಗಳಿಗೆ ಜಿಬಿಎ ಯಾವ ರೀತಿಯ ಸ್ಪಷ್ಟನೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಜೊತೆಗೆ, ನಗರದಾದ್ಯಂತ ನಡೆಯುತ್ತಿರುವ ಕಾರ್ಯಾಚರಣೆಯ ಮಾದರಿಯಲ್ಲೇ ತನ್ನ ಕಚೇರಿ ಆವರಣದಲ್ಲಿರುವ ಬಳಕೆಯಲ್ಲದ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ