
ಬೆಂಗಳೂರು, ಏಪ್ರಿಲ್ 7: ರಾಜಧಾನಿ ಬೆಂಗಳೂರಿನ (Bangalore) ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ತಜ್ಞರು ಮತ್ತು ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ 2027ರ ಜನಗಣತಿ ಸಮೀಕ್ಷಾ ಕಾರ್ಯಕ್ಕೆ ಆರೋಗ್ಯ ಇಲಾಖೆಯ ನೌಕರರನ್ನು ಬಳಸಿಕೊಳ್ಳುತ್ತಿರುವುದು ರೋಗಿಗಳಿಗೆ ಭಾರಿ ಸಂಕಷ್ಟ ತಂದೊಡ್ಡಲಿದೆ. ವೈದ್ಯಕೀಯ ಸೇವೆಗಳ ಮೇಲೆ ಪರಿಣಾಮ ಬೀರಲಿದ್ದು, ಆಸ್ಪತ್ರೆ ಸಿಬ್ಬಂದಿಯನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳದಂತೆ ಮನವಿ ಮಾಡಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಪ್ಯಾರಾ ಮೆಡಿಕಲ್ ಸಿಬ್ಬಂದಿ, ಲ್ಯಾಬ್ ಟೆಕ್ನಿಶಿಯನ್ಸ್, ಎಕ್ಸರೆ ಟೆಕ್ನಾಲಜಿಸ್ಟ್, ಫಿಸಿಯೋಥೆರಫಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್ ಹಾಗೂ ನೇತ್ರಾಧಿಕಾರಿಗಳನ್ನು ಜನಗಣತಿ ಕೆಲಸಕ್ಕೆ ನಿಯೋಜಿಸಲಾಗಿದೆ. ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯೊಂದರಲ್ಲೇ ಸುಮಾರು 20ಕ್ಕೂ ಹೆಚ್ಚು ನೌಕರರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿರುವುದು ಆಸ್ಪತ್ರೆಯ ದೈನಂದಿನ ಕಾರ್ಯಚಟುವಟಿಕೆಗೆ ಹೊಡೆತ ನೀಡಲಿದೆ.
ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿನಿತ್ಯ 800 ರಿಂದ 1000ಕ್ಕೂ ಹೆಚ್ಚು ರೋಗಿಗಳು ಒಪಿಡಿ ಸೇವೆಗೆ ಬರುತ್ತಾರೆ. ಎಕ್ಸರೆ ಮತ್ತು ಲ್ಯಾಬ್ ಟೆಸ್ಟ್ಗಳಿಗೆ ಈಗಾಗಲೇ ಜನದಟ್ಟಣೆ ಇರುತ್ತದೆ. ಈಗ ಇರುವ ಸಿಬ್ಬಂದಿಯನ್ನೂ ಜನಗಣತಿಗೆ ಕಳುಹಿಸಿದರೆ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವುದು ಅಸಾಧ್ಯವಾಗಲಿದೆ.
ಇದನ್ನೂ ಓದಿ: ಇಂದಿನಿಂದ ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಆರೋಗ್ಯ ಇಲಾಖೆಯು ತುರ್ತು ಸೇವೆ ನೀಡುವ ವಿಭಾಗವಾಗಿರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಆರೋಗ್ಯ ಸಿಬ್ಬಂದಿಯನ್ನು ಜನಗಣತಿ ಕಾರ್ಯದಿಂದ ಕೈಬಿಡಬೇಕು ಎಂದು ಆಸ್ಪತ್ರೆಗಳ ಅಧೀಕ್ಷಕರು ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದೆ.