ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ: ಎಳನೀರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಫೆಬ್ರವರಿಯಲ್ಲೇ ಬಿಸಿಲಿನ ತೀವ್ರತೆ ಹೆಚ್ಚಿದ್ದು, ಜನರು ಕಲ್ಲಂಗಡಿ ಹಾಗೂ ಎಳನೀರಿನ ಮೊರೆ ಹೋಗಿದ್ದಾರೆ. ಎಳನೀರಿನ ಬೆಲೆ ಈಗಾಗಲೇ ಏರಿಕೆಯಾಗಿದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗಿರುವುದು, ಹಾಗೂ ಅಗತ್ಯವಿರುವವರಿಂದ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ: ಎಳನೀರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
Tender Coconut
Image Credit source: tv9 kannada

Updated on: Feb 23, 2026 | 10:18 PM

ಬೆಂಗಳೂರು, ಫೆಬ್ರವರಿ 23: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಬಿಸಿಲಿನ ಪ್ರಮಾಣ (summer heat) ಹೆಚ್ಚಾಗಿದ್ದು, ಜನರು ಕಲ್ಲಂಗಡಿ ಹಾಗೂ ಎಳನೀರು (Tender coconut) ಮೊರೆ‌ ಹೋಗುತ್ತಿದ್ದಾರೆ. ಕಲ್ಲಂಗಡಿ ಹಾಗೂ ಎಳನೀರಿಗೆ ಸದ್ಯ ಭಾರೀ ಡಿಮ್ಯಾಂಡ್​ ಇದೆ. ಆದರೆ ಜನರು ಖರೀದಿ ಮಾಡುವುದಕ್ಕೆ ಹಿಂದುಮುಂದು ನೋಡುವಂತಹ ಪರಿಸ್ಥಿತಿ ಉಂಟಾಗಿದೆ. ಹಾಗಾದರೆ ಕಲ್ಲಂಗಡಿ, ಎಳನೀರು ವ್ಯಾಪಾರ ಹೇಗಿದೆ ತಿಳಿಯಿರಿ.

ಈ ಬಾರಿಯ ಬಿಸಿಲಿನ ಪ್ರಮಾಣ ಜೋರಾಗಿಯೇ ಇದೆ. ಸಾಮಾನ್ಯವಾಗಿ ಮಾರ್ಚ್‌ನಲ್ಲಿ‌ ಆರಂಭವಾಗುವ ಬಿಸಿಲಿನ ಝಳ ಈ ಬಾರಿ ಫೆಬ್ರವರಿಯಲ್ಲೇ ಶುರುವಾಗಿದ್ದು, ಪ್ರಮುಖವಾಗಿ ಬೆಂಗಳೂರಿನಲ್ಲಿ ಸುಡುಬಿಸಿಲಿಗೆ ಜನರು ರೋಸಿಹೋಗಿದ್ದಾರೆ.

ಇದನ್ನೂ ಓದಿ: ಬೇಸಿಗೆ ಅಂತ ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಬಿ ಕೇರ್​ಫುಲ್ ಎಂದ ಆರೋಗ್ಯ ಇಲಾಖೆ: ಏಕೆ?

ಈಗಾಗಲೇ ಬೆಂಗಳೂರಿನಲ್ಲಿ 32 ರಿಂದ 33 ಡಿಗ್ರಿವರೆಗೂ ಉಷ್ಣಾಂಶ ದಾಖಲಾಗುತ್ತಿದೆ. ಕೇವಲ ಬೆಂಗಳೂರು ಅಷ್ಟೇ ಅಲ್ಲದೇ ರಾಜ್ಯದಲ್ಲಿ ಸೂರ್ಯ ನೆತ್ತಿಯ ಮೇಲೆ ಕುಳಿತಿದ್ದಾನೆ. ಸದ್ಯ ಬಿಸಿಲಿನ ಪ್ರಮಾಣ ಹೆಚ್ಚಾದ ಬೆನ್ನಲ್ಲೇ ಜನರು ಕಲ್ಲಂಗಡಿ ಹಾಗೂ ಎಳನೀರಿನ ಮೊರೆ ಹೋಗಿದ್ದಾರೆ. ಸಾಮಾನ್ಯವಾಗಿ 40 ರಿಂದ 50 ರೂ.ಗೆ ಸಿಗುತ್ತಿದ್ದ ಎಳನೀರು ಇದೀಗ 70 ರಿಂದ 80 ರೂ.ಗೆ ಮಾರಾಟವಾಗುತ್ತಿದೆ. ಜೊತೆಗೆ ಕೆ.ಜಿಗೆ 20 ರೂಪಾಯಿಗೆ ಕಲ್ಲಂಗಡಿ ಹಣ್ಣು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇಷ್ಟೇ ಅಲ್ಲದೇ ಬೇಸಿಗೆ ಆರಂಭಕ್ಕೂ ಮುನ್ನವೇ ಬೆಲೆ ದುಪ್ಪಟ್ಟಾಗಿರುವುದರಿಂದ ಮುಂದೆ ಇನ್ನಷ್ಟು ದರ ಹೆಚ್ಚಳವಾಹಬಹುದೆಂಬ ಆತಂಕ ಗ್ರಾಹಕರನ್ನು ಕಾಡಲಾರಂಭಿಸಿದೆ.

ಇನ್ನು ಹವಾಮಾನ ವೈಪರೀತ್ಯದಿಂದ ಅನೇಕ ಭಾಗಗಳಲ್ಲಿ ರೋಗಳಿಂದ ಎಳನೀರು ಇಳುವರಿ ಕಡಿಮೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಸಿಗುವ ಹೆಚ್ಚಿನ ಎಳನೀರು ಮಂಡ್ಯ, ಚಾಮರಾಜನಗರ, ಮದ್ದೂರು, ಮಳವಳ್ಳಿ, ರಾಮನಗರ, ಹಾಸನ ಮತ್ತು ತುಮಕೂರಿನಿಂದ ಬರುತ್ತದೆ. ಸೀಸನ್ ಆಗಿರುವುದರಿಂದ 50 ರಿಂದ 55 ರೂ.ಗೆ ಸಿಕ್ಕರೆ ಸ್ವಾಭಾವಿಕವಾಗಿ ದರ ಏರಿಕೆಯಾಗುತ್ತದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಮಕ್ಕಳು, ಪೌಷ್ಟಿಕಾಂಶ ಕೊರತೆಯಿಂದ ಬಳಲುವವರು ಅತ್ಯಗತ್ಯ ಎಳನೀರನ್ನು ಬಳಸುವುದರಿಂದ ಎಳೆನೀರಿನ ದರ ದುಪಟ್ಟಾಗಿದೆ.

ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಆರೋಗ್ಯ ಇಲಾಖೆ: ಉಚಿತ ಸ್ಕ್ಯಾನಿಂಗ್‌ಗೆ ಪರ್ಯಾಯ ವ್ಯವಸ್ಥೆ

ಒಟ್ಟಿನಲ್ಲಿ ಬಿಸಿಲಿನ ಝಳ ಜೋರಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಎಳೆನೀರಿನ ಬೆಲೆ ದುಪಟ್ಟಾಗಿರುವುದು ಜನಸಾಮಾನ್ಯರು ಕುಡಿಯಲು ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.