ಹೆಬ್ಬಾಳ ಪಶು ವೈದ್ಯಕೀಯ ಕಾಲೇಜು ಆವರಣಕ್ಕೆ ಇನ್ಮುಂದೆ ವಾಕಿಂಗ್ ಹೋಗೋಕೂ ದುಡ್ಡು ಕೊಡಬೇಕು!

ಬೆಂಗಳೂರಿನ ಹೆಬ್ಬಾಳದ ಸರ್ಕಾರಿ ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿ ಅಪರಿಚಿತರ ಹಾವಳಿ ಹಾಗೂ ಅನೈತಿಕ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಹೊಸ ನಿಯಮ ಜಾರಿಗೆ ತಂದಿದೆ. ಇನ್ಮುಂದೆ ವಾಯು ವಿಹಾರಕ್ಕೆ ಬರುವ ಸ್ಥಳೀಯರು 100 ರೂ. ಶುಲ್ಕ ಪಾವತಿಸಿ ಕಡ್ಡಾಯವಾಗಿ ಪಾಸ್ ಪಡೆಯಬೇಕು. ನಿಗದಿತ ಸಮಯದಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಹೆಬ್ಬಾಳ ಪಶು ವೈದ್ಯಕೀಯ ಕಾಲೇಜು ಆವರಣಕ್ಕೆ ಇನ್ಮುಂದೆ ವಾಕಿಂಗ್ ಹೋಗೋಕೂ ದುಡ್ಡು ಕೊಡಬೇಕು!
ಹೆಬ್ಬಾಳ ಪಶು ವೈದ್ಯಕೀಯ ಕಾಲೇಜು ಆವರಣಕ್ಕೆ ಇನ್ಮುಂದೆ ವಾಕಿಂಗ್ ಹೋಗೋಕೂ ದುಡ್ಡು ಕೊಡಬೇಕು!
Edited By:

Updated on: Jun 30, 2026 | 8:24 AM

ಮುಖ್ಯಾಂಶಗಳು

  • ಇನ್ಮುಂದೆ ಪಶು ವೈದ್ಯಕೀಯ ಕಾಲೇಜು ಆವರಣ ಪ್ರವೇಶಕ್ಕೆ ಪಾಸ್ ಕಡ್ಡಾಯಗೊಳಿಸಲಾಗಿದೆ.
  • ಅಪರಿಚಿತರ ಓಡಾಟ ಮತ್ತು ಅನಧಿಕೃತ ಚಟುವಟಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ.
  • ವಾಯು ವಿಹಾರಿಗಳ ಪಾಸ್‌ಗೆ ನೂರು ರೂಪಾಯಿ ಪ್ರವೇಶ ಶುಲ್ಕ ನಿಗದಿ.

ಬೆಂಗಳೂರು, ಜೂನ್ 30: ರಾಜಧಾನಿಯ ಹೆಬ್ಬಾಳದಲ್ಲಿರುವ ಪ್ರಸಿದ್ಧ ಸರ್ಕಾರಿ ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿ ಇನ್ಮುಂದೆ ಸಾರ್ವಜನಿಕರು ಮುಕ್ತವಾಗಿ ವಾಯುವಿಹಾರ ಮಾಡಲೂ ಹಣ ಕೊಡಬೇಕೆಂಬ ಹೊಸ ರೂಲ್ಸ್ ಬಂದಿದೆ. ಆವರಣಕ್ಕೆ ಅಪರಿಚಿತರ ಪ್ರವೇಶ ಮತ್ತು ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕಾಲೇಜು ಆಡಳಿತ ಮಂಡಳಿಯು ಭದ್ರತೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದ್ದು, ಹೊಸ ಪ್ರವೇಶ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

ನಿಯಮ ಬದಲಾವಣೆ ಏಕೆ? ಇಲ್ಲಿದೆ ಅಸಲಿ ಕಾರಣ

ಹೆಬ್ಬಾಳದ ಸರ್ಕಾರಿ ಪಶು ವೈದ್ಯಕೀಯ ಕಾಲೇಜು ಸುಮಾರು 300 ಎಕರೆ ವಿಸ್ತಾರವಾದ ಹಸಿರು ಆವರಣವನ್ನು ಹೊಂದಿದೆ. ವಿಶಾಲವಾದ ಈ ಕ್ಯಾಂಪಸ್‌ಗೆ ನಿತ್ಯ ನೂರಾರು ಸ್ಥಳೀಯ ನಿವಾಸಿಗಳು ವಾಯು ವಿಹಾರಕ್ಕಾಗಿ (ವಾಕಿಂಗ್) ಬರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ವಾಯು ವಿಹಾರಿಗಳ ಸೋಗಿನಲ್ಲಿ ಅಪರಿಚಿತರು ಮತ್ತು ಕಿಡಿಗೇಡಿಗಳು ಕಾಲೇಜು ಆವರಣ ಪ್ರವೇಶಿಸುತ್ತಿರುವುದು ಹೆಚ್ಚಾಗಿತ್ತು. ಕ್ಯಾಂಪಸ್ ಒಳಗೆ ಅನೈತಿಕ ಚಟುವಟಿಕೆಗಳು, ಅನಧಿಕೃತ ವಾಹನ ನಿಲುಗಡೆ ಹಾಗೂ ವಿದ್ಯಾರ್ಥಿನಿಯರ ಮತ್ತು ಸಿಬ್ಬಂದಿಯ ಸುರಕ್ಷತೆಗೆ ಧಕ್ಕೆ ತರುವಂತಹ ಘಟನೆಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಕಾಲೇಜಿನ ಆಸ್ತಿಪಾಸ್ತಿ ರಕ್ಷಣೆಗೆ ಆಡಳಿತ ಮಂಡಳಿ ಮುಂದಾಗಿದೆ.

ಪಾಸ್ ಇದ್ದರೆ ಮಾತ್ರ ಎಂಟ್ರಿ: 100 ರೂ. ಶುಲ್ಕ ನಿಗದಿ

ಹೊಸ ನಿಯಮದ ಪ್ರಕಾರ, ವಾಯು ವಿಹಾರಕ್ಕಾಗಿ ಬರುವ ಸ್ಥಳೀಯ ನಿವಾಸಿಗಳು ಕಡ್ಡಾಯವಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರವೇಶ ಪಾಸ್ ಪಡೆದುಕೊಳ್ಳಬೇಕಾಗುತ್ತದೆ. ಪ್ರತಿ ಪಾಸ್​ಗೆ 100 ರೂ. ನಿಗದಿ ಮಾಡಿದ್ದು, ಈಗಾಗಲೇ 500 ಪಾಸ್​ಗಳು ವಿತರಣೆಯಾಗಿವೆ ಎಂದು ಹೇಳಲಾಗಿದೆ. ಪಾಸ್ ನೀಡಿದ ಮೇಲೂ ಕೇವಲ ಬೆಳಗ್ಗೆ ಮತ್ತು ಸಂಜೆಯ ನಿಗದಿತ ಸಮಯದಲ್ಲಿ ಮಾತ್ರ ವಾಕಿಂಗ್ ಮಾಡಲು ಅವಕಾಶವಿರಲಿದ್ದು, ಉಳಿದ ಸಮಯದಲ್ಲಿ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಲೇಜಿನ ಡೀನ್ ಡಾ. ನಾಗರಾಜು, ಕಾಲೇಜಿನ ಶೈಕ್ಷಣಿಕ ವಾತಾವರಣ ಮತ್ತು ಶಿಸ್ತನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆ. ಭದ್ರತೆಯನ್ನು ಬಲಪಡಿಸಲು ಮತ್ತು ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಈ ಪಾಸ್ ವ್ಯವಸ್ಥೆ ತರಲಾಗಿದೆ ಎಂದು ತಿಳಿಸಿದ್ದಾರೆ. ಆಡಳಿತ ಮಂಡಳಿಯ ಈ ಶಿಸ್ತುಕ್ರಮಕ್ಕೆ ಸ್ಥಳೀಯ ನಿವಾಸಿಗಳು ಹಾಗೂ ವಿದ್ಯಾರ್ಥಿ ವಲಯದಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.

Follow Us