ಬೆಂಗಳೂರು: ಕಾಂಗ್ರೆಸ್ ಮುಖಂಡ ಉಮಾಪತಿ ಗೌಡ ಸಹೋದರನ ಗನ್ ಮ್ಯಾನ್​ನಿಂದ ಸ್ನೇಹಿತನ ಮೇಲೆ ಫೈರಿಂಗ್, ವಶಕ್ಕೆ ಪಡೆದು ವಿಚಾರಣೆ

ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ, ನಿರ್ಮಾಪಕ ಉಮಾಪತಿ ಗೌಡ ಸಹೋದರ ದೀಪಕ್ ಗೌಡರಿಗೆ ಗನ್ ಮ್ಯಾನ್ ಆಗಿರುವ ಪ್ರಶಾಂತ್ ಕುಡಿದ ಅಮಲಿನಲ್ಲಿ, ಮತ್ತೊಬ್ಬ ಗನ್ ಮ್ಯಾನ್ ಅನಿಲ್ ಕುಮಾರ್ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಅನಿಲ್ ಕುಮಾರ್ ಕೂದಲೆಳೆ ಅಂತರದಲ್ಲಿ ಸೇಫ್ ಆಗಿದ್ದಾರೆ. ಗುಂಡು ಅನಿಲ್ ಸಮೀಪಿಸಿ ಪಾಸ್ ಆಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಗಳೂರು: ಕಾಂಗ್ರೆಸ್ ಮುಖಂಡ ಉಮಾಪತಿ ಗೌಡ ಸಹೋದರನ ಗನ್ ಮ್ಯಾನ್​ನಿಂದ ಸ್ನೇಹಿತನ ಮೇಲೆ ಫೈರಿಂಗ್, ವಶಕ್ಕೆ ಪಡೆದು ವಿಚಾರಣೆ
ಫೈರಿಂಗ್Image Credit source: kalinga TV
Follow us
| Updated By: ಆಯೇಷಾ ಬಾನು

Updated on:Aug 31, 2023 | 8:14 AM

ಬೆಂಗಳೂರು, ಆ.31: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(Chandrababu Naidu) ಅವರ ಮಗನಿಗೆ ಗನ್ ಮ್ಯಾನ್ ಆಗಿದ್ದ ವ್ಯಕ್ತಿಯಿಂದ ಸ್ನೇಹಿತನ ಮೇಲೆ ಫೈರಿಂಗ್(Firing) ಆಗಿದೆ. 21 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ, ಸದ್ಯ ಈಗ ಕಾಂಗ್ರೆಸ್ ಮುಖಂಡ ಉಮಾಪತಿ ಗೌಡ ಅವರ ಸಹೋದರನ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ಎಂಬ ಗನ್ ಮ್ಯಾನ್ ಕುಡಿದ ಅಮಲಿನಲ್ಲಿ ಅನಿಲ್ ಕುಮಾರ್ ಎಂಬ ಮತ್ತೊಬ್ಬ ಗನ್ ಮ್ಯಾನ್ ಮೇಲೆಯೇ ಗುಂಡು ಹಾರಿಸಿದ್ದಾರೆ. ಕುಡಿದ ಅಮಲಿನಲ್ಲಿ ಪಿಸ್ತೂಲ್​ನಿಂದ ಫೈರ್ ಮಾಡಿದ್ದಾರೆ. ಅದೃಷ್ಟವಶಾತ್ ಅನಿಲ್ ಕುಮಾರ್ ಕೂದಲೆಳೆ ಅಂತರದಲ್ಲಿ ಸೇಫ್ ಆಗಿದ್ದಾರೆ. ಗುಂಡು ಅನಿಲ್ ಸಮೀಪಿಸಿ ಪಾಸ್ ಆಗಿದೆ.

ಆಗಸ್ಟ್ 27 ರ ರಾತ್ರಿ‌ 12 ಗಂಟೆಗೆ ಜಯನಗರ 4ನೇ ಬ್ಲಾಕ್​ನಲ್ಲಿರುವ ಪಿಜಿಯಲ್ಲಿ ಕುಡಿದ ಅಮಲಿನಲ್ಲಿದ್ದ ಗನ್ ಮ್ಯಾನ್ ಪ್ರಶಾಂತ್ ಅವರು, ಮತ್ತೊಬ್ಬ ಗನ್ ಮ್ಯಾನ್ ಅನಿಲ್ ಕುಮಾರ್ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಗೂ ಮುನ್ನ ಆಗಸ್ಟ್ 27ರ ಸಂಜೆ ಬಾರ್ ಗೆ ಹೋಗಿ ಪ್ರಶಾಂತ್ ಮತ್ತು ಅನಿಲ್ ಮದ್ಯ ಖರೀದಿಸಿದ್ದರು. ಇಬ್ಬರು ಪಿಜಿ ರೂಮ್​ನಲ್ಲೇ ಕುಡಿದು ಪಾರ್ಟಿ ಮಾಡಿದ್ರು. ರಾತ್ರಿ 10.30ಕ್ಕೆ ಊರಿನ ಗೆಳೆಯ ಅಮಿತ್ ಎಂಬಾತ ಇವರ ರೂಮ್​ಗೆ ಬಂದಿದ್ದರು. ಅಮಿತ್ ಪಿಜಿ ಹೊರಗೆ ಮಾತಾಡಿಕೊಂಡು ನಿಂತಿದ್ದ. ಪ್ರಶಾಂತ್ ಪಿಜಿಯಲ್ಲಿ ಊಟ ಮಾಡಿಕೊಂಡಿದ್ದರು. ಈ ವೇಳೆ ತನ್ನ ಪತ್ನಿ ಜೊತೆಗೆ ಫೋನ್ ನಲ್ಲಿ ಕಿರುಚಾಡುತ್ತಾ ಮಾತನಾಡುತ್ತಿದ್ದರು. ಆಗ ಕಿರುಚಾಟ ಕೇಳಿ ಬಂದ ಅನಿಲ್ ಅವರು ಯಾಕೆ ಕಿರುಚಾಡ್ತಿಯ ನಿಧಾನವಾಗಿ ಮಾತನಾಡು ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಪ್ರಶಾಂತ್ ಅವರು ತಮ್ಮ ಬೀರುವಿನಲ್ಲಿದ್ದ ಪಿಸ್ತೂಲ್ ತೆಗೆದು ಅನಿಲ್ ಮೇಲೆ ಫೈರ್ ಮಾಡಿದ್ದಾರೆ. ಅದೃಷ್ಟವಶಾತ್ ಅನಿಲ್ ಕುಮಾರ್​ಗೆ ಸಮೀಪಿಸಿ ಗುಂಡು ಪಾಸ್ ಆಗಿದೆ. ಅಷ್ಟೇ ಅಲ್ಲದೆ ಕರೆಂಟ್ ಸ್ವಿಚ್ ಮತ್ತು ಬಾತ್ ರೂಮ್ ಮಿರರ್ ಒಡೆದು ಪ್ರಶಾಂತ್ ಹುಚ್ಚಾಟ ನಡೆಸಿದ್ದಾರೆ. ಸದ್ಯ ಪಿಜಿಯಲ್ಲಿ ನಡೆದ ಘಟನೆ ಬಗ್ಗೆ ಅನಿಲ್ ಅವರು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಆಧಾರ ಮೇಲೆ ಫೈರಿಂಗ್ ಮಾಡಿದ್ದ ಪ್ರಶಾಂತ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿ ಕಳಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್: ರೆಸ್ಟೋರೆಂಟ್​ವೊಂದರ ಮ್ಯಾನೇಜರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಗನ್ ಮ್ಯಾನ್ ಪ್ರಶಾಂತ್, 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 2015ರಲ್ಲಿ ನಿವೃತ್ತಿಯಾಗಿ ವಾಪಸ್ಸಾಗಿದ್ದರು. ನಂತರ ವಿವಿಐಪಿಗಳಿಗೆ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮಗ ನಾ.ರಾ ಲೋಕೇಶ್ ಅವರ ಗನ್ ಮ್ಯಾನ್​ ಆಗಿ ಕೆಲಸ ಮಾಡಿದ್ದಾರೆ. ಟಿಡಿಪಿ ಪಕ್ಷದ ಹಾಲಿ ಯುವ ನಾಯಕ ನಾರಾ ಲೋಕೇಶ್ ಅವರಿಗೆ ಗನ್ ಮ್ಯಾನ್ ಆಗಿದ್ದರು. ನಂತರ ಈಗ ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ, ನಿರ್ಮಾಪಕ ಉಮಾಪತಿ ಗೌಡ ಸಹೋದರ ದೀಪಕ್ ಗೌಡರಿಗೆ ಗನ್ ಮ್ಯಾನ್ ಆಗಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಳೆ ಕ್ಲಿಕ್ ಮಾಡಿ

Published On - 7:48 am, Thu, 31 August 23