ಪ್ಯಾಲೆಸ್ತೀನ್​​ಗೆ ಬೆಂಬಲಿಸಿ ಬೆಂಗಳೂರಿನಲ್ಲಿ ಮೌನ ಪಾದಯಾತ್ರೆ ಮಾಡಿದ್ದವರ ವಿರುದ್ಧ ಎಫ್​ಐಆರ್

ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕಳೆದ ಭಾನುವಾರ ಮೌನ ಪ್ರತಿಭಟನೆ ನಡೆಸಿದ ಜನರ ಗುಂಪಿನ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರತಿಭಟನಾಕಾರರು ಅನುಮತಿ ಪಡೆಯದೆ ಮೌನ ಪಾದಯಾತ್ರೆ ನಡೆಸಿದ್ದಾರೆ ಎಂದು ಎಫ್​ಐಆರ್ ದಾಖಲಿಸಲಾಗಿದೆ.

ಪ್ಯಾಲೆಸ್ತೀನ್​​ಗೆ ಬೆಂಬಲಿಸಿ ಬೆಂಗಳೂರಿನಲ್ಲಿ ಮೌನ ಪಾದಯಾತ್ರೆ ಮಾಡಿದ್ದವರ ವಿರುದ್ಧ ಎಫ್​ಐಆರ್
ಸಾಂದರ್ಭಿಕ ಚಿತ್ರ

Updated on: Nov 09, 2023 | 9:25 AM

ಬೆಂಗಳೂರು, ನ.09: ಇಸ್ರೇಲ್-ಹಮಾಸ್ (Israel Hamas war) ಯುದ್ಧ ಮುಗಿಯುವ ಸೂಚನೆಯೇ ಸಿಗುತ್ತಿಲ್ಲ. ಜುದಾಯ ಮತ್ತು ಸಮಾರಿಯಾದಲ್ಲಿ 37 ಪ್ಯಾಲೆಸ್ತೀನಿಯನ್ನರನ್ನ (Palestine) ಸೆರೆಹಿಡಿಯಲಾಗಿದೆ. ಸದ್ಯ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಮೌನ ಪ್ರತಿಭಟನೆ ನಡೆಸಿದ ಜನರ ಗುಂಪಿನ ವಿರುದ್ಧ ಬೆಂಗಳೂರು ಪೊಲೀಸರು (Bengaluru Police) ಎಫ್‌ಐಆರ್ ದಾಖಲಿಸಿದ್ದಾರೆ. ಪ್ರತಿಭಟನಾಕಾರರು ಅನುಮತಿ ಪಡೆಯದೆ ಮೌನ ಪಾದಯಾತ್ರೆ ನಡೆಸಿದ್ದಾರೆ ಎಂದು ಎಫ್​ಐಆರ್ ದಾಖಲಿಸಲಾಗಿದೆ.

ಕಳೆದ ಭಾನುವಾರ ಸಂಜೆ ಪ್ಯಾಲೆಸ್ತೀನ್​​ಗೆ ಬೆಂಬಲ ಸೂಚಿಸಿ ಫಲಕಗಳು ಮತ್ತು ಪೋಸ್ಟರ್‌ಗಳನ್ನು ಹಿಡಿದು ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿ ಮೌನ ಪಾದಯಾತ್ರೆ ನಡೆಸಿದ ಜನರ ಗುಂಪು ಪ್ರತಿಭಟನೆಯನ್ನು ನಡೆಸಲು ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೈಕೋರ್ಟ್ ಆದೇಶದಂತೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅನುಮತಿ ಇದೆ. ಆದರೆ ಕೆಲ ಜನರ ಗುಂಪು ಪೋಸ್ಟರ್​ಗಳನ್ನು ಹಿಡಿದು ಮೌನ ಮೆರವಣಿಗೆ ಮಾಡಿದ್ದಾರೆ. ಇದರಿಂದ ಪಾದಚಾರಿ ಸಂಚಾರಕ್ಕೂ ಅಡ್ಡಿಯಾಗಿದೆ. ಆದ್ದರಿಂದ, ಸ್ವೀಕರಿಸಿದ ದೂರಿನ ಆಧಾರದ ಮೇಲೆ, ಪ್ರತಿಭಟನಾಕಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 149 (ಕಾನೂನುಬಾಹಿರ ಸಭೆ), 188 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅವಿಧೇಯತೆ), 283 (ಸಾರ್ವಜನಿಕ ಮಾರ್ಗದಲ್ಲಿ ಅಥವಾ ನ್ಯಾವಿಗೇಷನ್ ಮಾರ್ಗದಲ್ಲಿ ಅಪಾಯ ಅಥವಾ ಅಡಚಣೆ) 290 (ಸಾರ್ವಜನಿಕ ಉಪದ್ರವ) ಮತ್ತು 291 (ತಡೆಯನ್ನು ನಿಲ್ಲಿಸಲು ತಡೆಯಾಜ್ಞೆಯ ನಂತರ ಉಪದ್ರವವನ್ನು ಮಾಡುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: Bengaluru News: ಕಲ್ಲಂಗಡಿಯನ್ನು ಮುಕ್ತಗೊಳಿಸಿ ಎಂಬ ಸಂದೇಶದೊಂದಿಗೆ ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ಚರ್ಚ್ ಸ್ಟ್ರೀಟ್‌ನಲ್ಲಿ ಮೌನ ಪ್ರತಿಭಟನೆ

ಘಟನೆ ಹಿನ್ನೆಲೆ

ಭಾನುವಾರ (ನ.05) ಸಂಜೆ ಚರ್ಚ್ ಸ್ಟ್ರೀಟ್‌ನಲ್ಲಿ 100 ಕ್ಕೂ ಹೆಚ್ಚು ಜನರು ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ ಭಿತ್ತಿಪತ್ರಗಳು ಮತ್ತು ಫಲಕಗಳನ್ನು ಪ್ರದರ್ಶಿಸಿ ಮೌನ ನಡಿಗೆ ನಡೆಸಿದ್ದರು. ಹೋರಾಟಗಾರರು ಪೋಸ್ಟರ್‌ಗಳಲ್ಲಿ ಕಲ್ಲಂಗಡಿಗಳ ಚಿತ್ರಗಳನ್ನು ಪ್ರದರ್ಶಿಸಿದರು. ಪ್ಯಾಲೆಸ್ತೀನ್‌ ಧ್ವಜದ ಬಣ್ಣಕ್ಕೆ ಸಾಂಕೇತಿಕವಾಗಿ ಕಲ್ಲಂಗಡಿ ಹಣ್ಣಿನ್ನು ಪ್ರದರ್ಶಿಸಿ “ಕಲ್ಲಂಗಡಿಯನ್ನು ಮುಕ್ತಗೊಳಿಸಿ” ಎಂಬ ಸಂದೇಶದೊಂದಿಗೆ ಮೌನ ಪ್ರತಿಭಟನೆ ಮಾಡಿದ್ರು.

ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಚರ್ಚ್ ಸ್ಟ್ರೀಟ್ ಬಳಿ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ನೂರಾರು ಮಂದಿ ಜಮಾಯಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಅವರಲ್ಲಿ ಕೆಲವರು ತಮ್ಮ ಪೋಸ್ಟರ್‌ಗಳಲ್ಲಿ ಕಲ್ಲಂಗಡಿ ಹಣ್ಣಿನ ಹಿಂದಿನ ಸಂದೇಶ ಜನರಿಗೆ ಮುಟ್ಟಲಿ ಎಂಬ ಉದ್ದೇಶದಿಂದ ಕೆಲವೊತ್ತು ನಿಂತು ಮುಂದೆ ಸಾಗಿದರು. ಆದರೆ ಹೋರಾಟಗಾರರು ಯಾವುದೇ ಘೋಷಣೆಗಳನ್ನು ಕೂಗದೆ ಮೌನಾಚರಣೆ ಮೂಲಕ ಭಿತ್ತಿಚಿತ್ರ ಪ್ರದರ್ಶಿಸಿ ಮೆರವಣಿಗೆಯನ್ನು ಮಾಡಿದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:25 am, Thu, 9 November 23