AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

33 ರೌಡಿಶೀಟರ್‌ಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಿದ ಪೊಲೀಸರು; ಇಬ್ಬರು ರೌಡಿಗಳ ವಿರುದ್ಧ ಎಫ್ಐಆರ್ ದಾಖಲು

ಮಾದಕ ವಸ್ತು ಸೇವನೆ ಶಂಕೆಯ ಆಧಾರದ ಮೇಲೆ 33 ಜನ ರೌಡಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ಸದ್ಯ ಇಬ್ಬರು ರೌಡಿಗಳ ವಿರುದ್ಧ ಚಾಮರಾಜಪೇಟೆ, ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

33 ರೌಡಿಶೀಟರ್‌ಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಿದ ಪೊಲೀಸರು; ಇಬ್ಬರು ರೌಡಿಗಳ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು ಪೊಲೀಸರು
TV9 Web
| Edited By: |

Updated on:Aug 01, 2021 | 10:56 AM

Share

ಬೆಂಗಳೂರು: ನಗರದಲ್ಲಿ ಅಪರಾಧ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಪಶ್ಚಿಮ ವಿಭಾಗದ ಪೊಲೀಸರು (Bengaluru Police), ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಮಾದಕ ವಸ್ತು ಸೇವನೆ ಶಂಕೆಯ ಆಧಾರದ ಮೇಲೆ 33 ಜನ ರೌಡಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ಸದ್ಯ ಇಬ್ಬರು ರೌಡಿಗಳ (Rowdies) ವಿರುದ್ಧ ಚಾಮರಾಜಪೇಟೆ, ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಮೋಯಿನ್ ಪಾಷಾ ಮತ್ತು ಬೋಂಡಾ ಅನ್ವರ್ ಪಾಷಾರನ್ನು ಬಂಧಿಸಲಾಗಿದೆ.

ಚಾಮರಾಜಪೇಟೆ ಮತ್ತು ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದು, ರೌಡಿಗಳು ಹಾಗೂ ಗಾಂಜಾ ಪೆಡ್ಲರ್ಸ್ ಸೇರಿ ಒಟ್ಟು 63 ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹಲವರು ಮಾದಕ ವಸ್ತುವಿನ ಮತ್ತಲ್ಲಿದ್ದದ್ದು ಬೆಳಕಿಗೆ ಬಂದಿದೆ. ಅಲ್ಲದೆ ರೌಡಿಗಳ ಮನೆಯಲ್ಲಿ ಮಾರಕಾಸ್ತ್ರಗಳು ಮತ್ತು ಗಾಂಜಾ ಜಪ್ತಿ ಮಾಡಿದ್ದು, 63 ಕಡೆಗಳ ದಾಳಿ ಪೈಕಿ, 38 ಜನರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬ್ಯಾಟರಾಯನಪುರ ಪೊಲೀಸರು ಕೌಷಿಕ್​,ವೀರ, ಜೈಕಾರ, ರಾಜು ಮತ್ತು ಕಾರ್ತಿಕ್  ಸೇರಿ 7 ಜನರನ್ನು ಬಂಧಿಸಿದ್ದಾರೆ.

ನಿನ್ನೆ ಪಶ್ಚಿಮ ವಿಭಾಗದ ಪೊಲೀಸರಿಂದ ರೌಡಿ ಶೀಟರ್ ಮನೆಗಳ ಮೇಲೆ ದಾಳಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನ್ಲಾಕ್ ಬಳಿಕ ಮಿತಿಮೀರಿರುವ ಸಮಾಜಘಾತುಕ ಶಕ್ತಿಗಳನ್ನು ಹೆಡೆಮುರಿ ಕಟ್ಟಲು ಪಣತೊಟ್ಟಿರುವ ಪೊಲೀಸರು ಕಳೆದ ಕೆಲ ದಿನಗಳಿಂದ ಕಟ್ಟುನಿಟ್ಟಾಗಿ ಕಾರ್ಯಾಚರಣೆಗೆ ಇಳಿದು ಬಿಸಿ ಮುಟ್ಟಿಸುತ್ತಿದ್ದಾರೆ. ನಿನ್ನೆ ಮುಂಜಾನೆಯೂ ಪುಡಾರಿಗಳ ಮನೆ ಮೇಲೆ ದಾಳಿ ಮಾಡಿರುವ ಆಗ್ನೇಯ ವಿಭಾಗ ಪೊಲೀಸರು ಒಟ್ಟು 18 ಜನರನ್ನು ವಶಕ್ಕೆ ಪಡೆದಿದ್ದಾರೆ. ಕುಖ್ಯಾತ ರೌಡಿಗಳಾದ ಸುಜೀತ್, ತೇಜಸ್, ಕಿಶೋರ್, ಸುರೇಶ್, ಅತಾವುಲ್ಲಾ, ಆನಂದ್, ಗೌತಮ್, ಮಣಿಕಾಂತ್, ಆನಂದ್ ಅಲಿಯಾಸ್ ಬ್ರಿಡ್ಜ್, ಶಿವ ಅಲಿಯಾಸ್ ಹಂದಿ ಶಿವ, ಅಂಬರೀಶ್, ಗೆಜ್ಜೆ ವೆಂಕಟೇಶ್ ಸೇರಿದಂತೆ 63 ರೌಡಿಶೀಟರ್ ಮನೆ ಮೇಲೆ ದಾಳಿ ಮಾಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿರುವ ಪೊಲೀಸರು ಆ ಪೈಕಿ 18 ಜನರನ್ನು ವಶಕ್ಕೆ ಪಡೆದಿದ್ದಾರೆ. ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ ನಿನ್ನೆ ಬೆಳ್ಳಂಬೆಳಗ್ಗೆ ದಾಳಿ ಮಾಡಲಾಗಿದ್ದು, ಪುಂಡಾಟ ನಡೆಸದಂತೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಪುಡಾರಿಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಪುಡಾರಿಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಎಚ್ಚೆತ್ತ ಪೊಲೀಸರು ಕಠಿಣ ಕ್ರಮಕ್ಕೆ ಸಿದ್ಧರಾಗಿದ್ದಾರೆ. ರೌಡಿಗಳನ್ನು ನಿಯಂತ್ರಿಸುವ ಸಲುವಾಗಿ ಸ್ಥಳೀಯವಾಗಿ ಖಾಕಿ ಪಡೆಗೆ ಚುರುಕು ಮುಟ್ಟಿಸಲು ಮುಂದಾದ ಪೊಲೀಸ್ ಕಮಿಷನರ್ (Bengaluru Police Commissioner), ತಳಮಟ್ಟದಲ್ಲಿ ಪೊಲೀಸಿಂಗ್ ವ್ಯವಸ್ಥೆಯನ್ನು ಬಿಗಿಗೊಳಿಸಲು ಮುಂದಾಗಿದ್ದಾರೆ. ಸರಗಳ್ಳತನ, ಸುಲಿಗೆ, ದರೋಡೆ, ಪುಂಡರ ಹಾವಳಿ ತಪ್ಪಿಸಲು ಹೊಸ ಕ್ರಮ ರೂಪಿಸುತ್ತಿರುವ ಪೊಲೀಸ್ ಕಮಿಷನರ್ ಹೊಯ್ಸಳ ಮತ್ತು ಚೀತಾ ವಾಹನಗಳಿಗೆ ಚುರುಕು ಮುಟ್ಟಿಸಿ ಪ್ರತಿ ಏರಿಯಾದಲ್ಲೂ ಕಣ್ಗಾವಲಿಡಲು ಸೂಚಿಸಿದ್ದಾರೆ. ಹೊಯ್ಸಳ ಮತ್ತು ಚೀತಾ ರೌಂಡ್ಸ್ ಮಾಡುವ ಏರಿಯಾದಲ್ಲಿ ಏನೇ ಆದರೂ ಅವರೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿದ್ದು, ಪೊಲೀಸರು (Bengaluru Police) ಶಿಸ್ತುಬದ್ಧ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.

ಅನ್ಲಾಕ್ ಬಳಿಕ ಬೆಂಗಳೂರಿನಲ್ಲಿ ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸ ಹೆಚ್ಚಾಗಿರುವುದರಿಂದ ಪೊಲೀಸರು ಕಠಿಣ ಕ್ರಮದ ಮೊರೆ ಹೋಗಿದ್ದು, ಹೊಯ್ಸಳ ಮತ್ತು ಚೀತಾ ವಾಹನಗಳನ್ನು ಕಮಾಂಡ್ ಸೆಂಟರ್ ಮೂಲಕ ಅಪರೇಟ್ ಮಾಡಲು ನಿರ್ಧರಿಸಿದ್ದಾರೆ. ಠಾಣೆ ಸುಪರ್ದಿಯಿಂದ ಕಮಾಂಡ್‌ ಸೆಂಟರ್ ವ್ಯಾಪ್ತಿಗೆ ಹೊಯ್ಸಳ ಮತ್ತು ಚೀತಾ ವಾಹನಗಳನನ್ನು ಪಡೆಯಲು ಮುಂದಾದ ಕಮಿಷನರ್ ಕಮಲ್ ಪಂತ್, ಪುಂಡ ಪೋಕರಿಗಳ ಪುಂಡಾಟಕ್ಕೆ ಸಂಪೂರ್ಣ ತಡೆ ಒಡ್ಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ: ವಸಿಷ್ಠ ಕೋಆಪರೇಟಿವ್ ಬ್ಯಾಂಕ್‌ ನಿರ್ದೇಶಕರ ಮನೆ ಮೇಲೆ ಪೊಲೀಸರ ದಾಳಿ; ದಾಖಲೆ ವಶಕ್ಕೆ

ಹು- ಧಾ ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸಿದ್ದ ರೌಡಿಗಳಿಗೆ ಶಾಕ್ ಕೊಟ್ಟ ಪೊಲೀಸ್ ಕಮೀಷನರ್ ಲಾಭುರಾಮ್

Published On - 9:59 am, Sun, 1 August 21