ಸೆ.11ರಂದು ಖಾಸಗಿ ಸಾರಿಗೆ ಮುಷ್ಕರ; ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸರ್ಕಾರಿ ಸಾರಿಗೆ, ಪೊಲೀಸರಿಗೆ ರಾಮಲಿಂಗಾರೆಡ್ಡಿ ಸೂಚನೆ

ಸೆ.11ಕ್ಕೆ ಖಾಸಗಿ ಸಾರಿಗೆ ವಾಹನ ಮಾಲೀಕರು ಹಾಗು ಚಾಲಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಸೆಪ್ಟೆಂಬರ್ 11 ರಂದು ಜನ ಸಾಮಾನ್ಯರಿಗೆ, ಸ್ಕೂಲ್ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಬಿಎಂಟಿಸಿ, ಕೆಎಸ್ಆರ್​ಟಿಸಿ ಎಂಡಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಕೊಟ್ಟಿದ್ದಾರೆ.

ಸೆ.11ರಂದು ಖಾಸಗಿ ಸಾರಿಗೆ ಮುಷ್ಕರ; ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸರ್ಕಾರಿ ಸಾರಿಗೆ, ಪೊಲೀಸರಿಗೆ ರಾಮಲಿಂಗಾರೆಡ್ಡಿ ಸೂಚನೆ
ಸಚಿವ ರಾಮಲಿಂಗಾ ರೆಡ್ಡಿ
Edited By: ಆಯೇಷಾ ಬಾನು

Updated on: Sep 07, 2023 | 12:17 PM

ಬೆಂಗಳೂರು, ಸೆ.07: ಇದೇ ತಿಂಗಳ 11ಕ್ಕೆ ಖಾಸಗಿ ಸಾರಿಗೆ ವಾಹನ ಮಾಲೀಕರು ಹಾಗು ಚಾಲಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ(Bengaluru Bandh). ಹೀಗಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalinga Reddy) ಅವರು ಫುಲ್ ಅಲರ್ಟ್ ಆಗಿದ್ದು ಬೆಳಗ್ಗಿನಿಂದಲೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಹಾಗೂ ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನು ನೀಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಬಿಎಂಟಿಸಿ ಎಂಡಿ, ಕೆಎಸ್ಆರ್​ಟಿಸಿ ಎಂಡಿ, ಸಾರಿಗೆ ಇಲಾಖೆಯ ಕಮೀಷನರ್ ಹಾಗೂ ‌ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಚಿವ ರಾಮಲಿಂಗರೆಡ್ಡಿ ಅವರು ಮಾತುಕತೆ ನಡೆಸಿದ್ದು ಪ್ರತಿಭಟನೆಯಿಂದಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಖಡಕ್ ಸೂಚನೆಗಳನ್ನು ನೀಡಿದ್ದಾರೆ.

ಸಾರಿಗೆ ಸಚಿವರು ಕೊಟ್ಟ ಸೂಚನೆಗಳೇನು?

ಸೆಪ್ಟೆಂಬರ್ 11 ರಂದು ಜನ ಸಾಮಾನ್ಯರಿಗೆ, ಸ್ಕೂಲ್ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಬಿಎಂಟಿಸಿ, ಕೆಎಸ್ಆರ್​ಟಿಸಿ ಎಂಡಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಕೊಟ್ಟಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಟೋ, ಕ್ಯಾಬ್​ಗಳು ಸಂಚಾರ ಮಾಡ್ತಿದ್ದ ರೂಟ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್​ಗಳನ್ನು ರೋಡಿಗಿಳಿಸುವಂತೆ ಸೂಚನೆ ನೀಡಿದ್ದಾರೆ. ಸೆ.11 ರಂದು ರಾಜಧಾನಿಯಲ್ಲಿ ಸ್ಕೂಲ್, ಕಾಲೇಜು ಮಕ್ಕಳಿಗೆ ಎಕ್ಸಾಂ, ಟೆಸ್ಟ್ ಏನಾದರೂ ಇದ್ದರೆ ಅಂತಹ ಸ್ಕೂಲ್ ಕಾಲೇಜಿಗೆ ಕೆಎಸ್​ಆರ್​ಟಿಸಿ ಬಸ್ಸುಗಳನ್ನು ನಿಯೋಜನೆ ಮಾಡಬೇಕು. ಇಂದು ಬೆಂಗಳೂರಿನ ಎಲ್ಲಾ ಸ್ಕೂಲ್, ಕಾಲೇಜುಗಳಿಂದ ಮಾಹಿತಿ ಪಡೆದುಕೊಂಡು ಆಯಾ ಸ್ಕೂಲ್, ಕಾಲೇಜುಗಳಿಗೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳನ್ನು ಕಳಿಸಬೇಕು. ರೋಗಿಗಳಿಗೆ, ಮಹಿಳೆಯರಿಗೆ ಸಮಸ್ಯೆ ಆಗದ ರೀತಿಯಲ್ಲಿ ಆಸ್ಪತ್ರೆ, ಗಾರ್ಮೆಂಟ್ಸ್ ಬಳಿ ಹೆಚ್ಚಿನ ಬಸ್ ವ್ಯವಸ್ಥೆ ‌ಮಾಡಬೇಕೆಂದು ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್​ 11ರಂದು ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಬಂದ್​ಗೆ ಕರೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಇತ್ತ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ಸಚಿವ, ಸೆಪ್ಟೆಂಬರ್ 10ರ ಭಾನುವಾರ ರಾತ್ರಿಯಿಂದಲೇ ಫಿಲ್ಡಿಗಿಳಿಯುವಂತೆ ಸೂಚಿಸಿದ್ದಾರೆ. ರಾತ್ರಿ ‌12 ರಿಂದ ಖಾಸಗಿ ‌ಸಾರಿಗೆ ಬಂದ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ಕಾರ್ಯನಿರ್ವಹಿಸುವಂತೆ ಲಾ ಅಂಡ್ ಅರ್ಡರ್ ಮತ್ತು ಟ್ರಾಫಿಕ್ ಪೊಲೀಸರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬಲವಂತವಾಗಿ ಯಾರು ಕೂಡ ಬಂದ್ ಮಾಡಿಸಲು ಮುಂದಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಕ್ರಮಕೈಗೊಳ್ಳಲು‌ ಸೂಚನೆ ನೀಡಿದ್ದಾರೆ. ಕೆಲವೊಂದಷ್ಟು ಸಂಘಟನೆಗಳು ಬಂದ್​ನಲ್ಲಿ ಭಾಗಿಯಾಗ್ತಿಲ್ಲ ಅಂತಹ ಸಂಘಟನೆಗಳ ಆಟೋ, ಕ್ಯಾಬ್, ಬಸ್ ಚಾಲಕರಿಗೆ ಅಂದು ಕೆಲಸ ಮಾಡಲು ಭದ್ರತೆ ನೀಡಬೇಕು ಎಂದು ಪ್ರತಿಭಟನೆಯ ದಿನ ಯಾವ ರೀತಿ ತಯಾರಿ ನಡೆಸಬೇಕೆಂಬ ಬಗ್ಗೆ ಸಚಿವರು ಸೂಚನೆ ನೀಡಿದ್ದಾರೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಟಿವಿ9ಗೆ ಮಾಹಿತಿ ಸಿಕ್ಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:59 am, Thu, 7 September 23

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us