ಬೆಂಗಳೂರು ರೋಡ್ ರೇಜ್: ಕಾಲೇಜು ವಿದ್ಯಾರ್ಥಿ ಮೇಲೆ ನಡುರಸ್ತೆಯಲ್ಲೇ ಚಾಕು ಇರಿತ!

ಬೆಂಗಳೂರಿನಲ್ಲಿ ಸೈಡ್ ಕೊಡುವ ಕ್ಷುಲ್ಲಕ ವಿಚಾರಕ್ಕೆ ರೋಡ್ ರೇಜ್ ಉಲ್ಬಣಿಸಿದ್ದು, ಪಾರ್ಟ್ ಟೈಮ್ ಬೈಕ್ ಟ್ಯಾಕ್ಸಿ ನಡೆಸುತ್ತಿದ್ದ 17 ವರ್ಷದ ಪಿಯುಸಿ ವಿದ್ಯಾರ್ಥಿಗೆ ದುಷ್ಕರ್ಮಿಗಳು ನಡುರಸ್ತೆಯಲ್ಲೇ ಚಾಕುವಿನಿಂದ ಭೀಕರವಾಗಿ ಇರಿದಿದ್ದಾರೆ. ಎದೆ ಮತ್ತು ಕುತ್ತಿಗೆಗೆ ತೀವ್ರ ಗಾಯಗೊಂಡಿರುವ ಯುವಕ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬೆಂಗಳೂರು ರೋಡ್ ರೇಜ್: ಕಾಲೇಜು ವಿದ್ಯಾರ್ಥಿ ಮೇಲೆ ನಡುರಸ್ತೆಯಲ್ಲೇ ಚಾಕು ಇರಿತ!
ಬೆಂಗಳೂರಿನಲ್ಲಿ ರೋಡ್ ರೇಜ್

Updated on: May 31, 2026 | 2:31 PM

ಬೆಂಗಳೂರು, ಮೇ 31: ನಗರದಲ್ಲಿ ವಾಹನ ಸವಾರರ ಅತಿರೇಕದ ವರ್ತನೆ ಮತ್ತು ಆಕ್ರೋಶ ಮತ್ತೊಂದು ಭೀಕರ ಘಟನೆಗೆ ಕಾರಣವಾಗಿದೆ. ರಸ್ತೆ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಸಂಚಾರ ವಿವಾದವೊಂದು (Road Rage) ವಿಕೋಪಕ್ಕೆ ತಿರುಗಿ, ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಆಘಾತಕಾರಿ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಮುಖ್ಯಾಂಶಗಳು

  • ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದ ಪಿಯುಸಿ ವಿದ್ಯಾರ್ಥಿಗೆ ಚಾಕುವಿನಿಂದ ಭೀಕರವಾಗಿ ಇರಿಯಲಾಗಿದೆ.
  • ಸೈಡ್ ಕೊಡುವ ಕ್ಷುಲ್ಲಕ ವಿಚಾರಕ್ಕೆ ಮೂವರು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.
  • ಐಸಿಯುನಲ್ಲಿ ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳಿಗಾಗಿ ಪೊಲೀಸರ ಜಾಲ ಬೀಸಿದ್ದಾರೆ.

ಯುವಕನ ವಾಹನವನ್ನ ಅಡ್ಡಗಟ್ಟಿದ ದುಷ್ಕರ್ಮಿಗಳು

ದ್ವಿತೀಯ ಪಿಯುಸಿ ಓದುತ್ತಿರುವ 17 ವರ್ಷದ ಯುವಕನ ಮೇಲೆ ದುಷ್ಕರ್ಮಿಗಳು ನಡುರಸ್ತೆಯಲ್ಲೇ ದಾಳಿ ಮಾಡಿದ್ದಾರೆ. ಪಾರ್ಟ್​ ಟೈಮ್ ಬೈಕ್ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿರುವ ಆತ ತನ್ನ ಸ್ನೇಹಿತರೊಂದಿಗೆ ಮಾಮೂಲಿಯಾಗಿ ತೆರಳುವ ಜ್ಯೂಸ್ ಅಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಈ ವೇಳೆ ಬೈಕ್ ಸವಾರನೊಬ್ಬ ಸೈಡ್ ಕೊಡುವಂತೆ ಹಲವು ಬಾರಿ ಹಾರ್ನ್​ ಮಾಡಿದ್ದಾನೆ. ವಿದ್ಯಾರ್ಥಿಯೂ ಜಾಸ್ತಿ ತಲೆ ಕೆಡಿಸಿಕೊಳ್ಳದೆ ದಾರಿ ಬಿಟ್ಟು ಕೊಟ್ಟಿದ್ದಾನೆ.

ಆದರೂ ಸುಮ್ಮನಿರದ ಸವಾರ, ಕಿರುಚಾಡಿ ಜಗಳಕ್ಕಿಳಿದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಅಲ್ಲಿಂದ ಕಾಲ್ಕಿತ್ತ ಸವಾರ ಇನ್ನೋರ್ವ ಬೈಕ್ ಸವಾರನಿಂದಿಗೆ ಬಂದು ವಿದ್ಯಾರ್ಥಿಯ ವಾಹನವನ್ನು ಅಡ್ಡಗಟ್ಟಿದ್ದಾನೆ. ಆತನ ಬೈಕ್ ಕೀಲಿಯನ್ನು ಕಸಿದುಕೊಂಡ ಇಬ್ಬರೂ ದುಷ್ಕರ್ಮಿಗಳು ವಿದ್ಯಾರ್ಥಿಯನ್ನು ಸಮೀಪದ ಬಾರ್ ಒಂದರ ಬಳಿ ಕರೆದುಕೊಂಡು ಹೋಗಿದ್ದಾರೆ. ಯಾರಿಲ್ಲದ ಸಮಯ ಸಾಧಿಸಿ ವಿದ್ಯಾರ್ಥಿಗೆ ದೊಣ್ಣೆಯಿಂದ ಥಳಿಸಲು ಮುಂದಾಗಿದ್ದಾರೆ. ಈ ವೇಳೆ ವಿದ್ಯಾರ್ಥಿಯ ಸಂಬಂಧಿಕರೊಬ್ಬರು ಮಧ್ಯ ಪ್ರವೇಶಿಸಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಚಾಕುವಿನಿಂದ ಇರಿತ

ಬದುಕಿತು ಬಡ ಜೀವ ಎಂದು ವಿದ್ಯಾರ್ಥಿ ಸ್ವಲ್ಪ ದೂರ ಕ್ರಮಿಸಿದಾಗ ಮತ್ತೆ ಅದೇ ಇಬ್ಬರು ಬೈಕ್ ಸವಾರರು ಇನ್ನೋರ್ವನೊಂದಿಗೆ ನಿಂತಿದ್ದರು. ಈತ ಬಂದ ಕೂಡಲೆ ಅವನನ್ನು ರಸ್ತೆ ಬದಿಗೆ ಎಳೆದುಕೊಂಡು ಬಂದು ಚಾಕುವಿನಿಂದ ಎದೆ, ಕುತ್ತಿಗೆ, ಬೆನ್ನು ಎಲ್ಲೆಂದರಲ್ಲಿ ಇರಿದಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಸ್ಥಳೀಯರು ಮತ್ತು ಹಾದಿಹೋಕರು ರಕ್ಷಿಸಿ, ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳು ವಿದ್ಯಾರ್ಥಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ರಸ್ತೆ ವಿವಾದಗಳಿಗೂ ಸವಾರರು ಮಾರಕಾಸ್ತ್ರಗಳನ್ನು ಬಳಸಿ ರೌಡಿಸಂ ಪ್ರದರ್ಶಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಹಾಗೂ ಭೀತಿಯನ್ನು ಹುಟ್ಟಿಸಿದೆ. ಈ ಜಂಟಿ ದಾಳಿಗೆ ಸಂಬಂಧಿಸಿದಂತೆ ಗಾಯಾಳು ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ (CCTV) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us