ಚಾಕು ತೋರಿಸಿ ಬಂಗಾಳ ಕಾರ್ಮಿಕರ ದರೋಡೆ: ಮೊಬೈಲ್, ನಗದು ದೋಚಿದ ದುಷ್ಕರ್ಮಿಗಳು

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಪಶ್ಚಿಮ ಬಂಗಾಳದ ನಾಲ್ವರು ಕಾರ್ಮಿಕರಿಗೆ ಚಾಕು ತೋರಿಸಿ ದರೋಡೆ ಮಾಡಲಾಗಿದೆ. ದುಷ್ಕರ್ಮಿಗಳು ಮೊಬೈಲ್, ನಗದು ಹಾಗೂ ಯುಪಿಐ ಮೂಲಕ ಹಣ ದೋಚಿ ಪರಾರಿಯಾಗಿದ್ದು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿಗಳು ಬೆದರಿಕೆ ಕೂಡ ಹಾಕಿರುವ ಬಗ್ಗೆ ದೂರಲಾಗಿದೆ.ಈ ಸಂಬಂಧ ಪೊಲೀಸರು ಆರೋಪಿಗಳ ಪತ್ತೆಗೆ ಬೆಲೆ ಬೀಸಿದ್ದಾರೆ.

ಚಾಕು ತೋರಿಸಿ ಬಂಗಾಳ ಕಾರ್ಮಿಕರ ದರೋಡೆ: ಮೊಬೈಲ್, ನಗದು ದೋಚಿದ ದುಷ್ಕರ್ಮಿಗಳು
ಸಾಂದರ್ಭಿಕ ಚಿತ್ರ
Image Credit source: PTI

Updated on: Jul 02, 2026 | 7:16 AM

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಚಾಕು ತೋರಿಸಿ ಬಂಗಾಳ ಕಾರ್ಮಿಕರ ದರೋಡೆ
  • ಎಲೆಕ್ಟ್ರಾನಿಕ್​​ ಸಿಟಿ ವ್ಯಾಪ್ತಿಯ ಬೆಟ್ಟದಾಸನಪುರ ಸಮೀಪ ಘಟನೆ
  • ಮೊಬೈಲ್​​, ನಗದು ದೋಚಿ ಎಸ್ಕೇಪ್​ ಆಗಿರುವ ಆರೋಪಿಗಳು

ಬೆಂಗಳೂರು, ಜುಲೈ 02: ನಗರದ ಎಲೆಕ್ಟ್ರಾನಿಕ್​​ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಟ್ಟದಾಸನಪುರ ಸಮೀಪ ಚಾಕು ತೋರಿಸಿ ಬೆದರಿಸಿ ನಾಲ್ವರು ಕಾರ್ಮಿಕರನ್ನು ದರೋಡೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಜೂನ್ 28ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರ ಪ್ರಕಾರ ಘಟನೆ ಸಂಜೆ 6.30ರಿಂದ ರಾತ್ರಿ 9.15ರ ನಡುವೆ ನಡೆದಿದೆ ಎನ್ನಲಾಗಿದೆ. ಕೆಲಸ ಮುಗಿಸಿ ಬೆಟ್ಟದಾಸನಪುರದ ಬಳಿ ಮಾತನಾಡುತ್ತ ನಿಂತಿದ್ದ ಪಶ್ಚಿಮ ಬಂಗಾಳ ಮೂಲದ 25 ವರ್ಷದ ಯೂನುಸ್, 19 ವರ್ಷದ ಇರ್ಫಾನ್ ಶೇಖ್, 20 ವರ್ಷದ ಸಬೀರ್ ಶೇಖ್ ಮತ್ತು 18 ವರ್ಷದ ಓವೈದುರ್ ಇಸ್ಲಾಂ ಲಸ್ಕರ್ ಅವರಿಂದ ಆರೋಪಿಗಳು ದರೋಡೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ.

ಹಲ್ಲೆ ಆರೋಪ

ಕಳೆದ ಎಂಟು ತಿಂಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಈ ಕೆಲಸಗಾರರ ಪೈಕಿ ಸಬೀರ್ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಮೂವರು ಅಪರಿಚಿತರು ಆತನ ಬಳಿ ಬಂದಿದ್ದಾರೆ. ನಿನ್ನ ಸ್ನೇಹಿತರು ನಮಗೆ ಬೈದಿದ್ದಾರೆ ಎಂದು ಹೇಳಿ, ಅವರ ಫೋಟೋಗಳನ್ನು ಮೊಬೈಲ್‌ನಲ್ಲಿ ತೋರಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಆರೋಪಿಗಳು ಆತನ ಮೊಬೈಲ್ ಕಸಿದುಕೊಂಡು ಅಲ್ಲಿಂದ ತೆರಳಿದ್ದಾರೆ. ಮೊಬೈಲ್ ಮರಳಿ ಪಡೆಯಲು ಸಬೀರ್ ಹಾಗೂ ಆತನ ಮೂವರು ಸ್ನೇಹಿತರು ಆರೋಪಿಗಳನ್ನು ಹಿಂಬಾಲಿಸಿದಾಗ, ದುಷ್ಕರ್ಮಿಗಳು ಚಾಕು ಮತ್ತು ಮರದ ದೊಣ್ಣೆ ತೋರಿಸಿ ಬೆದರಿಸಿ ಹಲ್ಲೆ ನಡೆಸಿದ್ದಾರೆ. ಬಳಿಕ ನಾಲ್ವರ ಇತರರ ಬಳಿ ಇದ್ದ ಮೊಬೈಲ್ ಫೋನ್‌ಗಳು ಹಾಗೂ 10,000 ನಗದು ದೋಚಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ; 25 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ, 17 ಪೆಡ್ಲರ್‌ಗಳ ಬಂಧನ

ಬೆದರಿಕೆ ಹಾಕಿರುವ ದುಷ್ಕರ್ಮಿಗಳು

ಅಲ್ಲದೆ, ಸ್ಥಳದಿಂದ ತೆರಳುವ ಮುನ್ನ ಸಂತ್ರಸ್ತರಲ್ಲಿ ಒಬ್ಬರಿಂದ ಯುಪಿಐ (UPI) ಮೂಲಕ 488 ರೂ. ವರ್ಗಾಯಿಸಿಸಿಕೊಂಡು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 309(6) (ದರೋಡೆ) ಹಾಗೂ 311 (ಗಂಭೀರ ಗಾಯ ಅಥವಾ ಸಾವಿಗೆ ಯತ್ನದೊಂದಿಗೆ ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬೆಲೆ ಬೀಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:57 am, Thu, 2 July 26

Follow Us