ಯಾವುದೇ ರೀತಿಯ ಡೀಲ್, ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಕಠಿಣ ಕ್ರಮ: ಖಾಕಿ ಪಡೆಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೊಲೀಸ್ ಸಿಬ್ಬಂದಿಗೆ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರುವಂತೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಕಳೆದ ವರ್ಷ 375 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಕ್ಕಾಗಿ ಪೊಲೀಸರನ್ನು ಶ್ಲಾಘಿಸಿ, 10 ಲಕ್ಷ ರೂ. ಬಹುಮಾನ ಘೋಷಿಸಿದರು. 32 ಮೊಬೈಲ್ ವಿಧಿವಿಜ್ಞಾನ ವ್ಯಾನ್‌ಗಳು ಮತ್ತು 75 ಬೊಲೆರೊ ವಾಹನಗಳನ್ನು ಲೋಕಾರ್ಪಣೆ ಮಾಡಿದರು. ಪೊಲೀಸ್ ನೇಮಕಾತಿಯಲ್ಲಿ ಪಾರದರ್ಶಕತೆಗೆ ಒತ್ತು ನೀಡಿದರು.

ಯಾವುದೇ ರೀತಿಯ ಡೀಲ್, ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಕಠಿಣ ಕ್ರಮ: ಖಾಕಿ ಪಡೆಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್
ಸಿಎಂ ಡಿಕೆ ಶಿವಕುಮಾರ್

Updated on: Jul 11, 2026 | 7:32 PM

ಮುಖ್ಯಾಂಶಗಳು

  • ಪೊಲೀಸ್ ಅಧಿಕಾರಿಗಳು ಡೀಲ್‌ಗಳು ಅಥವಾ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು
  • 1,500 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದೆ ಎಂದು ಪೊಲೀಸರ ಕಾರ್ಯವನ್ನು ಸಿಎಂ ಶ್ಲಾಘಿಸಿದರು
  • ಪೊಲೀಸ್ ತಂಡಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ ನಗದು ಬಹುಮಾನ

ಬೆಂಗಳೂರು, ಜು.11: ಪೊಲೀಸ್ ಅಧಿಕಾರಿಗಳು ಯಾವುದೇ ರೀತಿಯ ಕಾನೂನುಬಾಹಿರ ಡೀಲ್‌ಗಳು ಅಥವಾ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಯಾರಾದರೂ ಇದರಲ್ಲಿ ತೊಡಗಿರುವುದು ಕಂಡುಬಂದರೆ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದನ್ನು ನೀವು ನನ್ನ ವಿನಂತಿ ಎಂದಾದರೂ ಭಾವಿಸಿ ಅಥವಾ ಅಧಿಕೃತ ಆದೇಶ ಎಂದಾದರೂ ಪರಿಗಣಿಸಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೊಲೀಸ್ ಸಿಬ್ಬಂದಿಗೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಜಿಲ್ಲಾ ಪೊಲೀಸ್ ಘಟಕಗಳಿಗಾಗಿ 32 ಅತ್ಯಾಧುನಿಕ ಮೊಬೈಲ್ ವಿಧಿವಿಜ್ಞಾನ (ಫೊರೆನ್ಸಿಕ್) ವ್ಯಾನ್‌ಗಳು ಹಾಗೂ 75 ಬೊಲೆರೊ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.

ಕಳೆದ ಒಂದು ವರ್ಷದಲ್ಲಿ ಪೊಲೀಸ್ ಇಲಾಖೆಯು ಬರೋಬ್ಬರಿ 375 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು (ನಾರ್ಕೋಟಿಕ್ಸ್) ವಶಪಡಿಸಿಕೊಂಡಿದ್ದು, 1,500 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದೆ ಎಂದು ಪೊಲೀಸರ ಕಾರ್ಯವನ್ನು ಸಿಎಂ ಶ್ಲಾಘಿಸಿದರು. ಇದು ಇಲಾಖೆಯ ಅತ್ಯಂತ ಗಮನಾರ್ಹ ಸಾಧನೆಯಾಗಿದೆ. ಇಡೀ ದೇಶವೇ ಕರ್ನಾಟಕದ ಕಡೆ ನೋಡುತ್ತಿದೆ. ಈ ಡ್ರಗ್ಸ್ ಜಾಲವನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದ ಪೊಲೀಸ್ ತಂಡಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ, ಇತ್ತೀಚೆಗೆ ಕೇರಳದ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರೊಂದಿಗೆ ಅಂತರ್-ರಾಜ್ಯ ಡ್ರಗ್ಸ್ ಸಾಗಾಟದ ಕುರಿತು ನಡೆಸಿದ ಸಭೆಯನ್ನು ಸ್ಮರಿಸಿದ ಸಿಎಂ, ಮಾದಕ ದ್ರವ್ಯಗಳು ರಾಜ್ಯದೊಳಗೆ ಬರದಂತೆ ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಮ್ಮ ಪೊಲೀಸ್ ಇಲಾಖೆ ದೇಶದಲ್ಲೇ ಅತ್ಯಂತ ಸಮರ್ಥವಾಗಿದ್ದು, ಇಲಾಖೆಯ ಯಶಸ್ಸೇ ಸರ್ಕಾರದ ಯಶಸ್ಸು ಎಂದರು.

ಅಪರಾಧಗಳು ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮುಖಾಂತರ ಅಪರಾಧ ಪತ್ತೆ ಹಚ್ಚಲು ಹಲವು ಹೊಸ ಕ್ರಮಗಳನ್ನು ಪರಿಚಯಿಸಲಾಗಿದೆ ಎಂದು ಸಿಎಂ ತಿಳಿಸಿದರು. ಇದರ ಜೊತೆಗೆ, ರಾಜ್ಯದಲ್ಲಿ ರೌಡಿಸಂ ಅನ್ನು ಸಂಪೂರ್ಣವಾಗಿ ಹತ್ತಿಕ್ಕಲು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಹಾಗೂ ಸಮರ್ಪಿತ ವಿಶೇಷ ತಂಡಗಳನ್ನು ರಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ದುರುಪಯೋಗವಾಗಿರುವ ಕುರಿತಾದ ಆರೋಪಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಿದರು. “ಧರ್ಮ ಯಾವುದೇ ಇರಲಿ, ಪ್ರಾರ್ಥನಾ ಮಂದಿರಗಳು ಸರ್ಕಾರದ ವ್ಯಾಪ್ತಿಗೆ ಬಂದರೆ ಅವುಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ಅಪರಾಧ ನಡೆದ ನಂತರ ತನಿಖೆ ಮಾಡುವುದಕ್ಕಿಂತ, ಅದು ನಡೆಯದಂತೆ ತಡೆಯುವುದು ಮುಖ್ಯ,” ಎಂದರು.

ಇದನ್ನೂ ಓದಿ: ಒನ್ ನೇಷನ್ ಒನ್ ಎಲೆಕ್ಷನ್‌ನಿಂದ ರಾಜ್ಯಗಳ ಅಧಿಕಾರ ಕಸಿಯಲ್ಲ: ಇಂದಿರಾ ಗಾಂಧಿ ಕಾಲದ ಅಸಹಿಷ್ಣುತೆ ನೆನಪಿಸಿದ ಸಚಿವ ಪ್ರಹ್ಲಾದ್ ಜೋಶಿ

ಪೊಲೀಸ್ ನೇಮಕಾತಿಯಲ್ಲಿ ಪಾರದರ್ಶಕತೆ, ಲಂಚಕ್ಕೆ ಜಾಗವಿಲ್ಲ:

ಪೊಲೀಸ್ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಎಂದು ಸಿಎಂ ಕರೆ ನೀಡಿದರು. ಯಾರೂ ಕೂಡ ಲಂಚ ನೀಡುವ ಮೂಲಕ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಕೇವಲ ಅರ್ಹತೆ ಹಾಗೂ ಪ್ರತಿಭೆಯ ಆಧಾರದ ಮೇಲಷ್ಟೇ ನೇಮಕಾತಿಗಳು ನಡೆಯಬೇಕು ಎಂದು ಅವರು ಸ್ಪಷ್ಟಪಡಿಸಿದರು.

“ನಿಮ್ಮ ಸಾಮರ್ಥ್ಯಕ್ಕಿಂತ ನಿಮ್ಮ ಸಂಕಲ್ಪ ಬಲವಾಗಿದ್ದಾಗ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಹಗಲಿರುಳು ಸೇವೆ ಸಲ್ಲಿಸುವ ನಿಮ್ಮೊಂದಿಗೆ ಸರ್ಕಾರ ಯಾವಾಗಲೂ ಇರಲಿದೆ,” ಎಂದು ಸಿಎಂ ಡಿ.ಕೆ. ಶಿವಕುಮಾರ್ ಪೊಲೀಸರಿಗೆ ಧೈರ್ಯ ತುಂಬಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us