ಲಂಚಕ್ಕಾಗಿ ಕೈದಿ ಮೇಲೆ ಹಲ್ಲೆ: ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ವಿರುದ್ಧ ದೂರು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅದ್ಯಾಕೋ ಭ್ರಷ್ಟಾಚಾರ ಎನ್ನುವುದು ಅಂಟು ರೋಗದಂತಾಗಿದೆ. ಹಣ ಪಡೆದು ಖೈದಿಗಳಿಗೆ ರಾಜಾತಿಥ್ಯ ನೀಡಿದ ಆರೋಪ ಹೊತ್ತಿದ್ದ ಜೈಲು ಅಧಿಕಾರಿಗಳ ವಿರುದ್ಧ ಈಗ ಮತ್ತೊಂದು ಆರೋಪ ಕೇಳಿ ಬಂದಿದೆ.. ಅದೂ ಸಹ ಜೈಲಿನಲ್ಲಿ ಕೊಡಲೇ ಬೇಕಾದ ಮೂಲ ಸೌಕರ್ಯಕ್ಕೂ ಲಂಚ ಕೇಳುವುದರ ಜೊತೆಗೆ ವಿಚಾರಣಾಧೀನ ಕೈದಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.

ಲಂಚಕ್ಕಾಗಿ ಕೈದಿ ಮೇಲೆ ಹಲ್ಲೆ: ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ವಿರುದ್ಧ ದೂರು
Parappana Agrahara Central Jail
Updated By: ರಮೇಶ್ ಬಿ. ಜವಳಗೇರಾ

Updated on: Apr 07, 2025 | 8:20 PM

ಬೆಂಗಳೂರು, (ಏಪ್ರಿಲ್ 07): ಪರಪ್ಪನ ಅಗ್ರಹಾರ ಜೈಲು (parappana agrahara central jail)  ಯಾವಾಗಲೂ ಒಂದಲ್ಲಾ ಒಂದು ರೀತಿ ಸುದ್ದಿಯಲ್ಲಿರುತ್ತೆ. ನಟ ದರ್ಶನ್, ವಿಲ್ಸನ್ ಗಾರ್ಡನ್ ನಾಗನಿಗೆ ರಾಜಾತಿಥ್ಯ ಕೊಟ್ಟ ಆರೋಪ ಹೊತಿದ್ದ ಈ ಜೈಲಿನ ವಿರುದ್ಧ ಈಗ ಹೊಸದೊಂದು ಆರೋಪ ಕೇಳಿ ಬಂದಿದೆ. ವಿಚಾರಣಾಧೀನ ಕೈದಿ ಬಳಿ ಲಂಚಕ್ಕೆ ಬೇಡಿಕೆ ಇಡುವುದರ ಜೊತೆಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹೌದು, 2024ರಲ್ಲಿ ಸೊಲದೇವನಹಳ್ಳಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟ ಹಮೀದ್ ಎಂಬಾತ ಅಕ್ಟೋಬರ್ 4ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಆದ್ರೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಆತನ ಬಳಿ ಹಣ ಕೇಳುವುದರ ಜೊತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಜೈಲಿನಲ್ಲಿ ಹಮೀದ್ ಮೇಲೆ ಆಗಿರುವ ಹಲ್ಲೆ ಸಂಬಂಧ ಆತನ ತಾಯಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ಮಾನವ ಹಕ್ಕುಗಳ ಆಯೋಗಕ್ಕೆ ನೀಡಿದ ದೂರಿನಲ್ಲೇನಿದೆ?

ಜೈಲಿನಲ್ಲಿ ಹಮೀದ್ ಮೇಲೆ ಆಗಿರುವ ಹಲ್ಲೆ ಸಂಬಂಧ ಆತನ ತಾಯಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದು, ನನ್ನ ಒಬ್ಬನೇ ಮಗನ ರಕ್ಷಿಸುವಂತೆ ಕೋರಿದ್ದಾರೆ. ಇದೇ ಏಪ್ರಿಲ್ 5ರ ರಾತ್ರಿ 6 ರಿಂದ 7 ಅಧಿಕಾರಿಗಳು ತನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ 30 ಸಾವಿರ ಹಣ ನೀಡುವಂತೆ ಕೇಳಿದ್ದಾರಂತೆ. ಹಣ ನೀಡದಿದ್ದರೇ ಮತ್ತಷ್ಟು ಸಮಸ್ಯೆ ಮಾಡುವುದಾಗಿ ಹೇಳಿದ್ದಾರಂತೆ.. ಗಾಯಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸದೇ, ಆಹಾರ ನೀಡದೇ ಹಾಗೂ ಮೂಲಸೌಕರ್ಯ ಸಹ ನೀಡದೇ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾಳೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ದುಡ್ಡಿದ್ದವರದ್ದೇ ದುನಿಯಾ: ಬಿಸಿ ನೀರು, ಎಣ್ಣೆ, ಸಿಗರೇಟು, ಊಟಕ್ಕೆ ಒಂದೊಂದು ರೇಟ್

ಅಕ್ರಮಗಳ ಕೂಪವಾಗಿರುವ ಪರಪ್ಪನ ಅಗ್ರಹಾರ ಜೈಲು

ಪರಪ್ಪನ ಅಗ್ರಹಾರ ಕಾರಾಗೃಹದ ಅಕ್ರಮಗಳು ಬಗೆದಷ್ಟೂ ಬಯಲಾಗುತ್ತಿದ್ದು, ಇದಕ್ಕೆ ಬ್ರೇಕ್ ಬೀಳಬೇಕಿದೆ. ಪರಪ್ಪನ ಅಗ್ರಹಾರ ಕಾರಾಗೃಹ ವಿಭಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಕೆಲವೇ ದಿನಗಳಲ್ಲಿ ಜೈಲು ಮೂರು ಭಾಗವಾಗಿ ಹೋಳಾಗಲಿದೆ. ಈ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರುವ ಜೊತೆಗೆ ಅಕ್ರಮ ಚಟುವಟಿಕೆಗೆ ಶಾಶ್ವತ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ದುಡ್ಡಿದ್ದವರದ್ದೇ ದುನಿಯಾ, ಮತ್ತಷ್ಟು ರಹಸ್ಯ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆದಿರವುದು ತಿಳಿದಿದೆ: ಗೃಹ ಸಚಿವ
ದರ್ಶನ್​​ಗೆ ರಾಜಾತಿಥ್ಯ: 7 ಜನರ ಸಸ್ಪೆಂಡ್ ಬೆನ್ನಲ್ಲೇ ಆದೇಶ ಪತ್ರ ವೈರಲ್​

ಹೌದು..ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ಜೈಲನ್ನು ಮೂರು ಭಾಗವಾಗಿ ವಿಭಜಿಸಬೇಕೆಂದು ಕಾರಾಗೃಹ ಹಾಗೂ ಸುಧಾರಣೆ ಸೇವೆ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಸರ್ಕಾರ ಅಸ್ತು ಎಂದಿದೆ. ಆದ್ರೆ, ಅದು ಎಲ್ಲಿಗೆ ಬಂತು ಎನ್ನುವುದು ಗೊತ್ತಾಗಿಲ್ಲ. ಆದ್ರೆ, ಒಂದಲ್ಲಾ ಒಂದು ರೀತಿ ಭ್ರಷ್ಟಾಚಾರದ ಹಣೆ ಪಟ್ಟಿ ಹೊಂದಿರುವ ಪರಪ್ಪನ ಅಗ್ರಹಾರ ಜೈಲಿಗೆ ಒಂದು ಗತಿ ಕಾಣಿಸಲೇಬೇಕಿದೆ.

ಜೈಲು ಅಧಿಕಾರಿಗಳನ್ನು ಪ್ರಶ್ನೆ ಮಾಡೊರು ಯಾರು ಇಲ್ವಾ..?

ಈ ಜೈಲು ಅಕ್ರಮಗಳ ತಾಣವಾಗ್ಬಿಟ್ಟಿದೆ. ಹಣ ಕೊಟ್ಟರೆ ಈ ಜೈಲಿನಲ್ಲಿ ಕೇಳಿದ್ದು ಸಿಗುತ್ತೆ. ಮದ್ಯ, ಸಿಗರೇಟ್, ಸೇರಿದಂತೆ ಏನು ಬೇಕೋ ಅದೆಲ್ಲಾ ಇಲ್ಲಿ ಸಿಗುತ್ತೆ. ಈ ಹಿಂದೆ ಅಷ್ಟೇ ಜೈಲಿನಿಂದ ಹೊರಬಂದಿದ್ದ ವ್ಯಕ್ತಿಯೋರ್ವ ಅಲ್ಲಿನ ಬಂಡವಾಳವನ್ನು ಬಿಟ್ಟಿದ್ದರು. ಹುಡುಗಿಯರು ಬೇಕಿದ್ರೆ ಅಧಿಕಾರಿಗಳು ಕರೆಯಿಸುತ್ತಾರೆ ಅಂತೆಲ್ಲಾ ಕೆಲ ಅಂಶಗಳನ್ನು ಬಿಚ್ಚಿಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ವಿಚಾರಣಾಧೀನ ಕೈದಿ ಲಂಚ ಕೊಡಲಿಲ್ಲ ಎಂದು ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರಂತೆ. ಹೀಗಾಗಿ ಇದಕ್ಕೆ ಬ್ರೇಕ್ ಬೀಳುವುದು ಯಾವಾಗ? ಜೈಲು ಅಧಿಕಾರಿಗಳಿಗೆ ಹೇಳೋರು ಕೇಳೋರು ಯಾರು ಇಲ್ವಾ?

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.