ಮುನಿರತ್ನ ಹೈಡ್ರಾಮಾಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ: ಹೇಳಿದ್ದೇನು?

ಬೆಂಗಳೂರಿನಲ್ಲಿ ಜೆಪಿ ಪಾರ್ಕ್​ನಲ್ಲಿ ಇಂದು ದೊಡ್ಡ ಹೈಡ್ರಾಮಾವೇ ನಡೆದಿದೆ. ಕಾರ್ಯಕ್ರಮದ ವೇದಿಕೆ ಮೇಲೆಯೇ ಮೈಕ್ ಕಿತ್ತುಕೊಂಡು ಶಾಸಕ ಮುನಿರತ್ನ ಆಕ್ರೋಶಗೊಂಡರು. ಸದ್ಯ ಈ ವಿಚಾರವಾಗಿ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್​​, ಅವರಿಗೆ ತಾಳ್ಮೆಯಿಲ್ಲ. ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ ಎಂದು ಕಿಡಿಕಾರಿದ್ದಾರೆ.

ಮುನಿರತ್ನ ಹೈಡ್ರಾಮಾಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ: ಹೇಳಿದ್ದೇನು?
ಶಾಸಕ ಮುನಿರತ್ನ, ಡಿಸಿಎಂ ಡಿಕೆ ಶಿವಕುಮಾರ್​

Updated on: Oct 12, 2025 | 3:21 PM

ಬೆಂಗಳೂರು, ಅಕ್ಟೋಬರ್​ 12: ಇಂಥ ಶಾಸಕರನ್ನು ಆಯ್ಕೆ ಮಾಡಿ ನಿಮ್ಮ ಪರಿಸ್ಥಿತಿ ಏನೆಂದು ಅರ್ಥವಾಗುತ್ತದೆ. ಇವರ ವರ್ತನೆ ನೋಡಿದರೆ ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಅನಿಸುತ್ತಿದೆ. ಅವರಿಗೆ ತಾಳ್ಮೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ ಎಂದು ಶಾಸಕ ಮುನಿರತ್ನ (MLA Munirathna) ಹೆಸರು ಹೇಳದೇ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಮತ್ತಿಕೆರೆ ಜೆಪಿ ಪಾರ್ಕ್​ನಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಥವರನ್ನ ಆಯ್ಕೆ ಮಾಡಿಕೊಂಡಿದಕ್ಕೆ ನಿಮ್ಮ ಮನಸ್ಸಿಗೆ ನೋವಾಗುತ್ತಿದೆಯೆಂದು ನನಗೆ ಚೆನ್ನಾಗಿ ಗೊತ್ತಿದೆ, ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ. ಇವರನ್ನು ಇಟ್ಟುಕೊಳ್ಳುವುದೋ, ಬೇಡವೋ ಎಂದು ಜನ ನಿರ್ಧರಿಸಿಬೇಕು. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಣವೇಷಧಾರಿಯಾಗಿ ಬಂದು ಆರ್​ಎಸ್​ಎಸ್​ಗೆ ಅವಮಾನ ಮಾಡಿದ್ದಾರೆ; ಮುನಿರತ್ನ ವಿರುದ್ಧ ಡಿಕೆ ಶಿವಕುಮಾರ್ ಟೀಕೆ

ಜನಪ್ರತಿನಿಧಿಗಳಿಗೆ ಏನು ಗೌರವ ನೀಡಬೇಕು ಎನ್ನುವ ಅರಿವು ನನಗಿದೆ. ರಾಜಕಾರಣದಲ್ಲಿ ಸೋಲು, ಗೆಲುವು ಇದ್ದೇ ಇರುತ್ತೆ ಯಾವುದೂ ಶಾಶ್ವತವಲ್ಲ. ಇದು ಯಾವುದೇ ಅಭಿವೃದ್ಧಿ ಕಾರ್ಯಕ್ರಮವಲ್ಲ. ಯಾವುದೇ ಶಿಲಾನ್ಯಾಸ ಮಾಡುತ್ತಿಲ್ಲ, ಕಾಮಗಾರಿ ಉದ್ಘಾಟಿಸುತ್ತಿಲ್ಲ. ಜನರ ಜೊತೆ ನಡಿಗೆ ಕಾರ್ಯಕ್ರಮವಷ್ಟೇ. ಆರ್​ಎಸ್ಎಸ್ ಶತಮಾನೋತ್ಸವ ವೇಳೆಯಲ್ಲಿ ವರ್ತನೆ ಸರಿಯಲ್ಲ. ಗಣವೇಷಧಾರಿಯಾಗಿ ಬಂದು ಆರ್​ಎಸ್​ಎಸ್​ಗೆ ಬಿಜೆಪಿ ಶಾಸಕ ಮುನಿರತ್ನ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಏಡ್ಸ್ ಇಂಜೆಕ್ಷನ್ ಕೊಡುವ ಕೆಲಸ ಮಾಡಿದ್ದಾರೆ: ಮುನಿರತ್ನ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕಿಡಿ

ಮಡಿಕೇರಿಯಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿಕೆ ನೀಡಿದ್ದು, ಮುನಿರತ್ನ ವ್ಯಾಪಾರಕ್ಕೋಸ್ಕರ ಬಿಜೆಪಿಗೆ ಸೇರಿಕೊಂಡರು. ಅಲ್ಲಿಗೆ ಹೋಗಿ ಚಡ್ಡಿ, ಕರಿಟೊಪ್ಪಿ ಹಾಕಿಕೊಂಡು ಸುತ್ತುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ಹಲವು ಮುಖಂಡರಿಗೆ ಏಡ್ಸ್ ಇಂಜೆಕ್ಷನ್ ಕೊಡುವ ಕೆಲಸ ಮಾಡಿದ್ದಾರೆ. ಅವರ ನಾಯಕರು, ಹೆಣ್ಮಕ್ಕಳೇ ಬಂದು ದೂರು ಕೊಟ್ಟಿದ್ದಾರೆ. ಅದರ ವಿರುದ್ಧ ಈಗಲೂ ಕೋರ್ಟ್​ನಲ್ಲಿ ಕೇಸ್ ನಡೆಯುತ್ತಿದೆ. ಮುನಿರತ್ನನ ವಿಚಾರವನ್ನು ನಾವು ಮಾತನಾಡಬೇಕಾಗಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಜೆಪಿ ಪಾರ್ಕ್​ನಲ್ಲಿ ಗಲಾಟೆ ಮಾಡಿದ ಶಾಸಕ ಮುನಿರತ್ನ ಅವರನ್ನು ಎಳೆದೊಯ್ದ ಪೊಲೀಸರು

ಬೆಂಗಳೂರಿನಲ್ಲಿ ಜೆಪಿ ಪಾರ್ಕ್​ನಲ್ಲಿ ಡಿಕೆ ಶಿವಕುಮಾರ್​ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದರು. ಇದೇ ಕಾರ್ಯಕ್ರಮದಲ್ಲಿ ಮುನಿರತ್ನ, RSS ಕಾರ್ಯಕ್ರಮ ಮುಗಿಸಿ, ಸಾಮಾನ್ಯ ಜನರಂತೆ ಭಾಗಿಯಾಗಿದ್ದರು. ಯಾವುದೇ ಆಹ್ವಾನ ಇಲ್ಲದಿದ್ದರೂ ಬಂದು ಕುಳಿತಿದ್ದರು. ಆದರೆ ಅದ್ಯಾವಾಗ ಡಿಕೆ ಶಿವಕುಮಾರ್​ ಏಯ್​, ಕರಿ ಟೋಪಿ ಎಂಎಲ್​ಎ ಬಾ ಇಲ್ಲಿ ಅಂದಿದ್ದು, ಮುನಿರತ್ನರ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು.

ಇದೇನ್ ‘ಕೈ’ ಕಾರ್ಯಕ್ರಮನಾ ಎಂದು ಮುನಿರತ್ನ ಸಿಟ್ಟು!

ವೇದಿಕೆಯಲ್ಲಿ ಮೈಕ್ ಪಡೆಯುತ್ತಿದ್ದಂತೆಯೇ ಶಾಸಕ ಮುನಿರತ್ನ ಆಕ್ರೋಶಗೊಂಡಿದ್ದು, ಒಬ್ಬ ಸಂಸದರ ಫೋಟೋ ಇಲ್ಲ, ಶಾಸಕರ ಫೋಟೋನೂ ಇಲ್ಲ, ಇದೇನು ಸಾರ್ವಜನಿಕರ ಕಾರ್ಯಕ್ರಮನಾ? ಕಾಂಗ್ರೆಸ್ ಕಾರ್ಯಕ್ರಮನಾ? ಅಂತಾ ಅಬ್ಬರಿಸಿದ್ದರು.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:20 pm, Sun, 12 October 25

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us