ನಿತಿನ್ ಗಡ್ಕರಿ​​ ಭೇಟಿಯಾದ ಡಿಕೆ ಶಿವಕುಮಾರ್: ಬೆಂಗಳೂರು ನಗರಾಭಿವೃದ್ಧಿ, ಟ್ರಾಫಿಕ್ ನಿಯಂತ್ರಣದ ಬಗ್ಗೆ ಚರ್ಚೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 03, 2023 | 3:11 PM

ಕೇಂದ್ರ ಸಚಿವ ನಿತಿನ್ ಗಡ್ಕರಿ​​ ಭೇಟಿಯಾಗಿ ಬೆಂಗಳೂರು ಟ್ರಾಫಿಕ್​ ನಿಯಂತ್ರಣ ಸಂಬಂಧ ಸಲಹೆ ಕೇಳಿದ್ದೆ, ಅದಕ್ಕೆ ಅವರು ಸಲಹೆಗಳನ್ನು ನೀಡಿದ್ದು, ಜೊತೆಗೆ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ನಿತಿನ್ ಗಡ್ಕರಿ​​ ಭೇಟಿಯಾದ ಡಿಕೆ ಶಿವಕುಮಾರ್: ಬೆಂಗಳೂರು ನಗರಾಭಿವೃದ್ಧಿ, ಟ್ರಾಫಿಕ್ ನಿಯಂತ್ರಣದ ಬಗ್ಗೆ ಚರ್ಚೆ
ಕೇಂದ್ರ ಸಚಿವ ನಿತಿನ್ ಗಡ್ಕರಿ​​ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್
Follow us on

ದೆಹಲಿ, ಆ.3: ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari)​​ ಭೇಟಿಯಾಗಿ ಬೆಂಗಳೂರು ನಗರ ಅಭಿವೃದ್ಧಿ, ಟ್ರಾಫಿಕ್ ನಿಯಂತ್ರಣದ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(D. K. Shivakumar) ಹೇಳಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಬೆಂಗಳೂರು ಟ್ರಾಫಿಕ್​ ನಿಯಂತ್ರಣ ಸಂಬಂಧ ಅವರನ್ನು ಭೇಟಿ ಮಾಡಿ ಸಲಹೆ ಕೇಳಿದ್ದೆ, ಅದಕ್ಕೆ ಅವರು ಸಲಹೆಗಳನ್ನು ನೀಡಿದ್ದು, ಜೊತೆಗೆ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಇನ್ನು ಫ್ಲೈಓವರ್​ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದ್ದು, ಈ ಸಂಬಂಧ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದರು.

ಬೆಂಗಳೂರು ರಸ್ತೆ ನಿರ್ಮಾಣ ಸಂಬಂಧ ಜಾಗತಿಕ ಟೆಂಡರ್ ಕರೆಯಲು ನಿರ್ಧಾರ

ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಿದ್ದು, ರಸ್ತೆ ನಿರ್ಮಾಣ ಕಾರ್ಯಕ್ಕೆ ಚೀನಾ, ಸಿಂಗಾಪುರ ಸೇರಿ ಹಲವು ದೇಶಗಳು ಸ್ಪರ್ಧೆಯಲ್ಲಿವೆ. ಈ ಹಿನ್ನಲೆ ರಸ್ತೆ ನಿರ್ಮಾಣ ಸಂಬಂಧ ಜಾಗತಿಕ ಟೆಂಡರ್ ಕರೆಯಲು ನಿರ್ಧಾರ ಮಾಡಲಾಗಿದ್ದು, ಈ ಕುರಿತು ಡಿಟೈಲ್ಸ್ ಪ್ರಾಜೆಕ್ಟ್ ವರದಿ ಸಲ್ಲಿಸಲು ಕಂಪನಿಗಳಿಗೆ ಕೇಳಿದ್ದೆನೆ ಎಂದರು.

ರಾಜ್ಯದಲ್ಲಿ ಕನಿಷ್ಠ 20 ಲೋಕಸಭಾ ಸ್ಥಾನ ಗೆಲ್ಲುವುದಾಗಿ ಹೈಕಮಾಂಡ್​ಗೆ ಭರವಸೆ

ಇನ್ನು ಎಐಸಿಸಿ ಕಚೇರಿಯಲ್ಲಿ ಸಭೆ ನಂತರ ಡಿಸಿಎಂ ಡಿ.ಕೆ.ಶಿವಕುಮಾರ್​ ಮಾತನಾಡಿ ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆ ಪ್ರಮುಖವಾಗಿ ಚರ್ಚೆ ಮಾಡಿದ್ದೇವೆ. ಕನಿಷ್ಠ 20 ಸ್ಥಾನ ಗೆಲ್ಲುವುದಾಗಿ ಹೈಕಮಾಂಡ್​ಗೆ ಭರವಸೆ ನೀಡಿದ್ದೇವೆ. ಕರ್ನಾಟಕದಲ್ಲಿ ಒಗ್ಗಟ್ಟಿನ ಪ್ರದರ್ಶನವಾಗಿದೆ, ನುಡಿದಂತೆ ನಡೆದಿದ್ದೇವೆ. ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಲೋಕಸಭೆ ಚುನಾವಣೆ ಎದುರಿಸುತ್ತೇವೆಂದರು.

ಇದನ್ನೂ ಓದಿ:ದೆಹಲಿ: ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಪಕ್ಷದ ಹೈಕಮಾಂಡ್ ಮಹತ್ವದ ಸಭೆ ಶುರುವಾಗುವ ಮೊದಲಿನ ಎಕ್ಸ್​ಕ್ಲ್ಯೂಸಿವ್ ಫುಟೇಜ್

ತುಂಗಭದ್ರಾ ಸಲಹಾ ಸಮಿತಿ ಅಧ್ಯಕ್ಷರಾಗಿ ಶಿವರಾಜ್ ತಂಗಡಗಿ ಆಯ್ಕೆ

ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಜತೆ ಡಿಸಿಎಂ ಡಿಕೆಶಿ ಸಭೆ ಕುರಿತು ‘ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ತುಂಗಭದ್ರಾ ನದಿ ನೀರು ಬಿಡಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡುತ್ತಿದ್ದಾರೆ. ಜೊತೆಗೆ ತುಂಗಭದ್ರಾ ಸಲಹಾ ಸಮಿತಿ ಅಧ್ಯಕ್ಷರಾಗಿ ಶಿವರಾಜ್ ತಂಗಡಗಿ ಆಯ್ಕೆ ಮಾಡಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಲಿದ್ದೇವೆ. ಅದರಂತೆ ಜಲಾಶಯದಿಂದ 5,500 ಕ್ಯೂಸೆಕ್ ನೀರು ಬಿಡಲು ಸೂಚಿಸಿದ್ದು, ಸರ್ಕಾರ ನೀರು ಬಿಡಲು ಆರಂಭಿಕ ಅನುಮತಿಯನ್ನು ನೀಡಿದೆ. ಮುಂದಿನ ಹಂತದಲ್ಲಿ ಚರ್ಚಿಸಿ ನೀರು ಬಿಡುವ ಬಗ್ಗೆ ಸಲಹಾ ಸಮಿತಿ ಸದಸ್ಯರು ನಿರ್ಧರಿಸುತ್ತಾರೆ ಎಂದರು.

ನೀರಾವರಿ ವಿಚಾರ ಸಂಬಂಧ ವಕೀಲರ ಸಭೆ

ಇನ್ನು ನೀರಾವರಿ ವಿಚಾರ ಸಂಬಂಧ ವಕೀಲರ ಸಭೆ ಮಾಡಿದ್ದೇನೆ. ಮಹದಾಯಿ, ಮೇಕೆದಾಟು, ಕಳಸಾ ಬಂಡೂರಿ ಬಗ್ಗೆ ಚರ್ಚೆಯಾಗಿದ್ದು, ಸಿಎಂ ಜೊತೆಗೆ ಮಾತನಾಡಿ ಮುಂದಿನ ನಿರ್ದೇಶನ ನೀಡುತ್ತೇವೆ. ಇನ್ನು ಬಿಡಿಎಗೆ ಸಂಬಂಧಿಸಿದಂತೆ ಕೇಸ್​ಗಳ ಮಾಹಿತಿ ಕೇಳಿದ್ದೇನೆ. ಬರೊಬ್ಬರಿ 350ಕ್ಕೂ ಹೆಚ್ಚು ಕೇಸ್​ಗಳಿದ್ದು, ಅದರ ಬಗ್ಗೆ ಮಾಹಿತಿ ಪಡೆದಿದ್ದೇನೆ. ಜೊತೆಗೆ ಅದರಲ್ಲಿ ಎಷ್ಟು ಗೆದ್ದರು, ಎಷ್ಟು ಸೋತರು ಎನ್ನುವ ಬಗ್ಗೆ ಮಾಹಿತಿ ಕೇಳಿದ್ದೇನೆ ಎಂದು ದೆಹಲಿಯ ಕರ್ನಾಟಕ ಭವನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Thu, 3 August 23