
ಬೆಂಗಳೂರು, ಫೆಬ್ರವರಿ 5: ಅಬಕಾರಿ ಇಲಾಖೆಯ (Excise Department) ಬಿಯುಡಿ-3 ವಿಭಾಗದ ಡೆಪ್ಯುಟಿ ಕಮಿಷನರ್ ಕೆಎಸ್ ಮುರುಳಿ ಮನಸೋ ಇಚ್ಚೆ ಸಿಎಲ್-7 ಪರವಾನಗಿ ನೀಡಿರುವ ಆರೋಪ ಕೇಳಿ ಬಂದಿದೆ. ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ಗೆ ನೀಡುವ ಲೈಸೆನ್ಸ್ ಸಿಎಲ್- 7. ನಿಯಮ ಪ್ರಕಾರ ಶಾಲಾ ಆವರಣದಲ್ಲಿ ಅಥವಾ ಶಾಲೆ ಎದುರಿಗೆ ಪರವಾನಗಿ ಕೊಡುವಂತಿಲ್ಲ. ಆದರೆ, ಶಾಲೆ ಎದುರು ಶಾಪ್ ತೆರೆಯಲು ಮುರುಳಿ ಸಿಎಲ್-7 ಲೈಸೆನ್ಸ್ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 30×40 ಜಾಗಕ್ಕೂ ಸಿಎಲ್- 7 ಲೈಸೆನ್ಸ್ ನೀಡಿದ್ದು, ಕಳೆದ ಎರಡು ವರ್ಷದಲ್ಲಿ ಬರೋಬ್ಬರಿ 60 ಸಿಎಲ್-7 ಪರವಾನಗಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ (Lokayukta) ಈಗಾಗಲೇ ದೂರು ಸಲ್ಲಿಕೆಯಾಗಿದೆ.
ಇಡೀ ರಾಜ್ಯದಲ್ಲೇ 24 ತಿಂಗಳ ಅವಧಿಯಲ್ಲಿ ಅತಿಹೆಚ್ಚು ಸಿಎಲ್-7 ಲೈಸೆನ್ಸ್ ನೀಡಿರುವ ಡೆಪ್ಯುಟಿ ಕಮಿಷನರ್ ಎಂಬ ಆರೋಪವೂ ಮುರುಳಿ ಮೇಲಿದೆ. 60 ಸಿಎಲ್-7 ಗಳ ಪೈಕಿ, 3 ಸಿಎಲ್-7 ಗಳಿಗೆ ಲೈಸೆನ್ಸ್ ನೀಡಬಾರದು ಎಂಬ ದೂರುಗಳಿದ್ದರೂ ಪರಿಗಣಿಸಿಲ್ಲ. ಅಚ್ಚರಿಯೆಂದರೆ, ಈ ಹಿಂದೆ ಇದೆ ಮುರುಳಿ ಅವುಗಳನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ.
ಇನ್ನು ಸಿಎಲ್- 7 ಲೈಸೆನ್ಸ್ ಪಡೆಯಲು ಮಾಲೀಕರು ಸರಿಯಾಗಿ ದಾಖಲೆಯನ್ನು ಕೂಡ ನೀಡಿಲ್ಲ. ಆದರೂ ಮುರಳಿ ಪರವಾನಗಿ ನೀಡಿದ್ದಾರೆ ಎಂಬ ಆರೋಪವಿದೆ.
ಬೆಂಗಳೂರಿನಿಂದ ತುಮಕೂರಿಗೆ ಸದ್ಯದಲ್ಲೇ ಮುರುಳಿ ವರ್ಗಾವಣೆ ಆಗುವ ಸಾಧ್ಯತೆಯಿದ್ದು, ಎಲ್ಲಾ ಲೈಸೆಸ್ಗಳನ್ನು ನೀಡಯೇ ಹೋಗಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ ಎಂಬುದು ತಿಳಿದುಬಂದಿದೆ.
ಕಳೆದ ಡಿಸೆಂಬರ್ ವರೆಗೆ ಮಾತ್ರ 60 ಸಿಎಲ್-7 ಲೈಸೆನ್ಸ್ ನೀಡಿದ್ದು ಈ ವರ್ಷ ಜನವರಿಯಲ್ಲಿ 10 ಕ್ಕೂ ಹೆಚ್ಚು ಲೈಸೆನ್ಸ್ ನೀಡಿದ್ದಾರೆ ಎಂದು ದೂರುದಾರ ಬಿಎಸ್ ಗೌಡ ಆರೋಪ ಮಾಡಿದ್ದಾರೆ.
ಡೆಪ್ಯುಟಿ ಕಮಿಷನರ್ ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ‘ಟಿವಿ9’ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಈ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರದ ದೊಂಬರಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ 40 ರಿಂದ 50 ಮೀಟರ್ ದೂರದಲ್ಲಿ ಸಿಎಲ್-7 ಗೆ ಅನುಮತಿ ನೀಡಿದ್ದು ತಿಳಿದು ಬಂದಿದೆ. ನಿಯಮಗಳ ಪ್ರಕಾರ ಶಾಲಾ-ಕಾಲೇಜುಗಳ ಆವರಣದ 100 ಮೀಟರ್ ಒಳಗೆ ಮದ್ಯಮಾರಾಟ ಮಾಡಲು ಅವಕಾಶವಿಲ್ಲ. ಆದರೂ ಲೈಸೆನ್ಸ್ ನೀಡಲಾಗಿದೆ. ಈ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಇದ್ದು, 70 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಇಲಾಖಾ ತನಿಖೆಗೆ ಆದೇಶ: ಆರ್ ಬಿ ತಿಮ್ಮಾಪುರ, ಅಬಕಾರಿ ಸಚಿವ
ಒಟ್ಟಿನಲ್ಲಿ, ಹಣಕ್ಕಾಗಿ ಅಬಕಾರಿ ಇಲಾಖೆ ಈ ಡೆಪ್ಯುಟಿ ಕಮಿಷನರ್ ಲಂಗುಲಗಾಮಿಲ್ಲದೆ ಪರವಾನಗಿ ನೀಡಿದ್ದು, ಈ ಬಗ್ಗೆ ಸರಿಯಾಗಿ ತನಿಖೆಯಾಗಬೇಕಿದೆ.