
ಬೆಂಗಳೂರು, ಜೂನ್ 25: ಸಚಿವ ಸತೀಶ್ ಜಾರಕಿಹೊಳಿ ಬಾಮೈದ ಮತ್ತು ಬೆಳಗಾವಿ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಸೇರಿ ಅವರ ಆಪ್ತರ ಮನೆಗಳ ಮೇಲೆ ನಿನ್ನೆ (ಜೂನ್ 24) ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿರುವ ಒಟ್ಟು 14 ಸ್ಥಳಗಳಲ್ಲಿ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ ನಡೆದಿತ್ತು. ಈ ಸಂಬಂಧ ಇಡಿ ಮಾಹಿತಿ ನೀಡಿದ್ದು, ಪರಿಶೀಲನೆ ವೇಳೆ ಕೆಲ ದಾಖಲೆ ಪತ್ರಗಳು, ಹಣ ಮತ್ತು ಆಭರಣಗಳು ಸೇರಿ ಲಂಚದ ಹಣ ಹಂಚಿಕೆಯ ಲೆಕ್ಕ ಪುಸ್ತಕ ಸಿಕ್ಕಿರೋದು ಅಧಿಕಾರಿಗಳೇ ಹೌಹಾರುವಂತೆ ಮಾಡಿದೆ.
ED, Bengaluru Zonal Office has conducted search operations under PMLA, 2002 on 24.06.2026 at 14 premises spread across Bangalore, Mysuru and Belagavi in Karnataka on allegation of systemic corruption in state excise department and therefore, amassing of wealth by govt officials.… pic.twitter.com/jtG7T9a3pB
— ED (@dir_ed) June 25, 2026
ದಾಳಿಯ ವೇಳೆ ಡಿಜಿಟಲ್ ಸಾಧನಗಳು, ಲಂಚದ ಹಣ ಹಂಚಿಕೆ ಕುರಿತ ನಗದು ಪುಸ್ತಕ, ಆಸ್ತಿ ದಾಖಲೆಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ಇಡಿ ವಶಪಡಿಸಿಕೊಂಡಿದೆ. ವಿಶೇಷವಾಗಿ ವೈ.ಡಿ. ಮಂಜುನಾಥ್, ಅವರ ಚಾಲಕ, ಕುಟುಂಬ ಸದಸ್ಯರು ಹಾಗೂ ಸಹಚರರ ಸ್ಥಳಗಳಿಂದ ಸುಮಾರು 5.5 ಕೋಟಿ ನಗದು, ಸುಮಾರು 7.8 ಕೋಟಿ ಮೌಲ್ಯದ ಚಿನ್ನಾಭರಣ, 3.3 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ 13.3 ಕೋಟಿ ಮೌಲ್ಯದ ಅಕ್ರಮ ಆಸ್ತಿ (Proceeds of Crime) ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಂಜುನಾಥ್ ಆಪ್ತರಿಗೂ ತಟ್ಟಿದ ಇಡಿ ಬಿಸಿ: ಅಬಕಾರಿ ಎಸ್ಪಿ, ಡಿವೈಎಸ್ಪಿ ಮನೆಗಳ ಮೇಲೂ ರೇಡ್
ಇನ್ನು ಇಡಿ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಅಬಕಾರಿ ಇಲಾಖೆ ಅಧಿಕಾರಿಗಳು, ಅವರ ಸಹಚರರು ಮತ್ತು ಖಾಸಗಿ ವ್ಯಕ್ತಿಗಳ ಸಹಭಾಗಿತ್ವದಲ್ಲಿ ಸಂಘಟಿತ ಭ್ರಷ್ಟಾಚಾರದ ಜಾಲ ಕಾರ್ಯನಿರ್ವಹಿಸುತ್ತಿತ್ತು. ರಾಜ್ಯದ ವಿವಿಧ ಮದ್ಯ ಮಾರಾಟ ಮಳಿಗೆಗಳಿಂದ ಪ್ರತಿ ತಿಂಗಳು ನಿಗದಿತ ಪ್ರಮಾಣದ ಲಂಚವನ್ನು ಕ್ಷೇತ್ರ ಮಟ್ಟದ ಅಧಿಕಾರಿಗಳು ಸಂಗ್ರಹಿಸುತ್ತಿದ್ದರು. ಪರವಾನಗಿ ನವೀಕರಣ, ಸ್ಥಳಾಂತರ ಮತ್ತು ಹೊಸ ಲೈಸೆನ್ಸ್ ನೀಡುವ ಸಂದರ್ಭದಲ್ಲಿಯೂ ಹಣ ಸಂಗ್ರಹಿಸಲಾಗುತ್ತಿತ್ತು. ಸಂಗ್ರಹಿಸಿದ ಲಂಚದ ಹಣವನ್ನು ಮಧ್ಯವರ್ತಿಗಳ ಮೂಲಕ ಕೇಂದ್ರೀಕೃತವಾಗಿ ಹಂಚಿಕೆ ಮಾಡಲಾಗುತ್ತಿತ್ತು. ಈ ಹಣದ ಲೆಕ್ಕಪತ್ರವನ್ನು ಪುಸ್ತಕದಲ್ಲಿ ದಾಖಲಿಸಲಾಗುತ್ತಿತ್ತು. ಅಂತಹ ಒಂದು ನಗದು ಪುಸ್ತಕವನ್ನು ಇಡಿ ವಶಪಡಿಸಿಕೊಂಡಿದೆ. ಈ ಅಕ್ರಮ ಹಣವನ್ನು ಅಧಿಕಾರಿಗಳು ವೈಯಕ್ತಿಕ ಖರ್ಚು, ಆಸ್ತಿ ಖರೀದಿ ಹಾಗೂ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಬಳಸುತ್ತಿದ್ದರು. ತನಿಖೆಯಲ್ಲಿ ಪತ್ತೆಯಾದ ಮತ್ತೊಂದು ಪ್ರಮುಖ ಅಂಶವೆಂದರೆ, ಹಲವಾರು ಅಬಕಾರಿ ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಮದ್ಯದ ಅಂಗಡಿ ಪರವಾನಗಿಗಳನ್ನು ಪಡೆದು, ಪರೋಕ್ಷವಾಗಿ ಮದ್ಯ ವ್ಯವಹಾರ ನಡೆಸುತ್ತಿದ್ದರು ಎಂದು ಇಡಿ ತಿಳಿಸಿದೆ.
ಅಬಕಾರಿ ಇಲಾಖೆಯ ಅಧಿಕಾರಿಗಳಾದ ಜಗದೀಶ ನಾಯಕ್, ಕೆ.ಎಂ. ತಮ್ಮಣ್ಣ ಮತ್ತು ವೈ.ಡಿ. ಮಂಜುನಾಥ್ ಸೇರಿದಂತೆ ಅವರ ಕುಟುಂಬ ಸದಸ್ಯರು, ವ್ಯವಹಾರ ಪಾಲುದಾರರು ಮತ್ತು ಆಪ್ತ ಸಹಚರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:32 pm, Thu, 25 June 26