ಬೆಂಗಳೂರಿನ ಗ್ಯಾರೇಜ್​ನಲ್ಲಿ ಅಗ್ನಿ ದುರಂತ: ಎಫ್​ಎಆರ್ ದಾಖಲು, ಈ ಅವಘಡಕ್ಕೆ ಕಾರಣಗಳೇನು?

ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಎಸ್ ವಿ ಕೋಚ್ ವರ್ಕ್ಸ್ ಗ್ಯಾರೇಜ್​ನಲ್ಲಿ ಅಗ್ನಿ ದುರಂತ ಸಂಭವಿಸಿ 18 ಬಸ್​ಗಳು ಸುಟ್ಟು ಕರಕಲಾಗಿವೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್​ಎಆರ್ ದಾಖಲಾಗಿದೆ. ಅಗ್ನಿಶಾಮಕದಳದಿಂದ ಅಗ್ನಿಶಾಮಕ ಡಿಜಿ ಕಮಲ್ ಪಂತ್ ಗೆ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆದಿದೆ. ಈ ಘಟನೆಗೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಗ್ಯಾರೇಜ್​ನಲ್ಲಿ ಅಗ್ನಿ ದುರಂತ: ಎಫ್​ಎಆರ್ ದಾಖಲು, ಈ ಅವಘಡಕ್ಕೆ ಕಾರಣಗಳೇನು?
ಬೆಂಗಳೂರಿನ ಗ್ಯಾರೇಜ್​ನಲ್ಲಿ ಅಗ್ನಿ ದುರಂತ
Edited By: ಆಯೇಷಾ ಬಾನು

Updated on: Oct 31, 2023 | 9:28 AM

ಬೆಂಗಳೂರು, ಅ.31: ನಗರದ ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಎಸ್ ವಿ ಕೋಚ್ ವರ್ಕ್ಸ್ ಗ್ಯಾರೇಜ್​ನಲ್ಲಿ ನಿನ್ನೆ(ಅ.30) ವೆಲ್ಡಿಂಗ್ ಮಾಡುವಾಗ ಹಾರಿದ ಕಿಡಿಯೊಂದು ಭಾರೀ ಅನಾಹುತವನ್ನೇ ಸೃಷ್ಟಿಸಿತ್ತು (Fire). ನೋಡನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ 18 ಬಸ್ ಗಳು ಸುಟ್ಟು ಕರಕಲಾಗಿದ್ದವು. ಸದ್ಯ ಈ ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್​ಎಆರ್​(ಫೈರ್ ಆ್ಯಕ್ಸಿಡೆಂಟಲ್​ ರಿಪೋರ್ಟ್) ದಾಖಲಾಗಿದೆ. ಅಗ್ನಿ ಅವಘಡ ಹೇಗಾಯ್ತು, ಪರಿಣಾಮವೇನು ಅನ್ನೋ ಬಗ್ಗೆ FAR ದಾಖಲಿಸಿದ್ದಾರೆ.ತನಿಖೆ ನಡೆಸಲು FSL, ಅಗ್ನಿಶಾಮಕದಳ, RTO ಸೇರಿ ಮೂರು ಇಲಾಖೆಗಳ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

FSL ಅಧಿಕಾರಿಗಳು ನಿನ್ನೆ ಅವಶೇಷಗಳ ಸ್ಯಾಂಪಲ್​ ಸಂಗ್ರಹಿಸಿದ್ದರು. ಇದಲ್ಲದೆ ಅಗ್ನಿ ನಿಯಂತ್ರಣಕ್ಕೆ ಬರದಿದಕ್ಕೆ ಫೈರ್ ಡಿಪಾರ್ಟ್ಮೆಂಟ್ ಕಾರಣ ನೀಡಲಿದೆ. ಆರ್​ಟಿಒ ಇಲಾಖೆ ಕೂಡ ಬಸ್ ಗಳ ಕಂಡೀಷನ್ ಹೇಗಿತ್ತು ಅನ್ನೊ ಬಗ್ಗೆ ವರದಿ ನೀಡಲಿದೆ. ಮೂರು ಇಲಾಖೆಗಳ ವರದಿ ಕೈ ಸೇರಿದ ಬಳಿಕ ಪೊಲೀಸರು ಅಧಿಕೃತ ತನಿಖೆ ಆರಂಭಿಸಲಿದ್ದಾರೆ. ಈ ನಡುವೆ ನಿನ್ನೆಯೇ ಲೊ ಬಿಪಿಯಿಂದ ಮಾಲೀಕ ಶ್ರೀನಿವಾಸ್ ಆಸ್ಪತ್ರೆ ಸೇರಿದ್ದಾರೆ. ಡಿಸ್ಚಾರ್ಜ್ ಬಳಿಕ ನೋಟಿಸ್ ಕೊಟ್ಟು ವಿವರಣೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆಫೀಸ್ ನಲ್ಲಿ ಇಟ್ಟಿದ್ದ ಎಂಟು ಲಕ್ಷ ಹಣ ಸಹ ಬೆಂಕಿಗಾಹುತಿ ಅನ್ನೊ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇದರ ಸತ್ಯಾಸತ್ಯತೆ ಬಗ್ಗೆ ಸಹ ಪೊಲೀಸರು ತನಿಖೆ ಆರಂಭಿಸಲಿದ್ದಾರೆ.

ಡಿಜಿ ಕಮಲ್ ಪಂತ್ ಗೆ ರಿಪೋರ್ಟ್ ಸಲ್ಲಿಸಲು ಸಿದ್ಧತೆ

ಇನ್ನು ಮತ್ತೊಂದೆಡೆ ಅಗ್ನಿಶಾಮಕದಳದಿಂದ ಅಗ್ನಿಶಾಮಕ ಡಿಜಿ ಕಮಲ್ ಪಂತ್ ಗೆ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆದಿದೆ. ಬೆಂಕಿ ತಗುಲಲು ಕಾರಣ ಏನು ಎನ್ನುವ ಬಗ್ಗೆ ಇಂದು ಕೂಡ ಪರಿಶೀಲನೆ ನಡೆಯಲಿದೆ. ಯಾವುದಾದ್ರೂ ಬಸ್ ನ ಡಿಸೆಲ್ ಅಥಾವ ಅಯಿಲ್ ಲೀಕ್ ಆಗಿ ಕಿಡಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಅಥಾವ ವೆಲ್ಡಿಂಗ್ ಮಿಷನ್ ಕರೆಂಟ್ ಪ್ರೆಶರ್ ನಿಂದ ಸ್ವಿಚ್ ಬೋರ್ಡ್ ಸಿಡಿದಿದೆಯಾ ಅನ್ನೋ ಬಗ್ಗೆ ತನಿಖೆ ನಡೆಸಲಾಗುತ್ತೆ. ಮೀಟರ್ ಬೋರ್ಡ್ ನ ವೈರಿಂಗ್ ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಗ್ಯಾರೇಜ್ ನ ಎಲ್ಲಾ ವಿದ್ಯುತ್ ಸಂಪರ್ಕದ ಪರಿಶೀಲನೆ ನಡೆಸಲಾಗುತ್ತಿದೆ.

ಕಾರಣ -1
ಬಸ್ ಬ್ಯಾಟರಿ ವೈಯರ್ ಕನೆಕ್ಷನ್ ತಪ್ಪಿಸದೆ ವೆಲ್ಡ್ ಮಾಡಿಯೂ ಬೆಂಕಿ ತಗುಲಿರಬಹುದು.

ಕಾರಣ -2
ಬಸ್ ನ ಆಯಿಲ್ ಅಥಾವ ಡಿಸೇಲ್ ಲೀಕ್ ಅಗಿದ್ದಾಗ ವೆಲ್ಡಿಂಗ್ ಕಿಡಿ ತಗುಲಿ ಬೆಂಕಿ ಹೊತ್ತಿಕೊಂಡಿರಬಹುದು.

ಕಾರಣ-3
ವೆಲ್ಡಿಂಗ್ ಮಿಷನ್ ಗೆ ಕರೆಂಟ್ ಓವರ್ ಲೋಡ್ ಆಗಿ ಪ್ಲಗ್ ಬಾಕ್ಸ್ ಸಿಡಿದು ಬೆಂಕಿ ತಗುಲಿರಬಹುದು.

ಕಾರಣ-4
ಶಾರ್ಟ್ ಸರ್ಕ್ಯೂಟ್ ನಿಂದಾಗಿಯು ಬೆಂಕಿ ತಗುಲಿರಬಹುದು.

ಇದನ್ನೂ ಓದಿ: ಬೆಂಗಳೂರು ಗ್ಯಾರೇಜ್ ಬೆಂಕಿ ಆಕಸ್ಮಿಕ; ಸಂಪೂರ್ಣವಾಗಿ ಸುಟ್ಟುಹೋಗಿರುವ ಬಸ್ ಮಾಲೀಕನಿಗೆ ಆಗಿರುವ ನಷ್ಟವೆಷ್ಟು ಗೊತ್ತಾ?

ಏನಿದು ಘಟನೆ?

ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಎಸ್ ವಿ ಕೋಚ್ ವರ್ಕ್ಸ್ ಗ್ಯಾರೇಜ್​ನಲ್ಲಿ ಟಿಂಕರಿಂಗ್ ಮಾಡುವ ಕೆಲಸವನ್ನು‌ ಮಾಡಲಾಗುತ್ತದೆ. ನಿತ್ಯದ ಕೆಲಸದಂತೆ ಬಸ್ ಟಿಂಕರಿಂಗ್ ವೆಲ್ಡಿಂಗ್ , ಬಾಡಿ ವರ್ಕ್ ಗಳನ್ನು‌ ಮಾಡುವ ಕೆಲಸದಲ್ಲಿ ಸಿಬ್ಬಂದಿ ನಿರತರಾಗಿದ್ದರು. ಈ ವೇಳೆ ವೆಲ್ಡಿಂಗ್ ಮಾಡುವಾಗ ಬೆಂಕಿಯ ಕಿಡಿಗಳು ಸಿಡಿದಿವೆ. ಅಷ್ಟೇ ಏಕಾಏಕಿ ಬಸ್ ಒಂದು ಹೊತ್ತಿಕೊಂಡಿದೆ. ಬಸ್ ಹೊತ್ತಿಕೊಂಡ ತಕ್ಷಣ ಮತ್ತಷ್ಟು ಬಸ್ ಗಳಿಗೆ ಬೆಂಕಿಯ ಕೆನ್ನಾಲಿಗೆ ಚಾಚಿದೆ. ಬಸ್ ಗಳು ಹೊತ್ತಿ ಉರಿಯುವಾಗ ಏನೂ ಮಾಡಲಾಗದ ಸ್ಥಿತಿಯಲ್ಲಿ ಸಿಬ್ಬಂದಿ ಹೊರಹೋಗಿದ್ದಾರೆ. ಬಸ್ ಧಗಧಗಿಸಿ ಹೋಗಿವೆ.

ಇನ್ನು ಬಸ್ ಗೆ ಬೆಂಕಿ ಹೊತ್ತಿಕೊಂಡ ವಿಷಯ ತಿಳಿಯುತ್ತಿದ್ದಂತೆ ಒಂದರ ಹಿಂದೊಂದರಂತೆ 10 ಅಗ್ನಿಶಾಮಕ‌ ವಾಹನಗಳು ಸ್ಥಳಕ್ಕೆ ದೌಡಾಯಿಸಿದವು. ಅಗ್ನಿ ಅನಾಹುತದಲ್ಲಿ 18 ಬಸ್ ಗಳು ಉರಿದು ಹೋಗಿದ್ದರೆ 10 ಬಸ್ ಗಳನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. 80ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಅಗ್ನಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್ ವಿ ಕೋಚ್ ವರ್ಕ್ಸ್ ನ ಮಾಲೀಕ ಶಿವಮೊಗ್ಗ ಮೂಲದ ಶ್ರೀನಿವಾಸ್ ಎಂದು ತಿಳಿದುಬಂದಿದೆ. ಬಸ್ ಗೆ ಬೆಂಕಿ ಬಿದ್ದ ತಕ್ಷಣ ಶ್ರೀನಿವಾಸ್ ನಾಪತ್ತೆಯಾಗಿದ್ದರು. ಸದ್ಯ ಲೋ ಬಿಪಿಯಿಂದ ಆಸ್ಪತ್ರೆ ಸೇರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಬಸ್ ಗ್ಯಾರೇಜ್ ಬಯಲು ಪ್ರದೇಶದಲ್ಲಿರುವ ಕಾರಣ ಅಕ್ಕಪಕ್ಕ ಯಾವುದೇ ಮನೆಯಿಲ್ಲದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಅಗ್ನಿ ಅವಘಡದ ಸಮಯದಲ್ಲಿ ಸುಮಾರು 30 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

ಇನ್ನು ಘಟನೆ ಬಳಿಕ ಕೆಲ ಬಸ್ ಮಾಲೀಕರು ಸ್ಥಳಕ್ಕೆ ಬಂದ ಗ್ಯಾರೇಜ್ ಮಾಲೀಕನ ಮೇಲೆ ಆಕ್ರೋಶ ಹೊರಹಾಕಿದ್ರು. ಘಟನೆಯಿಂದ ನಮ್ಮ ಹೊಸ ಬಸ್ ಸುಟ್ಟು ಹೋಗಿದ್ದು ನಮಗೆ 70 ಲಕ್ಷ ನಷ್ಟ ಆಯ್ತು ಅಂದಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More
Follow Us