
ಬೆಂಗಳೂರು, ಜೂನ್ 26: ನಗರದಲ್ಲಿ ಕಸ ಸಂಗ್ರಹಣೆ ಹಾಗೂ ವಿಲೇವಾರಿಯೇ ಜಿಬಿಎಗೆ ದೊಡ್ಡ ಸವಾಲಾಗಿದೆ. ಇತ್ತ ಬ್ಲಾಕ್ ಸ್ಪಾಟ್ಗಳೂ ನಗರದಲ್ಲಿ ಹೆಚ್ಚಾಗಿದ್ದು, ಮನೆ ಹತ್ತಿರ ಕಸದ ವಾಹನಗಳೇ ಬರೋದಿಲ್ಲ ಅನ್ನೋ ಆರೋಪವೂ ಮೇಲಿಂದ ಮೇಲೆ ಕೆಳಿಬರತೊಡಗಿದೆ. ಹೀಗಾಗಿ ಈ ಸಮಸ್ಯೆಯನ್ನ ಬಗೆಹರಿಸಲು ಜಿಬಿಎ ಹೊಸ ಐಡಿಯಾ ಮಾಡಿದ್ದು, ನಿಗದಿತ ಮಾರ್ಗದಲ್ಲಿ ಕಸದ ವಾಹನಗಳ ಓಡಾಟ ಕಡ್ಡಾಯಗೊಳಿಸಿದೆ. ತಂತ್ರಜ್ಞಾನ ಬಳಸಿಕೊಂಡು ವ್ಯವಸ್ಥೆ ಸುಧಾರಣೆಗೆ ಕಾರ್ಯತಂತ್ರ ರೂಪಿಸಿದೆ.
ಬೆಂಗಳೂರಿನ ಎಲ್ಲ ಮನೆಗಳಿಂದಲೂ ಕಸ ಸಂಗ್ರಹ ಕಾರ್ಯ ಸರಿಯಾಗಿ ನಡೆಯದ ಕಾರಣ ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಏನೇ ಕಠಿಣ ಕ್ರಮ ಕೈಗೊಂಡರೂ ಇವುಗಳನ್ನು ತಡೆಯೋದು ಕಷ್ಟ ಎನ್ನುವ ಹಂತಕ್ಕೆ ಪರಿಸ್ಥಿತಿ ತಲುಪಿದೆ. ಹೀಗಾಗಿ ನಿಗದಿತ ಮಾರ್ಗಗಳಲ್ಲಿ ತೆರಳದ ಕಸದ ವಾಹನಗಳ ಮೇಲೆ ನಿಗಾ ಇಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮುಂದಾಗಿದ್ದು, ‘ಮಾತ್ರ’ ಎಂಬ ಆ್ಯಪ್ ಮೂಲಕ ಕಸದ ವಾಹನಗಳ ಚಲನವಲನ ಗಮನಿಸಿಲು ನಿರ್ಧರಿಸಿದೆ.
ಇದನ್ನೂ ಓದಿ: ಕಸ್ತೂರಿ ನಗರ ಪಾರ್ಕ್ ಉಳಿಸಲು ಸ್ಥಳೀಯರ ಹೋರಾಟ; ಜಿಬಿಎ ವಿರುದ್ಧ ಸಾರ್ವಜನಿಕರ ಆಕ್ರೋಶ
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಕಸದ ವಾಹನಗಳ ಚಾಲಕರ ಮೊಬೈಲ್ನಲ್ಲಿ ‘ಮಾತ್ರ’ ಆ್ಯಪ್ ಇನ್ಸ್ಟಾಲ್ ಮಾಡಲಾಗಿದ್ದು, ಅವರು ಕಸ ಸಂಗ್ರಹಣೆ ಮಾಡುವ ಮಾರ್ಗ ತಪ್ಪಿಸಿದರೆ ಈ ಆ್ಯಪ್ ಮೂಲಕ ಅಧಿಕಾರಿಗಳು ತಿಳಿದುಕೊಳ್ಳಬಹುದಾಗಿದೆ. ಈ ವ್ಯವಸ್ಥೆ ಕ್ಲಿಕ್ ಆದರೆ ಉಳಿದ ನಾಲ್ಕೂ ನಗರ ಪಾಲಿಕೆಗಳಿಗೂ ಈ ವ್ಯವಸ್ಥೆಯನ್ನ ವಿಸ್ತರಿಸುವ ಚಿಂತನೆ ಕೂಡ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಇನ್ನಾದರೂ ಮನೆ ಮನೆಗಳಿಂದ ಕಸ ಸಂಗ್ರಹ ಸರಿಯಾಗಿ ನಡೆದು, ನಗರ ಗಾರ್ಬೆಜ್ ಸಿಟಿ ಆಗ್ತಿರೋದಕ್ಕೆ ಬ್ರೇಕ್ ಬೀಳುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:19 pm, Fri, 26 June 26