ಪಾದಚಾರಿಗಳ ಹಿತದೃಷ್ಟಿಯಿಂದ ಜಿಬಿಎಯಿಂದ ಹೊಸ ಪ್ಲಾನ್​​​: ಬೆಸ್ಕಾಂ, ಕೆಪಿಟಿಸಿಎಲ್​, ಜಲಮಂಡಳಿಗೆ ಹೊಸ ಟಾಸ್ಕ್

ಬೆಂಗಳೂರಿನ ಸಾರ್ವಜನಿಕ ಸ್ಥಳಗಳೇ ದಿನದಿಂದ ದಿನಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಅದರಲ್ಲೂ ಫುಟ್​ ಪಾತ್​, ರಸ್ತೆಗಳಲ್ಲಿ ಜನರು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿಯಿದೆ. ಹೀಗಾಗಿ ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಹೊಸ ಉಪಕ್ರಮವೊಂದರ ಜಾರಿಗೆ ಚಿಂತನೆ ನಡೆಸಿದೆ. ಬೆಸ್ಕಾಂ, ಕೆಪಿಟಿಸಿಎಲ್​, ಜಲಮಂಡಳಿ ಸೇರಿ ನಾಗರಿಕಾ ಸೇವಾ ಸಂಸ್ಥೆಗಳಿಗೆ ಜಿಬಿಎ ಹೊಸ ಟಾಸ್ಕ್ ಕೊಡಲಿದೆ.

ಪಾದಚಾರಿಗಳ ಹಿತದೃಷ್ಟಿಯಿಂದ ಜಿಬಿಎಯಿಂದ ಹೊಸ ಪ್ಲಾನ್​​​: ಬೆಸ್ಕಾಂ, ಕೆಪಿಟಿಸಿಎಲ್​, ಜಲಮಂಡಳಿಗೆ ಹೊಸ ಟಾಸ್ಕ್
ಸಾಂದರ್ಭಿಕ ಚಿತ್ರ

Updated on: Oct 14, 2025 | 8:00 AM

ಬೆಂಗಳೂರು, ಅಕ್ಟೋಬರ್ 14: ಬೆಂಗಳೂರು (Bengaluru) ಎಲ್ಲದರಲ್ಲೂ ಮುಂದು ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ. ಅದರಲ್ಲೂ ಕೊಲೆ, ದರೋಡೆ, ಆತ್ಮಹತ್ಯೆ ಪ್ರಕರಣಗಳಲ್ಲೂ ಬೆಂಗಳೂರು ಮುಂದೆ ಎಂಬುದು ವಿಪರ್ಯಾಸ. ಇದೀಗ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲೂ ಬೆಂಗಳೂರು ಮುಂದೆ ಎಂಬುದು ಸಾಬೀತಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (NCRB) ಅಂಕಿಅಂಶಗಳ ಪ್ರಕಾರ, 2023 ರಲ್ಲಿ ಬೆಂಗಳೂರಿನಲ್ಲಿ 292 ಪಾದಚಾರಿ ಸಾವುಗಳು ಸಂಭವಿಸಿದ್ದವು. ಪಾದಾಚಾರಿ ಮಾರ್ಗಗಳ ಅತಿಕ್ರಮಣ, ಹಾಳಾದ ವಿದ್ಯುತ್​ ಕಂಬಗಳು, ತಂತಿಗಳು, ಟ್ರಾನ್ಸ್​ಫಾರ್ಮರ್​​ಗಳು ಇತ್ಯಾದಿ ಅವ್ಯವಸ್ಥೆಗಳೇ ಪಾದಾಚಾರಿಗಳಿಗೆ ಕುತ್ತು ತಂದೊಡ್ಡುತ್ತಿದೆ.

ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್​ ರಾವ್​ ಸಾರ್ವಜನಿಕ ಸ್ಥಳಗಳ ಪರಿಶೀಲನೆ ವೇಳೆ ಈ ಗಂಭೀರ ಸಮಸ್ಯೆಯನ್ನ ಮನಗಂಡಿದ್ದಾರೆ. ಹೀಗಾಗಿಯೇ ಬೆಸ್ಕಾಂ, ಕೆಪಿಟಿಸಿಎಲ್​, ಜಲಮಂಡಳಿ ಸೇರಿ ಯಾವ್ಯಾವ ನಾಗರಿಕ ಸೇವಾ ಸಂಸ್ಥೆಗಳು ಫುಟ್​​ ಪಾತ್​, ರಸ್ತೆ ಸೇರಿ ಸಾರ್ವಜನಿಕ ಸ್ಥಳಗಳನ್ನ ಬಳಸಿಕೊಳ್ಳುತ್ತವೆಯೋ, ಅವೆಲ್ಲವೂ ತಮಗೆ ಸೇರಿದ ಪ್ರಾಪರ್ಟಿಗಳ ಮೇಲೆ ಸ್ಥಳೀಯ ಅಧಿಕಾರಿಗಳ ಮಾಹಿತಿ ಸಹಿತ ಕ್ಯೂರ್​ ಕೋಡ್​ ಅಂಟಿಸಲು ಸೂಚನೆ ನೀಡುವುದಾಗಿ ಜಿಬಿಎ ಹೇಳಿದೆ.

ಅಧಿಕಾರಿಗಳ ಮಾಹಿತಿ ಜತೆಗೆ, ಕ್ಯೂರ್​ ಕೋಡ್​ನಲ್ಲಿ ದೂರವಾಣಿ ಸಂಖ್ಯೆ ಕೂಡ ಇರುವುದರಿಂದ ಸಾರ್ವಜನಿಕರು ನೇರವಾಗಿ ಕರೆ ಮಾಡಿ ದೂರು ನೀಡಬಹುದಾಗಿದೆ. ಇದರಿಂದಾಗಿ ಸಮಸ್ಯೆಯ ಪರಿಹಾರಕ್ಕೆ ತಕ್ಷಣದ ಕ್ರಮ ಕೈಗೊಳ್ಳಬಹುದು ಎಂಬುದು ಜಿಬಿಎ ಲೆಕ್ಕಾಚಾರ.

ಇದನ್ನೂ ಓದಿ: ಬೆಂಗಳೂರು: ಸೋಷಿಯಲ್ ಮೀಡಿಯಾದಿಂದ ಹೆಚ್ಚಿದ ಅಪರಾಧ, ಕಳೆದ ವರ್ಷಕ್ಕಿಂತ ಶೇ 21 ಹೆಚ್ಚಳ

ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಪಾದಾಚಾರಿಗಳ ಪರದಾಟ ಕೇಳುವವರೇ ಇಲ್ಲದಂತಾಗಿದ್ದು, ಅವ್ಯವಸ್ಥೆಗೆ ಕೊನೆ ಬಿದ್ದಿಲ್ಲ. ಇನ್ನಾದರೂ ಬೆಂಗಳೂರಿನ ರಸ್ತೆಗಳು ಹಾಗೂ ಫುಟ್​​ಪಾತ್​ಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣವಾಗಲಿ.

ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us