ಕೋಗಿಲು ಅಕ್ರಮ ವಾಸಿಗಳಿಗೆ ಜಮೀರ್ ಗುಡ್ ನ್ಯೂಸ್: ಮೊದಲ ಹಂತದಲ್ಲಿ 26 ಮನೆ ಹಂಚಿಕೆಗೆ ಸಿದ್ಧತೆ

ಬಿಜೆಪಿ ವಿರೋಧದ ನಡುವೆಯೂ ಬೆಂಗಳೂರಿನ ಕೋಗಿಲು ಅಕ್ರಮವಾಸಿಗಳಿಗೆ ಮನೆ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. 26 ಮನೆಗಳನ್ನು ಇಂದು ಹಂಚುವ ಸಾಧ್ಯತೆ ಇದೆ. ವಸತಿ ಸಚಿವ ಜಮೀರ್ ಅಹ್ಮದ್ ಅವರು ಕರ್ನಾಟಕದವರಾಗಿ, ಐದು ವರ್ಷ ಕೋಗಿಲಿನಲ್ಲಿ ವಾಸವಿದ್ದವರಿಗೆ ಮಾತ್ರ ಮನೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕೋಗಿಲು ಅಕ್ರಮ ವಾಸಿಗಳಿಗೆ ಜಮೀರ್ ಗುಡ್ ನ್ಯೂಸ್: ಮೊದಲ ಹಂತದಲ್ಲಿ 26 ಮನೆ ಹಂಚಿಕೆಗೆ ಸಿದ್ಧತೆ
ಕೋಗಿಲು ಅಕ್ರಮ ವಾಸಿಗಳಿಗೆ ಜಮೀರ್ ಗುಡ್ ನ್ಯೂಸ್
Edited By:

Updated on: Jan 08, 2026 | 1:18 PM

ಬೆಂಗಳೂರು, ಜನವರಿ 8: ಕೋಗಿಲು ಲೇಔಟ್ (Kogilu Layout) ಅಕ್ರಮವಾಸಿಗಳಿಗೆ ಮನೆ ಭಾಗ್ಯ ಸಿಗುವ ಕಾಲ ಸನ್ನಿಹಿತವಾಗುತ್ತಿದೆ. ಬಿಜೆಪಿ ನಾಯಕರ ವಿರೋಧದ ನಡುವೆಯೂ ಸರ್ಕಾರ ಅಕ್ರಮವಾಸಿಗಳಿಗೆ ಮನೆ ಹಂಚಲು ನಿರ್ಧರಿಸಿದೆ. ಇಂದೇ 26 ಮನೆಗಳ ಹಂಚಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸುಳಿವು ನೀಡಿರುವ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed), 26 ಮನೆಗಳನ್ನು ಕೊಡಬಹುದು. ಉಳಿದ ಅರ್ಜಿಗಳ ಪರಿಶೀಲನೆಯಾಗುತ್ತಿದೆ ಎಂದಿದ್ದಾರೆ. ಹಾಗೆಯೇ ಅರ್ಜಿ ಹಾಕಿದ ಎಲ್ಲರಿಗೂ ಕೊಡಲ್ಲ. ಹೊರಗಿನವರಿಗಂತೂ ಮನೆ ಕೊಡುವುದೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಮನೆ ಹಂಚಿಕೆಗೆ ಮಾನದಂಡವೇನು?

  • ಕರ್ನಾಟಕದ ಬೇರೆ ಭಾಗದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರಬೇಕು.
  • ಕೋಗಿಲು ಲೇಔಟ್‌ನಲ್ಲಿ ಐದು ವರ್ಷದಿಂದ ವಾಸ ಇರಬೇಕು.
  • ಮಾತೃ ಭಾಷೆ ಬೇರೆ ಆಗಿದ್ದರೂ ಕರ್ನಾಟಕದವರಾಗಿರಬೇಕು.
  • ಒಂದಕ್ಕಿಂತ ಹೆಚ್ಚಿನ ಅರ್ಜಿ ಸಲ್ಲಿಸಿದ್ದಲ್ಲಿ ರೇಷನ್ ಕಾರ್ಡ್ ಪರಿಗಣನೆ.
  • ವೋಟರ್ ಐಡಿ, ರೇಷನ್ ಕಾರ್ಡ್, ಮಕ್ಕಳ ಶಾಲಾ ದಾಖಲಾತಿ ಪತ್ರ ಪರಿಗಣನೆ.

ಹೀಗಾಗಿಯೇ ವಸತಿ ಸಚಿವ ಜಮೀರ್ ಅಹ್ಮದ್, ಹೊರಗಿನವ್ರಿಗೆ ಮನೆ ಕೊಡಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಬಿಜೆಪಿ ನಾಯಕರು ಮಾತ್ರ ಬಾಂಗ್ಲಾದವರಿಗೆ ಮನೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋಗಿಲು ನಿರಾಶ್ರಿತರ ಪಟ್ಟಿ ರಿಲೀಸ್ ಮಾಡಿದ ಸರ್ಕಾರ

ಕೋಗಿಲು ಲೇಔಟ್‌ನಲ್ಲಿ ಸರ್ವೆ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು ಅರ್ಹರ ಪಟ್ಟಿ ಸಿದ್ಧಪಡಿಸಿದ್ದಾರೆ. ಯಾವ ಭಾಷೆಯ ಎಷ್ಟೆಷ್ಟು ಕುಟುಂಬವಿದೆ ಎಂದು ಪಟ್ಟಿ ತಯಾರಿಸಿದ್ದು, ಅದನ್ನು ಸರ್ಕಾರ ರಿಲೀಸ್ ಮಾಡಿದೆ. ಸರ್ಕಾರ ರಿಲೀಸ್ ಮಾಡಿರುವ ನಿರಾಶ್ರಿತರ ಪಟ್ಟಿ ‘ಟಿವಿ9’ಗೆ ಲಭ್ಯವಾಗಿದೆ.

ಕೋಗಿಲು ನಿರಾಶ್ರಿತರ ಕುಟುಂಬಗಳ ಭಾಷಾವಾರು ಪಟ್ಟಿ

  • ಕನ್ನಡ ಭಾಷಿಕರು – 108
  • ಉರ್ದು ಮಾತನಾಡುವವರು – 103
  • ತಮಿಳು ಭಾಷಿಕರು – 13
  • ಹಿಂದಿ ಭಾಷಿಕರು – 11
  • ಮರಾಠಿ ಮಾತನಾಡುವವರು – 03
  • ತೆಲುಗು ಭಾಷಿಕ ಕುಟುಂಬ – 03

ಸರ್ಕಾರವೇನೋ ಪಟ್ಟಿ ಸಿದ್ಧ ಮಾಡಿದೆ. 26 ಮನೆಗಳ ಹಂಚಿಕೆಗೆ ಸಿದ್ಧತೆ ಮಾಡಿಕೊಂಡಿದೆ. ಆದರೆ, ಕೋಗಿಲು ನಿವಾಸಿಗಳು ಮಾತ್ರ ಬೇರೆ ಯಾರಿಗೋ ಮನೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಐದಾರು ಜನಕ್ಕೆ ಕರೆ ಬಂದಿದೆ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ:  ಕೋಗಿಲು ಲೇಔಟ್: ಅಕ್ರಮ ಮನೆಗೆ 1 ರಿಂದ 2 ಲಕ್ಷ ರೂ. ವಸೂಲಿ, ಸರ್ಕಾರಿ ಭೂಮಿ ಕಬಳಿಸಿ ತನ್ನದೇ ಹೆಸರಿಟ್ಟಿದ್ದ ಆರೋಪಿ!

ಮತ್ತೊಂದೆಡೆ, ಕೋಗಿಲು ಲೇಔಟ್‌ನ 20ಕ್ಕೂ ಹೆಚ್ಚು ನಿವಾಸಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯಾವಾಗ ಬಂದಿದ್ದಿರಿ, ಯಾರಿಗೆ ಎಷ್ಟು ದುಡ್ಡು ಕೊಟ್ಟಿದ್ದಿರಿ, ಕರೆಂಟ್ ಹೇಗೆ ಬಂತು ಎಂದೆಲ್ಲ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ಸೈಟ್ ಅತಿಕ್ರಮ ಮಾಡಿದ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us