ಹಲಾಲ್ VS ಜಟ್ಕಾ ಕಟ್: ಯುಗಾದಿಗೆ ಮೊದಲು ಭುಗಿಲೆದ್ದ ಮತ್ತೊಂದು ವಿವಾದ, ಎರಡೂ ಪ್ರಾಣಿವಧೆ ಪದ್ಧತಿಗಳ ವಿವರ ಇಲ್ಲಿದೆ

ಕರ್ನಾಟಕದಲ್ಲಿ ಯುಗಾದಿ ಸಂಭ್ರಮ ಮನೆಮಾಡುತ್ತಿರುವ ಸಂದರ್ಭದಲ್ಲಿಯೇ ಹಲಾಲ್ ಕಟ್ ವಿವಾದ ತಲೆಎತ್ತಿದೆ. ಹಿಂದೂ ಜನಜಾಗೃತಿ ಸಮಿತಿ ನಡೆಸುತ್ತಿರುವ ‘ಬಾಯ್ಕಾಟ್ ಹಲಾಲ್’ ಹೋರಾಟಕ್ಕೆ ಶ್ರೀರಾಮಸೇನೆ ಸಹ ಬೆಂಬಲ ಸೂಚಿಸಿದೆ

ಹಲಾಲ್ VS ಜಟ್ಕಾ ಕಟ್: ಯುಗಾದಿಗೆ ಮೊದಲು ಭುಗಿಲೆದ್ದ ಮತ್ತೊಂದು ವಿವಾದ, ಎರಡೂ ಪ್ರಾಣಿವಧೆ ಪದ್ಧತಿಗಳ ವಿವರ ಇಲ್ಲಿದೆ
ಶ್ರೀರಾಮಸೇನೆಯ ನಾಯಕ ಪ್ರಮೋದ್ ಮುತಾಲಿಕ್
Edited By:

Updated on: Mar 30, 2022 | 10:37 AM

ಬೆಂಗಳೂರು: ಕರ್ನಾಟಕದಲ್ಲಿ ಯುಗಾದಿ ಸಂಭ್ರಮ ಮನೆಮಾಡುತ್ತಿರುವ ಸಂದರ್ಭದಲ್ಲಿಯೇ ಹಲಾಲ್ ಕಟ್ ವಿವಾದ ತಲೆಎತ್ತಿದೆ. ಹಿಂದೂ ಜನಜಾಗೃತಿ ಸಮಿತಿ ನಡೆಸುತ್ತಿರುವ ‘ಬಾಯ್ಕಾಟ್ ಹಲಾಲ್’ ಹೋರಾಟಕ್ಕೆ ಶ್ರೀರಾಮಸೇನೆ ಸಹ ಬೆಂಬಲ ಸೂಚಿಸಿದೆ. ವಿವಾದ ಕುರಿತು ಬುಧವಾರ ಹೇಳಿಕೆ ನೀಡಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ‘ಭಾರತ ಹಾಗೂ ಕರ್ನಾಟಕವನ್ನು ಹಲಾಲ್ ಮುಕ್ತ ಮಾಡಬೇಕಾಗಿದೆ. ಎಲ್ಲಾ ಹಿಂದೂಗಳು ಹಲಾಲ್ ಉತ್ಪನ್ನಗಳನ್ನ ಬಹಿಷ್ಕರಿಸಬೇಕು. ಹಿಂದೆ ಅಕ್ಬರ್, ಔರಂಗಜೇಬ್ ಹಿಂದೂಗಳ ಮೇಲೆ ಟ್ಯಾಕ್ಸ್ ಹೇರುತ್ತಿದ್ದರು. ಈಗ ಹಲಾಲ್ ಎಂಬ ವಿಚಾರವನ್ನು ಹೇರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಸ್ಲಾಮೀಯರು ಹಲಾಲ್ ಬೇಕಿದ್ರೆ ಇರಿಸಿಕೊಳ್ಳಲಿ. ಆದರೆ ಹಿಂದೂಗಳು ಕೂಡ ಹಲಾಲ್ ಸರ್ಟಿಫಿಕೇಟ್ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಿಸಲಾಗಿದೆ. ಹಿಂದೂಗಳಿಗೆ ಹಲಾಲ್ ಸರ್ಟಿಫಿಕೇಟ್ ಅಗತ್ಯ ಇಲ್ಲ. ಹಲಾಲ್ ಸರ್ಟಿಫಿಕೇಟ್ ಕೊಡೋದು ಮುಸ್ಲಿಂ ಸಂಸ್ಥೆ. ಹಲಾಲ್ ಸರ್ಟಿಫಿಕೇಟ್​ಗೆ ಕೊಡುವ ದುಡ್ಡು ದೇಶ ವಿರೋಧಿ ಕೃತ್ಯಕ್ಕೆ ಬಳಕೆಯಾಗುತ್ತದೆ. ಪಿಎಫ್​ಐ, ಎಸ್​ಡಿಪಿಐ, ಎಂಐಂನಂಥ ಸಂಘಟನೆಗಳಿಗೆ ಈ ಹಣ ಹೋಗುತ್ತದೆ. ಹಲಾಲ್ ಸರ್ಟಿಫಿಕೇಟ್ ನೀಡೋದು ದೊಡ್ಡ ಉದ್ಯಮ ಆಗಿದೆ. ಮುಂದೆ ಇದು ದೇಶಕ್ಕೆ ಅಪಾಯಕಾರಿ ಆಗಲಿದೆ. ಹೀಗಾಗಿ ಹಲಾಲ್ ಮುಕ್ತ ಕರ್ನಾಟಕ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಮುಸ್ಲಿಮೇತರರು ಮಾರಾಟ ಮಾಡುವ ಮಾಂಸವನ್ನು ಮುಸ್ಲಿಮರು ತಿನ್ನುವುದಿಲ್ಲ. ಬೇರೆಯವರ ಬಳಿ ಮಾಂಸ ತೆಗೆದುಕೊಂಡ್ರೆ ಅದು ಅವರಿಗೆ ನಿಷಿದ್ಧವಾಗುತ್ತದೆ. ಅಕ್ರಮ ಚಟುವಟಿಕೆ ಮಾಡಿ ಜೈಲಿಗೆ ಹೋದವರಿಗಾಗಿ ಹಲಾಲ್ ಪ್ರಮಾಣಪತ್ರಕ್ಕೆ ಪಡೆಯುವ ಹಣವನ್ನು ಖರ್ಚು ಮಾಡುತ್ತಾರೆ. ದೆಹಲಿಯಲ್ಲಿ ನಡೆದ ಶಾಹಿನ್​ ಬಾಗ್​​ನಲ್ಲಿ ನಡೆದ ಪ್ರತಿಭಟನೆಗೆ ₹ 14 ಕೋಟಿಯಷ್ಟು ಹಲಾಲ್​​ ಹಣ ಬಳಕೆ ಆಗಿದೆ ಎಂದರು.

ಹಲಾಲ್ ಪ್ರಮಾಣ ಪತ್ರ ನೀಡುವುದು ‘ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್’. ಈ ಹಣವನ್ನು ಮುಸ್ಲಿಮ್ ಸಂಘಟನೆಗಳು ಹಿಜಾಬ್ ಹೋರಾಟ, ಹಿಂದೂ ವಿರೋಧಿ ಕಾನೂನು ಹೋರಾಟಕ್ಕೆ ಬಳಕೆ ಮಾಡಲಾಗುತ್ತವೆ ಎಂದು ಹಿಂದುತ್ವವಾದಿ ಸಂಘಟನೆಗಳು ದೂರಿವೆ. ಹಿಂದೂಗಳಿಗೆ ಹಲಾಲ್, ಹಲಾಲ್ ಅಲ್ಲದ ಪದಾರ್ಥಕ್ಕೆ ವ್ಯತ್ಯಾಸ ಇಲ್ಲ. ಆದರೆ ಮುಸಲ್ಮಾನರಿಗೆ ಹಲಾಲ್ ಇಲ್ಲದೇ ಇರುವುದು ಹರಾಮ್ ಅಂದರೆ ನಿಷಿದ್ಧವಾಗುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ. ಹೊಟೆಲ್​ಗಳಿಂದ ಹಲಾಲ್ ಸರ್ಟಿಫಿಕೇಟ್​ಗಳನ್ನು ತೆಗೆಸುವ ಕೆಲಸವನ್ನೂ ಈ ಸಂಘಟನೆಗಳು ಆರಂಭಿಸಿವೆ. ಬೆಂಗಳೂರಿನ ವಿಜಯನಗರದ ಎರಡು-ಮೂರು ಹೋಟೆಲ್​ಗಳಲ್ಲಿ ಈಗಾಗಲೇ ಹಲಾಲ್ ಬೋರ್ಡ್ ‌ತೆಗೆಯಲಾಗಿದೆ ಎಂದು ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.

ಹಲಾಲ್ VS ಜಟ್ಕಾ ಕಟ್
ರಾಜ್ಯದಲ್ಲಿ ಹಲಾಲ್ ಮತ್ತು ಜಟ್ಕಾ ಕಟ್ ಪ್ರಾಣಿವಧೆ ಪದ್ಧತಿಗಳ ಬಳಕೆ ಕುರಿತ ವಿವಾದ ಭುಗಿಲೆದ್ದಿದೆ. ಹಲಾಲ್ ವಿರುದ್ಧ ಅಭಿಯಾನ ನಡೆಸುತ್ತಿರುವ ಹಿಂದುತ್ವ ಪರ ಇರುವ ಸಂಘಟನೆಗಳು ಯುಗಾದಿ ಬಳಿಕ ಹೊಸ್ತೊಡಕಿಗೆ ಹಲಾಲ್ ಮಾಂಸ ಬಹಿಷ್ಕಾರ ಹಾಕಬೇಕು ಎಂದು ಕರೆ ನೀಡಿವೆ. ಮತ್ತೊಂದೆಡೆ ಹಿಂದೂ ಹೋಟೆಲ್, ಹಿಂದೂಗಳ ಮಟನ್ ಸ್ಟಾಲ್‌ಗಳಲ್ಲಿ ಹಲಾಲ್ ಬೋರ್ಡ್ ತೆರವು ಅಭಿಯಾನವೂ ಆರಂಭವಾಗಿದೆ. ರಾಷ್ಟ್ರ ರಕ್ಷಣಾ ಪಡೆಯಿಂದ ಕರಪತ್ರ ಅಭಿಯಾನ ನಡೆಯುತ್ತಿದೆ.

‘ಹಲಾಲ್ ಸರ್ಟಿಫಿಕೇಟ್ ಕಡ್ಡಾಯವಲ್ಲ. ಹಲಾಲ್ ಮಾಂಸ ಬಳಕೆ ಹಿಂದೂಗಳಿಗೆ ಒಳಿತಲ್ಲ, ಅದು ಅಪಚಾರ. ತಕ್ಷಣವೇ ಅಂಗಡಿಯಲ್ಲಿನ ಹಲಾಲ್ ಬೋರ್ಡ್ ತೆರವು ಮಾಡಿ. ಹೋಟೆಲ್‌ಗಳಲ್ಲಿ ಹಲಾಲ್ ಮಾಂಸ ಬಳಸಬೇಡಿ’ ಎಂದು ಕರಪತ್ರ ಹಂಚಿಕೆ ಮಾಡಲಾಗುತ್ತಿದೆ. ಪ್ರಮುಖ ಮಾಂಸಾಹಾರಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಮಾಂಸ ಮಾರಾಟ ಮಳಿಗೆಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. FSSAI ಸರ್ಟಿಫಿಕೇಟ್ ಮಾತ್ರ ಕಾನೂನು ಪ್ರಕಾರ ಕಡ್ಡಾಯ. ಹೀಗಾಗಿ ಹಿಂದೂಗಳು ಹಲಾಲ್ ಮಾರ್ಕ್‌ ಬಳಸಬಾರದು ಎಂದು ಆಗ್ರಹಿಸಲಾಗಿದೆ. ಹಿಂದೂ ಜನ ಜಾಗೃತಿ ಸಮಿತಿ ಸದಸ್ಯರು ಇಂದು ಸಚಿವ ಉಮೇಶ್ ಕತ್ತಿ ಅವರನ್ನು ಭೇಟಿಯಾಗಿ, ಪ್ರತ್ಯೇಕ ಮಾರ್ಗಸೂಚಿಗೆ ಮನವಿ ಮಾಡಲಿದ್ದಾರೆ.

ಜಟ್ಕಾ ಕಟ್ ಎಂದರೇನು?
ಬಹುತೇಕ ಹಿಂದೂಗಳು ಅನುಸರಿಸುವ ಪದ್ಧತಿ ಇದು. ಈ ಪದ್ಧತಿಯನ್ನು ಒಂದು ಪ್ರಾಣಿಯ ವಧೆ ಒಂದೇ ಬಾರಿಗೆ ನಡೆಯುತ್ತದೆ. ಸಾವಿನಲ್ಲೂ ಸಹ ನೋವು ಅನುಭವಿಸಲು ಅವಕಾಶ ಕೊಡದೇ ಪ್ರಾಣಿ ಜೀವ ಬಿಡಲು ಅವಕಾಶ ಕೊಡಲಾಗುತ್ತದೆ. ನಮ್ಮ ಹಿರಿಯರು ಪಾಲನೇ ಮಾಡುತ್ತಿದ್ದ ಪದ್ಧತಿ ಇದು. ಜಟ್ಕಾ ಕಟ್ ಅಂದೆ ಬಲಿ ದೈವಬಲಿ ಎಂದು ಕರೆಯುತ್ತಾರೆ. ನಾವು ಯಾವುದೇ ಆಹಾರವನ್ನು ಸೇವಿಸುವ ಮೂದಲು ದೇವರಿಗೆ ನೈವೇದ್ಯ ಅರ್ಪಿಸಿ ತಿನ್ನುವುದು ಪೂರ್ವಜರು ಕಲಿಸಿಕೊಟ್ಟ ಕ್ರಿಯೆ. ಇದಕ್ಕೆ ಅನುಗುಣವಾಗಿ ಈ ಪದ್ಧತಿ ಇದೆ ಎಂದು ಹಿಂದುತ್ವ ಪರ ಸಂಘಟನೆಗಳು ಹೇಳುತ್ತವೆ.

ಹಲಾಲ್​ ಕಟ್​ ಎಂದರೇನು?
ವಧಿಸುವ ಕೊಡುವ ಪ್ರಾಣಿಯ ರಕ್ತನಾಳವನ್ನು ಕತ್ತರಿಸುವ ಮೂಲಕ ಪ್ರಾಣಿಯ ದೇಹದಲ್ಲಿರುವ ರಕ್ತವನ್ನು ಪೂರ್ತಿ ಹೊರಹಾಕಲಾಗುತ್ತದೆ. ಇದನ್ನು ಹಲಾಲ್​ ಕಟ್​ ಎಂದು ಕರೆಯುತ್ತಾರೆ. ಇದು ಇಸ್ಲಾಂ ಧರ್ಮದ ನಿಯಮಗಳಿಗೆ ಅನುಗುಣವಾಗಿದೆ. ಈ ಮೂಲಕ ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ಹೊರಗೆ ಬರುತ್ತವೆ. ಇದರಿಂದ ಮಾಂಸ ಶುದ್ಧವಾಗಿರುತ್ತದೆ ಎಂದು ಮುಸ್ಲಿಂ ಮುಖಂಡರು ಹೇಳುತ್ತಾರೆ.

ಇದನ್ನೂ ಓದಿ: ಹಲಾಲ್ ಕಟ್ ಅಂತ ಬೋರ್ಡ್ ಹಾಕಿರುವ ಮುಸಲ್ಮಾನರ ಮಾಂಸದ ಅಂಗಡಿಗಳಿಗೆ ಹೋಗುವುದನ್ನು ನಿಲ್ಲಿಸಿ: ಕಾಳಿ ಸ್ವಾಮಿ

ಇದನ್ನೂ ಓದಿ: ಈಗ ಹಲಾಲ್ ವಿವಾದ, ಯುಗಾದಿ ವರ್ಷತೊಡಕು ಆಚರಣೆ ಸಮಯದಲ್ಲಿ ಹಲಾಲ್ ಮಾಂಸ ಖರೀದಿ ಮಾಡಬೇಡಿ -ಕರೆ

Published On - 10:21 am, Wed, 30 March 22

Web contact

TV9 Kannada

Read More
Follow Us