ಬೆಂಗಳೂರಿನ ಡಯಾಗ್ನೋಸ್ಟಿಕ್ ಲ್ಯಾಬ್‌ನಲ್ಲಿ ಮಹಿಳೆಗೆ ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪ! ಇಬ್ಬರ ವಿರುದ್ಧ ಕೇಸ್ ದಾಖಲು

ಬೆಂಗಳೂರಿನ ಬ್ಯಾಡರಹಳ್ಳಿಯ ಖಾಸಗಿ ಲ್ಯಾಬ್‌ನಲ್ಲಿ ತಪಾಸಣೆಗೆ ಬಂದಿದ್ದ ಮಹಿಳೆಯ ಮೇಲೆ ಅಸಭ್ಯ ವರ್ತನೆ ಮಾಡಿದ ಹಾಗೂ ಜೀವಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ರಕ್ತದ ಮಾದರಿ ಸಂಗ್ರಹದ ವೇಳೆ ನಡೆದ ನಿರ್ಲಕ್ಷ್ಯದ ಬಗ್ಗೆ ಪ್ರಶ್ನಿಸಿದ ಮಹಿಳೆಗೆ ಮನೆಗೆ ಬಂದು ಬೆದರಿಕೆ ಹಾಕಿದ್ದ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರಿನ ಡಯಾಗ್ನೋಸ್ಟಿಕ್ ಲ್ಯಾಬ್‌ನಲ್ಲಿ ಮಹಿಳೆಗೆ ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪ! ಇಬ್ಬರ ವಿರುದ್ಧ ಕೇಸ್ ದಾಖಲು
ಲ್ಯಾಬ್ ಮ್ಯಾನೇಜರ್ ಮತ್ತು ಸಿಬ್ಬಂದಿ ಮೇಲೆ ಎಫ್​ಐಆರ್
Edited By:

Updated on: Apr 29, 2026 | 10:41 AM

ಬೆಂಗಳೂರು, ಏಪ್ರಿಲ್ 29: ನಗರದ ಬ್ಯಾಡರಹಳ್ಳಿ ವ್ಯಾಪ್ತಿಯ ಖಾಸಗಿ ಡಯಾಗ್ನೋಸ್ಟಿಕ್ ಲ್ಯಾಬ್‌ವೊಂದರಲ್ಲಿ ತಪಾಸಣೆಗೆ ಬಂದಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿ, ಬಳಿಕ ಜೀವಬೆದರಿಕೆ ಹಾಕಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಲ್ಯಾಬ್ (Lab) ಮ್ಯಾನೇಜರ್ ಪ್ರಭಾಕರ್ ಹಾಗೂ ಸಿಬ್ಬಂದಿ ಪ್ರದೀಪ್ ಎಂಬುವವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಇತ್ತೀಚೆಗೆ ಮಹಿಳೆಯೊಬ್ಬರು ಥೈರಾಯ್ಡ್ ತಪಾಸಣೆಗಾಗಿ ಬ್ಯಾಡರಹಳ್ಳಿಯ ಪ್ರಕಾಶ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗೆ ತೆರಳಿದ್ದರು. ಈ ವೇಳೆ ರಕ್ತದ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ಲ್ಯಾಬ್ ತಂತ್ರಜ್ಞ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ರಕ್ತ ತೆಗೆಯುವಾಗ ನೋವಾಗುತ್ತಿದೆ ಎಂದು ಮಹಿಳೆ ಕಿರುಚಿಕೊಂಡರೂ ನಿರ್ಲಕ್ಷ್ಯ ವಹಿಸಿ ಬಲವಂತವಾಗಿ ರಕ್ತ ತೆಗೆಯಲಾಗಿದೆ. ಇದರ ಪರಿಣಾಮವಾಗಿ ಮಹಿಳೆಯ ಕೈನಲ್ಲಿ ರಕ್ತ ಹೆಪ್ಪುಗಟ್ಟಿ, ತೀವ್ರ ಸ್ವರೂಪದ ಊತ ಕಾಣಿಸಿಕೊಂಡಿದೆ. ಈ ಬಗ್ಗೆ ಅದೇ ಲ್ಯಾಬ್ ತಂತ್ರಜ್ಞರ ಬಳಿ ಕೇಳಿದಾಗ ಐಸ್ ಪ್ಯಾಕ್ ಇಟ್ಟುಕೊಳ್ಳುವಂತೆ ತಿಳಿಸಿದ್ದರು. ಇದು ಹೆಮಟೋಮಾ ಆದ್ದರಿಂದ ಬೇರೆ ವೈದ್ಯರ ಬಳಿ ಟೆಸ್ಟ್ ಮಾಡಿಸಿಕೊಳ್ಳಿ ಎಂದೂ ಹೇಳಿದ್ದರು ಎಂದು ಮಹಿಳೆ ಎಫ್​ಐಆರ್​ನಲ್ಲಿ ತಿಳಿಸಿದ್ದಾರೆ.

ಮಹಿಳೆಗೆ ಜಿವ ಬೆದರಿಕೆ

ಇದಾದ 2-3 ದಿನಗಳ ನಂತರ ನೋವು ಮತ್ತು ಊತ ಹೆಚ್ಚಾಗಿದ್ದು, ಲ್ಯಾಬ್​ನವರಿಗೆ ತಿಳಿಸಿದಾಗ ಅವರು ಆಕೆಯ ಮನೆಗೆ ಬಂದು, ಮಾತನಾಡಿ ಬಗೆಹರಿಸಿಕೊಳ್ಳೋಣವೆಂದು ಹೇಳಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ಆದರೆ ಆಕೆಯ ಮನೆಯಿಂದ ಹೊರಡುವ ಸಮಯದಲ್ಲಿ ಈ ವಿಷಯವನ್ನು ಹೊರಗೆ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ ಪೂಜಾ ದತ್ತಾ ಬೆತ್ತಲೆ ಶವ ಪತ್ತೆ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಸಿಕ್ತು ಹಲವು ಆಘಾತಕಾರಿ ಮಾಹಿತಿ!

ಸದ್ಯ ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದು, ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ವೈದ್ಯಕೀಯ ಸೇವೆ ನೀಡುವ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಸಿಬ್ಬಂದಿಗಳ ನಡವಳಿಕೆಯ ಬಗ್ಗೆ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:40 am, Wed, 29 April 26

Follow Us