ವಿಮಾನ ನಿಲ್ದಾಣಕ್ಕೆ ಹೋಗುವ, ಅಲ್ಲಿಂದ ಬರುವ ಪ್ರಯಾಣಿಕರೇ ಗಮನಿಸಿ: ಈ ಫ್ಲೈಓವರ್ ರಾತ್ರಿ ಬಂದ್
ಹೆಬ್ಬಾಳ ಫ್ಲೈಓವರ್ ರಾತ್ರಿ ಸಂಚಾರ ನಿಷೇಧ: ಬಿಬಿಎಂಪಿಯು ದುರಸ್ತಿ ಮತ್ತು ಡಾಂಬರೀಕರಣ ಕಾಮಗಾರಿ ಕೈಗೊಳ್ಳುವ ಕಾರಣ ಹೆಬ್ಬಾಳ ಮೇಲ್ಸೇತುವೆಯ ಒಂದು ಭಾಗದಲ್ಲಿ ಶನಿವಾರ ವರೆಗೆ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಸಂಚಾರ ನಿಷೇಧದ ಸಮಯ, ಪರ್ಯಾಯ ಮಾರ್ಗ ಹಾಗೂ ಇತರ ವಿವರಗಳು ಇಲ್ಲಿವೆ.

ಬೆಂಗಳೂರು, ಜೂನ್ 19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ರಸ್ತೆ ದುರಸ್ತಿ ಮತ್ತು ಡಾಂಬರೀಕರಣ ಕಾಮಗಾರಿ ಕೈಗೊಳ್ಳುತ್ತಿರುವ ಕಾರಣ ಹೆಬ್ಬಾಳ ಮೇಲ್ಸೇತುವೆಯ (Hebbal Flyover) ಒಂದು ಭಾಗದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಬುಧವಾರ ಮಧ್ಯರಾತ್ರಿಯಿಂದಲೇ ರಾತ್ರಿ ಸಂಚಾರ ನಿಷೇಧ ಜಾರಿಗೆ ಬಂದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದ್ದಾಗಿದ್ದು, ಶನಿವಾರ ವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ. ಬಿಬಿಎಂಪಿಯು ಹೆಬ್ಬಾಳ ಮೇಲ್ಸೇತುವೆಯ ಎರಡೂ ಪಥಗಳಲ್ಲಿ ರಾತ್ರಿ 12 ರಿಂದ ಬೆಳಗ್ಗೆ 6 ರ ವರೆಗೆ ದುರಸ್ತಿ ಮತ್ತು ಕಾಮಗಾರಿ ಹಮ್ಮಿಕೊಂಡಿದೆ.
ಈ ಕಾಮಗಾರಿ ವೇಳಾಪಟ್ಟಿ ಮಳೆಗಾಲದ ಪರಿಸ್ಥಿತಿಗಳಿಗೆ ಒಳಪಟ್ಟಿರುತ್ತದೆ. ಈ ಅವಧಿಯದಲ್ಲಿ, ನಗರದ ಕಡೆಗೆ ಫ್ಲೈಓವರ್ ರ್ಯಾಂಪ್ ಅನ್ನು ಮುಚ್ಚಲಾಗುತ್ತದೆ. ಬಿಬಿಎಂಪಿ ಮೊದಲು ಬೆಂಗಳೂರು ಕಡೆಗೆ ಸಂಚರಿಸುವ ಲೇನ್ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ಮುಂದಿನ ಎರಡು ದಿನಗಳಲ್ಲಿ ಅದನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಬೆಂಗಳೂರು ಉತ್ತರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರ್ಯಾಯ ನಾರ್ಗ ಯಾವುದು?
ಸಂಚಾರ ನಿಷೇಧದ ಅವಧಿಯಲ್ಲಿ ಯಲಹಂಕ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ ಜನರು ಫ್ಲೈಓವರ್ನ ಕೆಳಗಿನ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು, ಹೆಬ್ಬಾಳ ಜಂಕ್ಷನ್ನಲ್ಲಿ ಭದ್ರಪ್ಪ ಲೇಔಟ್ ಕಡೆಗೆ ಬಲಕ್ಕೆ ತಿರುಗಿ, ನ್ಯೂ ಬಿಇಎಲ್ ರಸ್ತೆ ಮತ್ತು ಮೆಖ್ರಿ ವೃತ್ತದ ಮೂಲಕ ನಗರವನ್ನು ತಲುಪಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಹೊಸ ಫ್ಲೈಓವರ್ ಕಾಮಗಾರಿಯ ವೇಳಾಪಟ್ಟಿ
ಕೆಆರ್ ಪುರಂ ಮತ್ತು ನಾಗವಾರ ಕಡೆಯಿಂದ ಹೆಬ್ಬಾಳ, ಮೆಖ್ರಿ ವೃತ್ತ ಮತ್ತು ದಕ್ಷಿಣಕ್ಕೆ ಬರುವ ಪ್ರಯಾಣಿಕರನ್ನು ಸಂಪರ್ಕಿಸುವ ಹೊಸ ಫ್ಲೈಓವರ್ ಲೂಪ್ನಲ್ಲಿ ಸ್ಲ್ಯಾಬ್-ಕಾಸ್ಟಿಂಗ್ ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಹಮ್ಮಿಕೊಂಡಿದೆ. ಈ ಕಾಮಗಾರಿ ಕೂಡ ರಾತ್ರಿಯ ಸಮಯದಲ್ಲಿ ನಡೆಯಲಿದ್ದು, ಸಂಚಾರ ಬದಲಾವಣೆ ಅನಿವಾರ್ಯವಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ, ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಬಿಡಿಎ ತಿಳಿಸಿದೆ.
ಇದನ್ನೂ ಓದಿ: ಸಿನಿಮೀಯ ರೀತಿಯ ಭೀಕರ ಅಪಘಾತ: ಸ್ಕೂಲ್ ವ್ಯಾನ್ ಡಿಕ್ಕಿಯಾದರೂ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಬಚಾವಾಗಿದ್ಹೇಗೆ ನೋಡಿ
ಬಿಡಿಎ ವೇಳಾಪಟ್ಟಿಯ ಪ್ರಕಾರ, ಜುಲೈ 13 ರೊಳಗೆ ಸ್ಲ್ಯಾಬ್-ಕಾಸ್ಟಿಂಗ್ ಕೆಲಸ ಪೂರ್ಣಗೊಳ್ಳಲಿದ್ದು, ಹೊಸ ಫ್ಲೈಓವರ್ನ ಕೆಲವು ಭಾಗಗಳಲ್ಲಿ ಪ್ರಾರಂಭವಾಗಿರುವ ಕಾಂಕ್ರೀಟೀಕರಣವು ಜುಲೈ 29 ರೊಳಗೆ ಪೂರ್ಣಗೊಳ್ಳಲಿದೆ. ಆಗಸ್ಟ್ 1 ರಿಂದ ಒಂದು ವಾರದವರೆಗೆ ಡಾಂಬರು ಹಾಕುವ ಕೆಲಸವನ್ನು ನಿಗದಿಪಡಿಸಲಾಗಿದೆ. ಸೂಚನಾ ಫಲಕಗಳು, ಲೇನ್ ಗುರುತುಗಳು ಮತ್ತು ಇತರ ವಿವಿಧ ಕೆಲಸಗಳು ಆಗಸ್ಟ್ 7 ಮತ್ತು 10 ರ ನಡುವೆ ನಡೆಯಲಿವೆ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








