ಪ್ರೀತಿಯ ನಾಟಕ, ಅಶ್ಲೀಲ ವಿಡಿಯೋ ರೆಕಾರ್ಡ್: ಆಂಧ್ರದ ಮಹಿಳೆಯ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಯುವಕನ ಬಂಧನ
ಆಕೆ ಪತಿಯಿಂದ ದೂರವಾಗಿ ವಿಚ್ಛೇದನ ಪಡೆದು ದೂರದ ಆಂಧ್ರ ಪ್ರದೇಶದಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಈ ನಡುವೆ ಕಾಡುಗೋಡಿ ಬಳಿ ರಿಸೆಪ್ಷೆನಿಸ್ಟ್ ಕೆಲಸ ಸಿಕ್ಕಿದ್ದು, ಅಲ್ಲೊಬ್ಬನ ಜೊತೆ ಪರಿಚಯವಾಗಿತ್ತು. ದಿನ ಕಳೆದಂತೆ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದ್ದು, ಕೊನೆಗೆ ಮದುವೆ ವರೆಗೂ ಹೋಗಿತ್ತು. ಹೀಗೆ ನಂಬಿದಾಕೆಗೆ ಆತನೇ ವಿಲನ್ ಆಗಿದ್ದ...

ಬೆಂಗಳೂರು, ಜೂನ್ 19: ವಿಚ್ಛೇದಿತ ಮಹಿಳೆಯನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ಆಕೆಯ ಖಾಸಗಿ ವೀಡಿಯೊ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಯುವಕನನ್ನು ಬೆಂಗಳೂರು ಕಾಡುಗೋಡಿ ಠಾಣೆ ಪೊಲೀಸರು (Kadugodi Police) ಬಂಧಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರು ಆಧರಿಸಿ ಆರೋಪಿ ಶ್ರೀನಿವಾಸ್ ಎಂಬಾತನನ್ನು ಬಂಧಿಸಲಾಗಿದೆ. ಸಂತ್ರಸ್ತೆಯು ಮೂಲತಃ ಆಂಧ್ರ ಪ್ರದೇಶದಳವಾಗಿದ್ದು (Andhra Pradesh), ಪತಿ ಜೊತೆ ಹೊಂದಾಣಿಕೆ ಆಗದೆ ದೂರಾಗಿ ವಿಚ್ಛೇದನ ಪಡೆದಿದ್ದರು.
ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದ ಮಹಿಳೆ
ವಿಚ್ಛೇದನದ ಬಳಿಕ ಜೀವನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಮಹಿಳೆ 2019ರಲ್ಲಿ ಬೆಂಗಳೂರಿನ ಕಾಡುಗೋಡಿಗೆ ಬಂದಿದ್ದರು. ಆರೋಪಿ ಶ್ರೀನಿವಾಸ್ ನಡೆಸುತ್ತಿದ್ದ ಡಿಜಿಟಲ್ ಸೇವಾ ಕೇಂದ್ರದಲ್ಲಿ ರಿಸೆಪ್ಷನಿಸ್ಟ್ ಆಗಿ ಸೇರಿಕೊಂಡಿದ್ದರು. ದಿನಕಳೆದಂತೆ ಆರೋಪಿಯೊಂದಿಗೆ ಸ್ನೇಹ ಹಾಗೂ ಪ್ರೀತಿ ಮೂಡಿತ್ತು.
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ
ಹೀಗಿರುವಾಗಲೇ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಶ್ರೀನಿವಾಸ್ ಆಕೆಯೊಂದಿಗೆ ಬಾಡಿಗೆ ಮನೆ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿಕೊಂಡು ಆ ಕ್ಷಣದ ವಿಡಿಯೋವನ್ನು ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿ ಇಟ್ಟುಕೊಂಡಿದ್ದಾನೆ.
ದೈಹಿಕ ಸಂಪರ್ಕದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ಮೇಲ್
ನಂತರ ಆರೋಪಿಯು ದೈಹಿಕ ಸಂಪರ್ಕದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಆರಂಭಿಸಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೆಲ ದಿನಗಳ ಬಳಿಕ ಖಾಸಗಿ ವೀಡಿಯೊ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುತ್ತಿದ್ದು,25 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂಪಾಯಿ ಹಣ ನೀಡಿದರೂ ಬ್ಲ್ಯಾಕ್ಮೇಲ್ ಮಾಡುವುದನ್ನು ಮುಂದುವರೆಸಿದ್ದಾನೆ. ಈ ಸಂಬಂಧ ಸಂತ್ರಸ್ತೆ ಮೊದಲಿಗೆ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೂ ಬಿಡದ ಆರೋಪಿ, ಮಹಿಳೆ ಹೆಸರಿನಲ್ಲಿ ಫೇಸ್ಬುಕ್ ಐಡಿ ಕ್ರಿಯೇಟ್ ಮಾಡಿ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನಡಿ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ವಿಧಾನಸೌಧ, ಎಂಎಸ್ ಬಿಲ್ಡಿಂಗ್ ಸುತ್ತಮುತ್ತ ಪಾರ್ಕಿಂಗ್ ಜಂಜಾಟ: ಶಕ್ತಿಸೌಧಕ್ಕೂ ತಟ್ಟಿದ ಬಿಸಿ
ಆರೋಪಿಯೂ ಪತ್ನಿಯನ್ನು ಬಿಟ್ಟು ದೂರವಾಗಿದ್ದ. ಈ ನಡುವೆ ಪತಿ ಬಿಟ್ಟು ಬಂದವಳ ಬಾಳಿಗೆ ಜೊತೆಯಾಗುತ್ತೇನೆ ಎಂದು ನಂಬಿದವಳ ಜೀವಕ್ಕೆ ಕಂಟಕವಾಗಿದ್ದು ವಿಪರ್ಯಾಸವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







