KSCA ಚುನಾವಣೆ ಗೊಂದಲ: ಕೆ.ಎನ್‌.ಶಾಂತಕುಮಾರ್​​​ಗೆ ಸ್ಪರ್ಧಿಸಲು ಅವಕಾಶ ನೀಡಿ ಹೈಕೋರ್ಟ್​ ಆದೇಶ

ಕೆಎಸ್‌ಸಿಎ ಅಧ್ಯಕ್ಷ ಹುದ್ದೆಗೆ ಕೆ.ಎನ್. ಶಾಂತಕುಮಾರ್ ಸಲ್ಲಿಸಿದ್ದ ನಾಮಪತ್ರವನ್ನು 200 ರೂ. ಹಿಂಬಾಕಿ ಕಾರಣದಿಂದ ತಿರಸ್ಕರಿಸಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಶಾಂತಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಅವರ ನಾಮಪತ್ರವನ್ನು ಅಂಗೀಕರಿಸಲು ಆದೇಶಿಸಿದೆ. ಡಿ.7 ರಂದು ನಿಗದಿತ ವೇಳಾಪಟ್ಟಿಯಂತೆ ಕೆಎಸ್‌ಸಿಎ ಚುನಾವಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.

KSCA ಚುನಾವಣೆ ಗೊಂದಲ: ಕೆ.ಎನ್‌.ಶಾಂತಕುಮಾರ್​​​ಗೆ ಸ್ಪರ್ಧಿಸಲು ಅವಕಾಶ ನೀಡಿ ಹೈಕೋರ್ಟ್​ ಆದೇಶ
ಸಾಂದರ್ಭಿಕ ಚಿತ್ರ
Updated By: ಪೃಥ್ವಿಶಂಕರ

Updated on: Nov 29, 2025 | 5:55 PM

ಬೆಂಗಳೂರು, ನ.29: ಇನ್ನೂರು ರೂಪಾಯಿ ಹಿಂಬಾಕಿ ಪಾವತಿಸಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ (ಕೆಎಸ್‌ಸಿಎ) ಅಧ್ಯಕ್ಷ ಹುದ್ದೆಗೆ ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಿದ ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಕೆ.ಎನ್‌.ಶಾಂತಕುಮಾರ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್​​ ಆದೇಶವನ್ನು ನೀಡಿದೆ. ಕೆಎಸ್‌ಸಿಎ ಚುನಾವಣೆಯಲ್ಲಿ ಕೆ.ಎನ್.ಶಾಂತಕುಮಾರ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಲು ಕೋರ್ಟ್​ ಆದೇಶ ನೀಡಿದೆ. ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಧಿಕಾರಿ ಕ್ರಮ ರದ್ದುಗೊಳಿಸಿ, ಈಗಾಲೇ ನೀಡಿರುವ ವೇಳಾಪಟ್ಟಿಯಂತೆ ಡಿ.7 ರಂದೇ ಚುನಾವಣೆಗೆ ನಡೆಸಲು ನ್ಯಾ.ಸೂರಜ್ ಗೋವಿಂದರಾಜ್ ಅವರ ಪೀಠ ಆದೇಶ ನೀಡಿದೆ.

ಕೆ.ಎನ್‌.ಶಾಂತಕುಮಾರ್‌ ಸಲ್ಲಿಸಿರುವ ಅರ್ಜಿಯನ್ನು ಗುರುವಾರದಂದು ಹೈಕೋರ್ಟ್​​​ ವಿಚಾರಣೆ ಕೈಗೆತ್ತಿಕೊಂಡು, ಎರಡು ಕಡೆಯ ವಾದ-ವಿವಾದವನ್ನು ಆಲಿಸಿ, ಇಂದು ತೀರ್ಪು ನೀಡಿದೆ. ಆದರೆ ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್​ಸಿಎ) ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಇದೀಗ ಕೋರ್ಟ್​​​ ಈ ಆದೇಶವನ್ನು ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಮುಂದಿನ ತಿಂಗಳ ಡಿಸೆಂಬರ್ 7ರಂದು ಅಧ್ಯಕ್ಷ ಸ್ಥಾನ್ಕಕೆ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್​ ಸೂಚಿಸಿತ್ತು.ಆದ್ರೆ, ಚುನಾವಣೆಗೂ ಮುನ್ನವೇ ವೆಂಕಟೇಶ್ ಪ್ರಸಾದ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಚುನಾವಣೆಗೂ ಮುನ್ನವೇ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ

ಕೆ.ಎನ್. ಶಾಂತಕುಮಾರ್ ನಾಮಪತ್ರ ತಿರಸ್ಕರಿಸಿದ್ದೇಕೆ?

ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ ಚುನಾವಣೆಗೆ ನಾಮಪತ್ರ ಪರಿಶೀಲನೆ ವೇಳೆ ಕೆ.ಎನ್‌.ಶಾಂತಕುಮಾರ್‌ ಹಿಂಬಾಕಿಯಿದ್ದ 200 ರೂ. ಚಂದಾ ಹಣ ಪಾವತಿಸಿರುವ ರಶೀದಿಯನ್ನು ಹಾಜರುಪಡಿಸಿಲ್ಲ ಎಂದು ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ಈ ಕಾರಣಕ್ಕೆ ಕೆ.ಎನ್‌.ಶಾಂತಕುಮಾರ್‌ ಹೈಕೋರ್ಟ್​​ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದೆ. ಈ ವೇಳೆ ಕೆ.ಎನ್‌.ಶಾಂತಕುಮಾರ್​ ಪರ ವಕೀಲರು ವಾದಿಸಿದ್ದು, ಪರಿಶೀಲನೆ ವೇಳೆಗೆ ಅರ್ಜಿದಾರರು ಹಿಂಬಾಕಿಯಿದ್ದ 200 ರೂ. ಚಂದಾ ಹಣ ಪಾವತಿಸಿರುವ ರಶೀದಿಯನ್ನು ನೀಡಿದ್ದರು. ಒಂದು ವೇಳೆ ನೀಡಿಲ್ಲ ಎಂದರೆ ಅದನ್ನು ಮೊದಲೇ ತಿಳಿಸಬೇಕಿತ್ತು ಎಂದು ಹೇಳಿದ್ದಾರೆ. ಕೆಎಸ್‌ಸಿಎ ಪರ ವಕೀಲರು ಈ ಬಗ್ಗೆ ಪ್ರತಿವಾದ ಮಂಡಿಸಿದ್ದಾರೆ. ಹಿಂಬಾಕಿಯಿದ್ದ 200 ರೂ. ಪಾವತಿಸಿದ್ದರೆ ಅದರ ರಶೀದಿಯನ್ನು ನೀಡಬೇಕಿತ್ತು. ಯಾಕೆ ನೀಡಿಲ್ಲ ಎಂದು ಹೇಳಿದ್ದಾರೆ. ಕೆಎಸ್‌ಸಿಎ ಹಿಂಬಾಕಿ ಪಾವತಿಸದಿದ್ದರೂ ಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ ಕ್ಲಬ್‌ಗೆ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿಸಲಾಗಿತ್ತು. ಹಿಂಬಾಕಿ ಪಾವತಿ ಮಾಡದಿದ್ದವರ ಪಟ್ಟಿಯನ್ನು ಕೆಎಸ್‌ಸಿಎ ಸಿದ್ಧಪಡಿಸಬೇಕಿತ್ತು. ಅದನ್ನು ಮಾಡದಿರುವುದು ನಮ್ಮ (ಕೆಎಸ್‌ಸಿಎ) ತಪ್ಪು ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:00 pm, Sat, 29 November 25