
ಬೆಂಗಳೂರು, ಮೇ 26: ನಗರದಲ್ಲಿ ಕಳ್ಳತನ (Theft) ಕೇಸ್ಗಳು ಕಡಿಮೆಯಾಗುತ್ತಿಲ್ಲ. ಭಿನ್ನ ವಿಭಿನ್ನ ರೀಯಿಯಲ್ಲಿ ಖದೀಮರು ದೋಚುತ್ತಿರುತ್ತಾರೆ. ಇತ್ತೀಚೆಗೆ ಒಂದು ತಂಡ ಜ್ಯುವೆಲರಿ ಶಾಪ್ಗೆ ಕನ್ನ ಹಾಕಿದ್ದರು. ಇದೀಗ ಮತ್ತೊಂದು ತಂಡ ಕಾಶಿ ಯಾತ್ರೆಗೆ ಹೋಗಿದ್ದವರ ಮನೆ ಟಾರ್ಗೆಟ್ ಮಾಡಿ ನುಗ್ಗಿದ್ದಾರೆ. ಎರಡು ಕೇಸ್ ಭೇದಿಸಿರುವ ಪೊಲೀಸರು ದೋಚಿರುವ ವಸ್ತುಗಳ ಸಮೇತ ಆರೋಪಿಗಳ ಹೆಡೆಮುರಿ (Arrest) ಕಟ್ಟಿದ್ದಾರೆ.
ಕಾಶಿ ಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗಂಗಾಧರ, ಬಸವ ಮತ್ತು ಕಿರಣ್ ಬಂಧಿತ ಆರೋಪಿಗಳು. ಸದ್ಯ ಬಂಧಿತರಿಂದ 70 ಲಕ್ಷ ರೂ ಮೌಲ್ಯದ ಅರ್ಧ ಕೆ.ಜಿ ಚಿನ್ನ, 1.43 ಲಕ್ಷ ರೂ. ನಗದು ಹಣ ಮತ್ತು 750 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 26ರಂದು ಬ್ಯಾಡರಹಳ್ಳಿ ಸಿಂಡಿಕೇಟ್ ಲೇಔಟ್ನಲ್ಲಿ ಮನೆಯೊಂದನ್ನು ಟಾರ್ಗೆಟ್ ಮಾಡಿದ್ದ ಕಳ್ಳರು, ಅದಕ್ಕೂ ಎರಡು ಮೂರು ದಿನ ಏರಿಯಾದಲ್ಲಿ ರೌಂಡ್ಸ್ ಹಾಕಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲ ಅನ್ನೋದು ಗೊತ್ತಾಗಿದೆ. ಇತ್ತ ಮನೆ ಮಾಲೀಕರು ಕುಟುಂಬ ಸಮೇತ ಕಾಶಿಗೆ ತೀರ್ಥಯಾತ್ರೆಗೆ ಹೋಗಿದ್ದರು. ಮೂರ್ನಾಲ್ಕು ದಿನ ಮನೆ ಗಮನಿಸಿದ ಕಳ್ಳರ ತಂಡಕ್ಕೆ ಗೇಟ್ ಬಳಿ ಹಾಲು, ಪೇಪರ್ ಬಿದ್ದಿರುವುದು ನೋಡಿ ಯಾರು ಇಲ್ಲ ಅನ್ನೋದು ಗೊತ್ತಾಗಿತ್ತು.
ಇದನ್ನೂ ಓದಿ: ಹಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮಾಜಿ ಕಾರು ಚಾಲಕ: ಸಿನಿಮಾ ಸ್ಟೈಲ್ನಲ್ಲಿ ಕಳ್ಳತನ
ಪ್ಲಾನ್ ಮಾಡಿ ಮನೆಯೊಳಗೆ ನುಗ್ಗಿದ್ದ ಟೀಂ ಒಳಗಿದ್ದ ಲಾಕರ್ ಅನ್ನು ಒಡೆಯಲು ಪ್ರಯತ್ನಿಸಿದ್ದರು. ಆದರೆ ಅದು ಓಪನ್ ಆಗದ ಕಾರಣ ಲಾಕರ್ ಅನ್ನೇ ಹೊತ್ತೊಯ್ದು ಅದರಲ್ಲಿದ್ದ ಚಿನ್ನಾಭರಣ, ಹಣ ಎಲ್ಲವನ್ನೂ ತೆಗೆದುಕೊಂಡಿದ್ದಾರೆ. ಕಾಶಿಯಿಂದ ವಾಪಸ್ ಬಂದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಕೂಡಲೇ ಬ್ಯಾಡರಹಳ್ಳಿ ಠಾಣೆಗೆ ಮನೆ ಮಾಲೀಕರು ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಖತರ್ನಾಕ್ ಗ್ಯಾಂಗ್ವೊಂದನ್ನ ಅರೆಸ್ಟ್ ಮಾಡಿದ್ದಾರೆ. ಜ್ಯುವೆಲ್ಲರಿ ಅಂಗಡಿಯ ಗೋಡೆ ಕೊರೆದು ಕೆಜಿಗಟ್ಟಲೇ ಬೆಳ್ಳಿ ವಸ್ತುಗಳನ್ನ ಕದ್ದು ಎಸ್ಕೇಪ್ ಆಗಿದ್ದ ಮೂವರನ್ನ ಬಂಧಿಸಿದ್ದಾರೆ. ಜಾಟ್ ಸುರೇಶ್, ಧನರಾಮ್, ನೇಮಿಚಂದ್ ಎಂಬುವವರನ್ನು ಮಾಲ್ ಸಮೇತ ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಎಂಬಿ ಜ್ಯುವೆಲ್ಲರ್ಸ್ ಶಾಪ್ ಟಾರ್ಗೆಟ್ ಮಾಡಿದ್ದ ಆರೋಪಿಗಳು ಏಪ್ರಿಲ್ 27ರ ಬೆಳಗಿನ ಜಾವ ಗೋಡೆ ಕೊರದಿದ್ದರು. ಮಹೇಂದ್ರ ಕುಮಾರ್ ಎಂಬಾತ ತನ್ನ ಟೀಂ ಸಮೇತ ನುಗ್ಗಿದ್ದ. ಶಟರ್ ಮುರಿದು ಮತ್ತು ಗೋಡೆ ಕೊರೆದು ಒಳ ಹೊಕ್ಕಿದ್ದವರು ಸುಮಾರು 70 ಕೆಜಿ ಬೆಳ್ಳಿ ದೋಚಿದ್ದರು. ಜೊತೆಗೆ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ಗಳನ್ನು ಎಗರಿಸಿದ್ದಾರೆ.
ಇಲ್ಲಿ ಮತ್ತೊಂದು ವಿಷಯ ಏನೆಂದರೆ ಜ್ಯುವೆಲ್ಲರಿ ಶಾಪ್ನಲ್ಲಿ ಎಷ್ಟೇ ಬಂಗಾರ ಇದ್ದರು ಅದನ್ನ ಟಚ್ ಕೂಡ ಮಾಡಿರಲಿಲ್ಲ. ಬೆಳ್ಳಿಯನ್ನ ಮಾತ್ರ ಕೆಜಿಗಟ್ಟಲೇ ಬ್ಯಾಗ್ಗೆ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ. ಈ ಮುಂಚೆ ಕೂಡ ಇಂತಹದ್ದೇ ಕೃತ್ಯ ನಡೆಸಿದ್ದರೂ ಬಂಗಾರ ಕಳ್ಳತನ ಮಾಡಿರಲಿಲ್ಲ.
ಇದನ್ನೂ ಓದಿ: ಇದೇ ಕರ್ನಾಟಕ ಪೊಲೀಸ್ ತಾಕತ್ತು: ಇಡೀ ದೇಶದೆಲ್ಲೆಡೆ 100ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಖದೀಮ ಬೆಂಗಳೂರಿನಲ್ಲಿ ಲಾಕ್
ಇನ್ನು ಆರೋಪಿಗಳು ತಾವು ದೋಚಿದ್ದ ಬೆಳ್ಳಿಯ ಅರ್ಧ ಭಾಗವನ್ನು ಹೈದರಾಬಾದ್ನಲ್ಲಿ ಮಾರಾಟ ಮಾಡಿ, ನಂತರ ರಾಜಸ್ಥಾನಕ್ಕೆ ಪರಾರಿಯಾಗಿದ್ದರು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಬಾಗಲಗುಂಟೆ ಪೊಲೀಸರು, ಒಂದು ಕೋಟಿ ರೂ ಮೌಲ್ಯದ 36 ಕೆಜಿ ಬೆಳ್ಳಿ ಸಮೇತ ಅರೆಸ್ಟ್ ಮಾಡಿದ್ದಾರೆ. ಇನ್ನು ಈ ಗ್ಯಾಂಗ್ನ ಕಿಂಗ್ಪಿನ್ ಆಗಿರುವ ಮಹೇಂದ್ರ ಎಂಬಾತನಿಗಾಗಿ ಬಾಗಲಗುಂಟೆ ಪೊಲೀಸರು ಬಲೆ ಬೀಸಿದ್ದು, ತನಿಖೆ ನಡೆಸಿದ್ದಾರೆ.
ವರದಿ: ವಿಕಾಸ್ Tv9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.