ಕರ್ನಾಟಕ ಬಜೆಟ್ 2021: ಬೆಂಗಳೂರಿಗೆ ಯಡಿಯೂರಪ್ಪ ಬಜೆಟ್​ನಲ್ಲಿ ಸಿಕ್ಕಿದ್ದೇನು?

| Updated By: ಸಾಧು ಶ್ರೀನಾಥ್​

Updated on: Mar 08, 2021 | 3:14 PM

ಕರ್ನಾಟಕ ಬಜೆಟ್ 2021ರಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 7795 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದ್ದಾರೆ.

ಕರ್ನಾಟಕ ಬಜೆಟ್ 2021: ಬೆಂಗಳೂರಿಗೆ ಯಡಿಯೂರಪ್ಪ ಬಜೆಟ್​ನಲ್ಲಿ ಸಿಕ್ಕಿದ್ದೇನು?
ಪ್ರಾತಿನಿಧಿಕ ಚಿತ್ರ
Follow us on

ಕರ್ನಾಟಕ ಬಜೆಟ್ 2021ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಏನೇನು ಘೋಷಣೆ ಮಾಡಿದ್ದಾರೆ ಎಂಬ ವಿವರ ಹೀಗಿದೆ.
– ಬೆಂಗಳೂರಿನ ಮಲ್ಲೇಶ್ವರದಲ್ಲಿ ಮೈಸೂರು ಲ್ಯಾಂಪ್ಸ್ ವರ್ಕ್ಸ್ ನಿಯಮಿತಕ್ಕೆ ಸೇರಿದ ಪ್ರದೇಶದಲ್ಲಿ Experience Bengaluru ಕೇಂದ್ರ ಅಭಿವೃದ್ಧಿ.
– ಬೈಯಪ್ಪನಹಳ್ಳಿಯಲ್ಲಿರುವ ಎನ್​ಜಿಇಎಫ್​ನಲ್ಲಿ ಹಾಗೂ ಇನ್ನೂ ಮೂರು ಕಡೆ ವೃಕ್ಷೋದ್ಯಾನ ಅಭಿವೃದ್ಧಿ.
-ಬೆಂಗಳೂರು ನಗರದ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಪ್ರಾರಂಭಿಸಲು ಕ್ರಮ.
– 14788 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 58.2 ಕಿ.ಮೀ. ಉದ್ದದ ಹೊರವರ್ತುಲ ರಸ್ತೆ- ಏರ್​ಪೋರ್ಟ್ ಮೆಟ್ರೋಜಾಲ ಹಂತ 2ಎ ಮತ್ತು 2ಬಿ ಅನುಷ್ಠಾನ.
– ಉಪನಗರ ರೈಲು ಯೋಜನೆಗೆ 2021-22ನೇ ಸಾಲಿಗೆ 850 ಕೋಟಿ ರೂಪಾಯಿ ಅನುದಾನ.
– ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಕಟ್ಟಡ ಶೀಘ್ರ ಪೂರ್ಣ; ಗರಿಷ್ಠ ವಾರ್ಷಿಕ ಪ್ರಯಾಣಿಕರ ಸಾಮರ್ಥ್ಯ 6 ಕೋಟಿಗೆ ಹೆಚ್ಚಳ.
– ಕೋರಮಂಗಲ ಕಣಿವೆಯನ್ನು ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ 169 ಕೋಟಿ ರೂಪಾಯಿ ವೆಚ್ಚದಲ್ಲಿ ಕೋರಮಂಗಲ ಕಣಿವೆ ರಾಜಕಾಲುವೆ ಅಭಿವೃದ್ಧಿ ಮತ್ತು ನಿರ್ವಹಣೆ (ಕೆ-100) ಯೋಜನೆ ಅನುಷ್ಠಾನ.
– ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅಂತಾರಾಷ್ಟ್ರೀಯ ಮಟ್ಟದ ಬೆಂಗಳೂರು ಸಿಗ್ನೇಚರ್ ಬಿಜಿನೆಸ್ ಪಾರ್ಕ್ ಅಭಿವೃದ್ಧಿ.
– ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ ವತಿಯಿಂದ ಬಿಬಿಎಂಪಿ ಸಹಯೋಗದೊಂದಿಗೆ 450 ಕೋಟಿ ರೂಪಾಯಿ ವೆಚ್ಚದಲ್ಲಿ ಕೆ.ಸಿ. ವ್ಯಾಲಿ ಆವರಣದ 248 ಎಂ.ಎಲ್.ಡಿ. ಸಾಮರ್ಥ್ಯದ ಎಸ್​ಟಿಪಿ ಪುನರುಜ್ಜೀವನ ಮತ್ತು ಉನ್ನತೀಕರಣಕ್ಕೆ ಕ್ರಮ.
– ಆಗಸ್ಟ್ 2021ರೊಳಗೆ “ಒಂದು ರಾಷ್ಟ್ರ ಒಂದು ಕಾರ್ಡ್” ವ್ಯವಸ್ಥೆ ಜಾರಿಗೆ ಕ್ರಮ. ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಈ ಕಾರ್ಡ್ ಬಳಕೆಗೆ ಅವಕಾಶ.
– ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಆಟೋಮೆಟಿಕದ ಫೇರ್ ಕಲೆಕ್ಷನ್ ಸಿಸ್ಟಮ್ ಯೋಜನೆ ಅನುಷ್ಠಾನ.
– ಬೆಂಗಳೂರು ನಗರದ ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಮತ್ತು ಸಂಸ್ಕರಣೆಯನ್ನು ನಿರ್ವಹಿಸಲು ಪ್ರತ್ಯೇಕ ಕಂಪೆನಿ ಸ್ಥಾಪನೆ.
– ಉತ್ತರ ಬೆಂಗಳೂರಿನಲ್ಲಿ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ.
– 28 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಗ್ಯಾಸ್ಟ್ರೋಎಂಟಾಲಜಿ ಸೈನ್ಸಸ್ ಹಾಗೂ ಆರ್ಗನ್ ಟ್ರಾನ್ಸ್​ಪ್ಲಾಂಟ್ ಸಂಸ್ಥೆ ಪ್ರಸಕ್ತ ಸಾಲಿನಲ್ಲಿ ಕಾರ್ಯಾರಂಭ.
– ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ 50 ಹಾಸಿಗೆ ಸಾಮರ್ಥ್ಯದ ಉಪಕೇಂದ್ರ.
– ಬಿಬಿಎಂಪಿಯ 57 ವಾರ್ಡ್​​ಗಳಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಜನಾರೋಗ್ಯ ಕೇಂದ್ರಗಳ ಸ್ಥಾಪನೆ.
– 33 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಬಿಎಂಪಿ ಶಾಲೆಗಳ ನವೀಕರಣ ಮತ್ತು ಪುನರ್ ನಿರ್ಮಾಣ.
– ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಪ್ರತಿ ವಾರಾಂತ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು 2 ಕೋಟಿ ರೂ. ಮೀಸಲು.
ಹೀಗೆ ಒಟ್ಟಾರೆಯಾಗಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ 7795 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ.

Published On - 3:14 pm, Mon, 8 March 21