ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: 2,500 ಕಿ.ಮೀ.ಉದ್ದದ ಮಾನವ ಸರಪಳಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಿಂದ ಪ್ರಶಸ್ತಿ

| Updated By: ಆಯೇಷಾ ಬಾನು

Updated on: Sep 15, 2024 | 12:39 PM

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದ ಮುಂದೆ ಪ್ರಜಾಪ್ರಭುತ್ವದ ಉಳಿವು, ಸಮಸಮಾಜದ ನಿರ್ಮಾಣಕ್ಕಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಚಾಮರಾಜನಗರದಿಂದ ಬೀದರ್​ವರೆಗೂ 2,500 ಕಿಲೋಮೀಟರ್ ಮಾನವ ಸರಪಳಿ ರಚನೆಗೆ ಸಿಎಂ ಚಾಲನೆ ನೀಡಿದ್ದಾರೆ.

ಬೆಂಗಳೂರು, ಸೆ.15: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಇಡೀ ಕರ್ನಾಟಕ ರಾಜ್ಯದಲ್ಲಿ ಅಲ್ಲಲ್ಲಿ ಮಾನವ ಸರಪಳಿ ರಚಿಸಿ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರಜಾಪ್ರಭುತ್ವದ ಉಳಿವು, ಸಮಸಮಾಜದ ನಿರ್ಮಾಣಕ್ಕಾಗಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಿದ್ದಾರೆ. ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಸಭಾಪತಿ ಬಸವರಾಜ ಹೊರಟ್ಟಿ, ಡೆಪ್ಯುಟಿ ಸ್ಪೀಕರ್ ರುದ್ರಪ್ಪ‌ಲಮಾಣಿ, ಶಾಸಕ ರಿಜ್ವಾನ್ ಹರ್ಷದ್, ಅಧಿಕಾರಿಗಳು ಭಾಗಿಯಾಗಿದ್ದರು.

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಚಾಮರಾಜನಗರದಿಂದ ಬೀದರ್​ವರೆಗೂ 2,500 ಕಿಲೋಮೀಟರ್ ಮಾನವ ಸರಪಳಿ ರಚನೆ ಮಾಡುವ ಕಾರ್ಯಕ್ರಮಕ್ಕೆ ವಿಧಾನಸೌಧದ ಮುಂದೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಪ್ರಜಾಪ್ರಭುತ್ವದ ಉಳಿವು, ಸಮ ಸಮಾಜದ ನಿರ್ಮಾಣಕ್ಕಾಗಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ 25 ಲಕ್ಷ ಜನರು ಭಾಗಿಯಾಗುತ್ತಿದ್ದಾರೆ. ಕಾರ್ಯಕ್ರಮದ ಭಾಗವಾಗಿ 10 ಲಕ್ಷ ಸಸಿಗಳನ್ನು ನೆಡಲು ತಯಾರಿ ನಡೆದಿದೆ. ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಸಚಿವರು ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದಾರೆ. ವಿದ್ಯಾರ್ಥಿಗಳು, ರೈತರು, ಆಯಾ ಸಂಘಟನೆಗಳು ಸೇರಿ ಹಲವರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಸಿಎಂ ಇದ್ದ ವೇದಿಕೆಗೆ ಏಕಾಏಕಿ ನುಗ್ಗಿದ ಯುವಕ; ಗಣ್ಯರು ಗಲಿಬಿಲಿ, ಮುಂದೇನಾಯ್ತು?

ಮಾನವ ಸರಪಳಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಿಂದ ಪ್ರಶಸ್ತಿ

ಇನ್ನು ಚಾಮರಾಜನಗರದಿಂದ ಬೀದರ್​ವರೆಗೂ 2,500 ಕಿಲೋಮೀಟರ್ ಮಾನವ ಸರಪಳಿ ರಚನೆ ಮಾಡಲಾಗುತ್ತಿದೆ. ಅತಿ ಉದ್ದದ ಮಾನವ ಸರಪಳಿ ನಿರ್ಮಾಣ ಹಿನ್ನೆಲೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಿಂದ ಪ್ರಶಸ್ತಿ ಘೋಷಣೆಯಾಗಿದೆ. ಸಚಿವ ಡಾ.ಹೆಚ್.ಸಿ.ಮಹಾದೇವಪ್ಪನವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ವಿಧಾನಸೌಧ ಮುಂದೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದ್ರೆ ಆರ್ಥಿಕ ಸಾಮಾಜಿಕ‌ ಪ್ರಜಾಪ್ರಭುತ್ವ ಎಲ್ಲರಿಗೆ ಸಿಕ್ಕಾಗ ಮಾತ್ರ. ಇಂದು ಏಕತೆಯ ಹೆಸರಿನಲ್ಲಿ ಸಮಾಜವನ್ನ ಒಡೆಯುತ್ತಿದ್ದಾರೆ. ಇದರ ಎಚ್ಚರಿಕೆ ವಹಿಸಿ ಸಮಾಜ ಹೊಡೆಯುವ ವಿಚಿದ್ರಕಾರಿ ಶಕ್ತಿಗಳನ್ನ ತೊಡೆದುಹಾಕಬೇಕು. ವಿಚಿತ್ರಕಾರಿಗಳು ಬಹುತ್ವದ, ಪ್ರಜಾಪ್ರಭುತ್ವದ ಏಕತೆಯ ವಿರೋಧಿಗಳು. ನಮ್ಮ ದೇಶದಲ್ಲಿ ಅನೇಕ ಧರ್ಮ‌ಜಾತಿ ಸಂಸ್ಕೃತಿಗಳಿವೆ. ಇದಕ್ಕಾಗಿ ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು. ಸಂವಿಧಾನದಲ್ಲಿ ಯಾವ ಜಾತಿ, ಭಾಷೆ ಮೇಲಲ್ಲ, ಕೀಳಲ್ಲ ಅಂತ ಹೇಳಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಇದನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ. ಬುದ್ದ, ಬಸವ, ಅಂಬೇಡ್ಕರ್ ‌ಅವರ ಅವಧಿಯಲ್ಲಿ ಸಂಸದೀಯ ವ್ಯವಸ್ಥೆ ಇತ್ತು. ಅನುಭವ ಮಂಟಪ‌ದ ಮೂಲಕ ಬಸವಣ್ಣ ಸಂಸದೀಯ ವ್ಯವಸ್ಥೆ ತಂದಿದ್ರು.

ಯಾವುದೇ ಧರ್ಮ ಮೇಲಲ್ಲ, ಕೀಳಲ್ಲ. ಬುದ್ಧ- ಬಸವರ ಕಾಲದಲ್ಲೇ ಸಂಸದೀಯ ವ್ಯವಸ್ಥೆ ಇತ್ತು. ನಮ್ಮ ರಾಜ್ಯದಲ್ಲಿ, ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ನೋಡಲು ‌ಅನುಭವ ಮಂಟಪ ಸಾಕು. ಸ್ವಾತಂತ್ರ್ಯ ಬಂದ ನಂತರ ಸಂವಿಧಾನ ರಚನೆ ಮಾಡಿದ್ದೇವೆ. ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ಎಲ್ಲರಿಗೂ ಸಿಗಬೇಕು. ತಾರತಮ್ಯ ಇರುವವರೆಗೆ ರಾಜಕೀಯ ಸಮಾನತೆ ಇರಲ್ಲ. ಸಂವಿಧಾನದ ಪೀಠಿಕೆಯನ್ನ ಅರ್ಥ ಮಾಡಿಕೊಳ್ಳಬೇಕು, ಯುವ ಸಮೂಹಕ್ಕೆ ಅರ್ಥ ಮಾಡಿಸುವ ಕೆಲಸ ಆಗ್ತಿದೆ. ಯಾರಿಗೆ ಸಂವಿಧಾನದ ಉದ್ದೇಶ ಗೊತ್ತಿದೆ, ಅವರಿಂದ ಸಮ ಸಮಾಜದ ನಿರ್ಮಾಣ ಸಾಧ್ಯ. ಸಮ ಸಮಾಜ ನಿರ್ಮಾಣ ಮುಖ್ಯ, ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ರಾಜಕೀಯ, ಆರ್ಥಿಕ, ಸಾಮಾಜಿಕ ತಾರತಮ್ಯ ಇರಬಾರದು. ಇದನ್ನ ಅಂಬೇಡ್ಕರ್ ಒತ್ತಿ ಒತ್ತಿ ಹೇಳಿದ್ದಾರೆ, ಎಲ್ಲರಿಗೂ ಒಂದೇ ಓಟು. ರಾಷ್ಟ್ರಪತಿ, ಪ್ರಧಾನ ಮಂತ್ರಿಗಳಿಗೂ ಒಂದೇ ಓಟು. ಅಸಮಾನತೆ ತೊಡೆದು ಹಾಕುವವರೆಗೂ ಸಮಾನತೆ ಅಸಾಧ್ಯ. ಸಮಾನತೆಯ ದಾರಿಯಲ್ಲಿ ನಾವು ಸಾಗ್ತಿದ್ದೇವೆ. ಎಲ್ಲ ಧರ್ಮ, ಜಾತಿಯ ಬಡವರಿಗೆ ನ್ಯಾಯ ಕೊಡುವ ಕೆಲಸ ಮಾಡಿದ್ದೇವೆ. 5 ಗ್ಯಾರೆಂಟಿ ಯೋಜನೆಗಳ ಮೂಲಕ‌ ಎಲ್ಲರಿಗೂ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:21 pm, Sun, 15 September 24