ಬಿಟ್‌ಕಾಯಿನ್ ಹಗರಣದಲ್ಲಿ ಬಿಗ್ ಟ್ವಿಸ್ಟ್: ಡಿವೈಎಸ್​​​ಪಿ ಶ್ರೀಧರ್ ಪೂಜಾರ್ ಸೇರಿ ನಾಲ್ವರು ಅಧಿಕಾರಿಗಳು ಬಚಾವ್; ನ್ಯಾಯಾಲಯಕ್ಕೆ ‘ಬಿ-ರಿಪೋರ್ಟ್’ ಸಲ್ಲಿಕೆ

ಕರ್ನಾಟಕದ ಬಿಟ್‌ಕಾಯಿನ್ ಹಗರಣದಲ್ಲಿ ಸಿಲುಕಿದ್ದ ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಗೃಹ ಇಲಾಖೆ ಬಿಗ್ ರಿಲೀಫ್ ನೀಡಿದೆ. ಚಾರ್ಜ್‌ಶೀಟ್ ಸಲ್ಲಿಸಲು ಪೂರ್ವಾನುಮತಿ ನಿರಾಕರಿಸಿದ ಕಾರಣ, ಸಿಐಡಿ ಎಸ್‌ಐಟಿ ನ್ಯಾಯಾಲಯಕ್ಕೆ 'ಬಿ-ರಿಪೋರ್ಟ್' ಸಲ್ಲಿಸಿ ಅಧಿಕಾರಿಗಳನ್ನು ಕೈಬಿಟ್ಟಿದೆ. ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಮೂಲಕ ಬಿಟ್‌ಕಾಯಿನ್ ಅಕ್ರಮ ವರ್ಗಾವಣೆ ಆರೋಪ ಎದುರಿಸಿದ್ದ ಈ ಅಧಿಕಾರಿಗಳ ಪ್ರಕರಣ ಮುಕ್ತಾಯವಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಿಟ್‌ಕಾಯಿನ್ ಹಗರಣದಲ್ಲಿ ಬಿಗ್ ಟ್ವಿಸ್ಟ್: ಡಿವೈಎಸ್​​​ಪಿ ಶ್ರೀಧರ್ ಪೂಜಾರ್ ಸೇರಿ ನಾಲ್ವರು ಅಧಿಕಾರಿಗಳು ಬಚಾವ್; ನ್ಯಾಯಾಲಯಕ್ಕೆ ‘ಬಿ-ರಿಪೋರ್ಟ್’ ಸಲ್ಲಿಕೆ
ಸಾಂದರ್ಭಿಕ ಚಿತ್ರ
Edited By:

Updated on: Jul 09, 2026 | 12:29 PM

ಬೆಂಗಳೂರು, ಜು.9: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಬಹುಕೋಟಿ ‘ಬಿಟ್‌ಕಾಯಿನ್ ಹಗರಣ’ದಲ್ಲಿ (Bitcoin Scam) ಸಿಲುಕಿದ್ದ ನಾಲ್ವರು ಪ್ರಮುಖ ಪೊಲೀಸ್ ಅಧಿಕಾರಿಗಳಿಗೆ ಗೃಹ ಇಲಾಖೆ ಬಿಗ್ ರಿಲೀಫ್ ನೀಡಿದೆ. ಆರೋಪಿ ಅಧಿಕಾರಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಗೃಹ ಇಲಾಖೆಯು ಪೂರ್ವಾನುಮತಿ (ಅಭಿಯೋಜನಾ ಮಂಜೂರಾತಿ) ನಿರಾಕರಿಸಿರುವ ಹಿನ್ನೆಲೆಯಲ್ಲಿ, ಸಿಐಡಿ, ಎಸ್‌ಐಟಿ (CID SIT) ಅಧಿಕಾರಿಗಳು ನ್ಯಾಯಾಲಯಕ್ಕೆ ‘ಬಿ-ರಿಪೋರ್ಟ್’ (B-Report) ಸಲ್ಲಿಸಿ ಅಧಿಕಾರಿಗಳನ್ನು ಪ್ರಕರಣದಿಂದ ಕೈಬಿಟ್ಟಿದ್ದಾರೆ.

ಶ್ರೀಧರ್ ಪೂಜಾರ್ (ಡಿವೈಎಸ್‌ಪಿ – DySP), ಚಂದ್ರಾಧರ್ (ಪೊಲೀಸ್ ಇನ್ಸ್‌ಪೆಕ್ಟರ್), ಡಿ.ಎಂ. ಪ್ರಶಾಂತ್ ಬಾಬು (ಪೊಲೀಸ್ ಇನ್ಸ್‌ಪೆಕ್ಟರ್), ಲಕ್ಷ್ಮೀ ಕಾಂತಯ್ಯ (ಪೊಲೀಸ್ ಇನ್ಸ್‌ಪೆಕ್ಟರ್) ಸಿಐಡಿ, ಎಸ್‌ಐಟಿ ನಡೆಸುತ್ತಿದ್ದ ತನಿಖೆಯ ಚಾರ್ಜ್‌ಶೀಟ್‌ನಿಂದ ಮುಕ್ತಿ ಪಡೆದುಕೊಂಡಿದ್ದಾರೆ.

ಏನಿದು ಆರೋಪ? ಭಾರಿ ಚರ್ಚೆಯಾಗಿದ್ದ ಕೇಸ್:

2020-21ರಲ್ಲಿ ಸದ್ದು ಮಾಡಿದ್ದ ಈ ಹಗರಣದಲ್ಲಿ, ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬಾತನನ್ನು ಅಕ್ರಮ ಬಂಧನದಲ್ಲಿಟ್ಟು, ಆತನ ಮೂಲಕ ಬಿಟ್‌ಕಾಯಿನ್ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಈ ಅಧಿಕಾರಿಗಳ ಮೇಲಿತ್ತು. ಈ ಅಧಿಕಾರಿಗಳು ಸೈಬರ್ ತಜ್ಞ ಸಂತೋಷ್ ಕುಮಾರ್ ಜೊತೆ ಶಾಮೀಲಾಗಿ, ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಎಂಬುವರ ಕ್ರಿಪ್ಟೋ ವ್ಯಾಲೆಟ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದರು. ಈ ಮೂಲಕ ಬರೋಬ್ಬರಿ 1 ಕೋಟಿ 83 ಲಕ್ಷದ 624 ರೂಪಾಯಿ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದರು ಎಂದು ಎಸ್‌ಐಟಿ ತನಿಖೆ ನಡೆಸಿತ್ತು.

ಇದೀಗ ಗೃಹ ಇಲಾಖೆ ಯಾವುದೇ ಸರ್ಕಾರಿ ಅಧಿಕಾರಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಬೇಕಾದರೆ ಗೃಹ ಇಲಾಖೆಯ ಪೂರ್ವಾನುಮತಿ ಕಡ್ಡಾಯ. ಆದರೆ, ಈ ಅಧಿಕಾರಿಗಳ ವಿರುದ್ಧದ ಅಭಿಯೋಜನಾ ಮಂಜೂರಾತಿ ಪ್ರಸ್ತಾವನೆಯನ್ನು ಗೃಹ ಇಲಾಖೆ ತಿರಸ್ಕರಿಸಿದೆ. ಅನುಮತಿ ಸಿಗದ ಕಾರಣ ಸಿಐಡಿ ಎಸ್‌ಐಟಿ ಅನಿವಾರ್ಯವಾಗಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿ, ನಾಲ್ಕೂ ಜನ ಅಧಿಕಾರಿಗಳನ್ನು ದೋಷಾರೋಪ ಪಟ್ಟಿಯಿಂದ ಕೈಬಿಟ್ಟಿದೆ.

ಇದನ್ನೂ ಓದಿ: ಅರಬೈಲ್ ಘಾಟ್ ದುರಂತ: 20 ದಿನದ ಹಿಂದಷ್ಟೇ ದುಬೈನಿಂದ ಬಂದಿದ್ದ ಮಗ ಇನ್ನಿಲ್ಲ; ಹೆತ್ತ ತಾಯಿ ಆಕ್ರಂದನ

ಪೊಲೀಸ್ ಅಧಿಕಾರಿಗಳು ಬಚಾವಾಗಿದ್ದರೂ, ಪ್ರಕರಣದ ಎ1 ಆರೋಪಿಯಾಗಿರುವ ಸೈಬರ್ ತಜ್ಞ ಸಂತೋಷ್ ಕುಮಾರ್ ವಿರುದ್ಧ ಎಸ್‌ಐಟಿ ತನಿಖೆ ಮುಂದುವರಿಸಿದೆ. ರಾಬಿನ್ ಖಂಡೇವಾಲ ವ್ಯಾಲೆಟ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಅನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವುದು, ವಂಚನೆ ಎಸಗಿರುವುದು ಹಾಗೂ ಸಾಕ್ಷ್ಯಾಧಾರಗಳನ್ನು ತಿರುಚಿರುವುದಕ್ಕೆ ಸಂಬಂಧಿಸಿದಂತೆ ಸಂತೋಷ್ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ. ರಾಜಕೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಬಿಟ್‌ಕಾಯಿನ್ ಪ್ರಕರಣದ ತನಿಖೆ ಈಗ ಅಧಿಕಾರಿಗಳ ಮಟ್ಟಿಗೆ ಕ್ಲೋಸ್ ಆಗಿರುವುದು ಉಭಯ ಪಕ್ಷಗಳ ನಡುವೆ ಮತ್ತೆ ವಾಗ್ದಾಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ./

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us