AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಹೋರಿ ಹಬ್ಬಕ್ಕೆ ಗ್ರೀನ್ ಸಿಗ್ನಲ್ ನೀಡಿದ ಹೈ ಕೋರ್ಟ್​

ಕರ್ನಾಟಕ ಹೈಕೋರ್ಟ್ ಶಿವಮೊಗ್ಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಚರಿಸಲಾಗುವ 'ಹೋರಿ ಹಬ್ಬ'ಕ್ಕೆ ಅನುಮತಿ ನೀಡಿದೆ. ಆದರೆ, ಪ್ರಾಣಿ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಧಿಸಿರುವ ಜಲ್ಲಿಕಟ್ಟು ಮಾದರಿಯ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕರ್ನಾಟಕದಲ್ಲಿ ಹೋರಿ ಹಬ್ಬಕ್ಕೆ ಗ್ರೀನ್ ಸಿಗ್ನಲ್ ನೀಡಿದ ಹೈ ಕೋರ್ಟ್​
ಕರ್ನಾಟಕದಲ್ಲಿ ಹೋರಿಹಬ್ಬಕ್ಕೆ ಗ್ರೀನ್ ಸಿಗ್ನಲ್ ನೀಡಿದ ಹೈ ಕೋರ್ಟ್​
ಭಾವನಾ ಹೆಗಡೆ
|

Updated on: Dec 08, 2025 | 3:34 PM

Share

ಬೆಂಗಳೂರು, ಡಿಸೆಂಬರ್ 08: ಶಿವಮೊಗ್ಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಭ್ರಮದಿಂದ ಆಚರಿಸುವ ಹೋರಿ ಹಬ್ಬಕ್ಕೀಗ ಹೈಕೋರ್ಟ್​ನಿಂದ (High Court) ಗ್ರೀನ್ ಸಿಗ್ನಲ್ ಸಿಕ್ಕಿದೆ. ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರಾಜ್ಯದಲ್ಲಿ ‘ಹೋರಿ ಹಬ್ಬ’ ಉತ್ಸವವನ್ನು ನಡೆಸಲು ಅನುಮತಿ ನೀಡಿದ್ದು, ಜಲ್ಲಿಕಟ್ಟು ವಿಷಯದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದೆ.

ಹೋರಿ ಹಬ್ಬಕ್ಕೆ ಅನುಮತಿ ನೀಡಿ ಡಿ.5 ರಂದು ಸ್ಪಷ್ಟನೆ

ಮುಖ್ಯವಾಗಿ ಹಾವೇರಿ, ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು, ಬ್ಯಾಡಗಿ, ರಟ್ಟಿಹಳ್ಳಿ, ಶಿಕಾರಿಪುರ, ಆನವಟ್ಟಿ, ಶಿಗ್ಗಾವಿ, ಶಿರಸಿ, ಮುಂಡಗೋಡ, ಸವಣೂರು, ದಾವಣಗೆರೆ, ಹರಿಹರ, ಹೊನ್ನಾಳಿ, ಶಿವಮೊಗ್ಗ ಈ ಎಲ್ಲಾ ಭಾಗಗಳಲ್ಲಿ ದೀಪಾವಳಿ ಸಮಯದಲ್ಲಿ ಹೋರಿ ಬೆದರಿಸುವ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಇದು ತಮಿಳುನಾಡಿನಲ್ಲಿ ಆಚರಿಸಲಾಗುವ ಜಲ್ಲಿಕಟ್ಟನ್ನು ಹೋಲುತ್ತದೆ. ಇದೀಗ  ಹೋರಿ ಹಬ್ಬಕ್ಕೆ ಹೈ ಕೋರ್ಟ್​ ಅನುಮತಿ ನೀಡಿದ್ದು, ಈ ಬಗ್ಗೆ ಡಿ. 5 ರಂದು ಸ್ಪಷ್ಟನೆ ಕೊಟ್ಟ ನ್ಯಾ. ಎಂ ನಾಗಪ್ರಸನ್ನ , ಪ್ರಾಣಿಗಳ ಬಳಕೆ ಮತ್ತು ಸುರಕ್ಷತಾಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.

ಕೋರ್ಟ್​ ಹೇಳಿದ್ದೇನು?

“ಸುಪ್ರೀಂ ಕೋರ್ಟ್ ಮತ್ತು ಈ ನ್ಯಾಯಾಲಯದ ವಿಭಾಗೀಯ ಪೀಠವು ಹೋರಿ ಹಬ್ಬಕ್ಕೆ ನೀಡಬೇಕಾದ ಅನುಮತಿಯು ಸುರಕ್ಷತಾ ಕ್ರಮಗಳು ಮತ್ತು ಪ್ರಾಣಿಗಳ ಭಾಗವಹಿಸುವಿಕೆ ಅಥವಾ ಬಳಕೆಯ ಕುರಿತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಷರತ್ತುಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿರಬೇಕು. ಇದು ಯಾವುದೇ ಸಂದರ್ಭದಲ್ಲಿ ಕಾಯ್ದೆಯ (ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960) ನಿಬಂಧನೆಗಳಿಗೆ ವಿರುದ್ಧವಾಗಿರಬಾರದು” ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೇ ಹಬ್ಬದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ ಲೈಸೆನ್ಸ್ ರದ್ದಾದ ಮಾತ್ರಕ್ಕೆ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣವೆಂದಲ್ಲ: ಕರ್ನಾಟಕ ಹೈ ಕೋರ್ಟ್

ಅಖಿಲ ಕರ್ನಾಟಕ ರೈತ ಜಾನಪದ ಕ್ರೀಡಾ ಹೋರಿಹಬ್ಬ ಹೋರಾಟ ಸಮಿತಿಯು ಉತ್ಸವಗಳ ಭಾಗವಾಗಿ ಎತ್ತುಗಳು ಮತ್ತು ಎತ್ತಿನ ಬಂಡಿಗಳನ್ನು ಒಳಗೊಂಡ ರ್ಯಾಲಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಕೋರಿದಾಗ, 2022ರ ಡಿಸೆಂಬರ್ 12ರ ಅಧಿಸೂಚನೆಯನ್ನು ಉಲ್ಲೇಖಿಸಿದ ಅಧಿಕಾರಿಗಳು, ಆ ಅಧಿಸೂಚನೆಯ ಪ್ರಕಾರ ಮತ್ತು ನಿಗದಿತ ಷರತ್ತುಗಳನ್ನು ಪೂರೈಸಿದ ನಂತರ ಮಾತ್ರ ಅನುಮತಿ ನೀಡಲಾಗುವುದು ಎಂದಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.