ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ನೂತನ ಸಚಿವರ ಕಿರು ಪರಿಚಯ ಇಲ್ಲಿದೆ

Karnataka Cabinet Expansion: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಇಂದು ಸಂಜೆ 4 ಗಂಟೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್. ಚೆಲುವರಾಯಸ್ವಾಮಿ, ಹೆಚ್.ಸಿ. ಬಾಲಕೃಷ್ಣ, ಸಂತೋಷ್ ಲಾಡ್, ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವು ಹಿರಿಯ ನಾಯಕರು ಹಾಗೂ ಪಕ್ಷಾಂತರ ಗೊಂಡ ನಾಯಕರೂ ಸಂಪುಟ ಸೇರಲಿದ್ದಾರೆ. ನೂತನ ಸಚಿವರ ಸಂಪೂರ್ಣ ವಿವರ ಹಾಗೂ ಅವರ ರಾಜಕೀಯ ಹಿನ್ನೆಲೆಯ ಮಾಹಿತಿ ಇಲ್ಲಿದೆ.

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ನೂತನ ಸಚಿವರ ಕಿರು ಪರಿಚಯ ಇಲ್ಲಿದೆ
ಲೋಕ ಭವನ

Updated on: Aug 04, 2026 | 11:10 AM

ಮುಖ್ಯಾಂಶಗಳು

  • ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ.
  • ಸಂಪುಟ ವಿಸ್ತರಣೆಯ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆಬಿದ್ದಿದೆ.
  • ಹಲವು ಕ್ಷೇತ್ರಗಳ ಹಿರಿಯ ಹಾಗೂ ಹೊಸ ಶಾಸಕರಿಗೆ ಸಚಿವ ಭಾಗ್ಯ.

ಬೆಂಗಳೂರು, ಆಗಸ್ಟ್ 03: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಶುರುವಾಗಿದ್ದು, ಅಧಿಕೃತವಾಗಿ ಸಚಿವರ ಪಟ್ಟಿ ಬಿಡುಗಡೆಯಾಗಿದೆ. ಇಂದು ಸಂಜೆ 4 ಗಂಟೆಗೆ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಈಗಾಗಲೇ ಮುಖ್ಯಮಂತ್ರಿಗಳು ಸಚಿವರಿಗೆ ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ. ಅಧಿಕೃತ ಪಟ್ಟಿ ಪ್ರಕಟವಾಗುತ್ತಿದ್ದಂತೆ ಆಯಾ ಕ್ಷೇತ್ರದ ನೂತನ ಸಚಿವರ ಬೆಂಬಲಿಗರು ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದ್ದು, ವಿಜಯೋತ್ಸವ ಆಚರಿಸುತ್ತಿದ್ದಾರೆ. ನೂತನ ಸಚಿವರ ಕಿರು ಪರಿಚಯ ಇಲ್ಲಿದೆ.

ನೂತನ ಸಚಿವರ ಕಿರು ಪರಿಚಯ ಹಾಗೂ ರಾಜಕೀಯ ಹಿನ್ನೆಲೆ

1. ಹೆಚ್. ಸಿ. ಬಾಲಕೃಷ್ಣ

ಮಾಗಡಿ ಕ್ಷೇತ್ರದ ಶಾಸಕರಾದ ಹೆಚ್. ಸಿ. ಬಾಲಕೃಷ್ಣ ಅವರು ಒಟ್ಟು 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಕೆಆರ್‌ಡಿಸಿಎಲ್ (KRDCL) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ರಾಜಕೀಯ ಜೀವನವನ್ನು 1994ರಲ್ಲಿ ಬಿಜೆಪಿಯಿಂದ ಆರಂಭಿಸಿ, ಬಳಿಕ ಜೆಡಿಎಸ್ ಸೇರಿ ಸತತವಾಗಿ ಗೆಲುವು ಸಾಧಿಸಿದ್ದರು. ನಂತರ 2018ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪ್ರಸ್ತುತ ಸಚಿವರಾಗುತ್ತಿದ್ದಾರೆ.

2. ಶಿವರಾಜ ಸಂಗಪ್ಪ ತಂಗಡಗಿ

ಕನಕಗಿರಿ ಕ್ಷೇತ್ರದ ಶಿವರಾಜ ಸಂಗಪ್ಪ ತಂಗಡಗಿ ಅವರು ಬಿಎಸ್‌ಸಿ (B.Sc) ಪದವೀಧರರಾಗಿದ್ದು, 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು, ತದನಂತರ 2013ರ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈಗ ನೂತನ ಸಚಿವರಾಗಿದ್ದಾರೆ.

3. ಸಂತೋಷ್ ಲಾಡ್

ಕಲಘಟಗಿ ಕ್ಷೇತ್ರದ ಸಂತೋಷ್ ಲಾಡ್ ಅವರು ವಾಣಿಜ್ಯ ಪದವೀಧರರಾಗಿದ್ದು, 4 ಬಾರಿ ಶಾಸಕರಾಗಿ ಹಾಗೂ 2 ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು 2003ರಲ್ಲಿ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದಿಂದ ಸಂಡೂರು ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ನಂತರ 2007ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪ್ರಸ್ತುತ ಕಾರ್ಮಿಕ ಸಚಿವರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ ಸಚಿವ ಸಂಪುಟ ವಿಸ್ತರಣೆ ಇಂದು ಸಂಜೆ 4ಕ್ಕೆ; ನೂತನ ಸಚಿವರು ಯಾರ್ಯಾರು ಗೊತ್ತಾ? ಇಲ್ಲಿದೆ ಪಟ್ಟಿ

4. ಬಸವರಾಜ ರಾಯರೆಡ್ಡಿ

ಯಲಬುರ್ಗಾ ಕ್ಷೇತ್ರದ ಹಿರಿಯ ನಾಯಕ ಬಸವರಾಜ ರಾಯರೆಡ್ಡಿ ಅವರು 6 ಬಾರಿ ಶಾಸಕರಾಗಿ ಹಾಗೂ 11ನೇ ಲೋಕಸಭೆಯ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಇವರು 1980ರ ದಶಕದಲ್ಲಿ ಜನತಾದಳ ಹಾಗೂ ಜನತಾದಳ (ಯು) ಮೂಲಕ ಶಾಸಕ ಹಾಗೂ ಸಂಸದರಾಗಿದ್ದು, 2000ರ ದಶಕದ ಆರಂಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದ ಇವರು ಸಿಎಂ ಆರ್ಥಿಕ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

5. ಬಿ. ನಾಗೇಂದ್ರ

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬಿ. ನಾಗೇಂದ್ರ ಅವರು ಬಿಕಾಂ ಪದವೀಧರರಾಗಿದ್ದು, ಒಟ್ಟು 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು 2008ರಲ್ಲಿ ಪಕ್ಷೇತರರಾಗಿ ಗೆದ್ದು, 2013ರಲ್ಲಿ ಬಿಜೆಪಿಯಿಂದ ಹಾಗೂ 2018ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಗೆಲುವು ಸಾಧಿಸಿದ್ದರು. ಹಿಂದೆ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

6. ಎನ್. ಚೆಲುವರಾಯಸ್ವಾಮಿ

ನಾಗಮಂಗಲ ಕ್ಷೇತ್ರದ ಎನ್. ಚೆಲುವರಾಯಸ್ವಾಮಿ ಅವರು 4 ಬಾರಿ ಶಾಸಕರಾಗಿ ಹಾಗೂ 1 ಬಾರಿ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದು, ಆರೋಗ್ಯ ಮತ್ತು ಸಾರಿಗೆ ಸಚಿವರಾಗಿದ್ದ ಇವರು, ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರನ್ನು ಪ್ರಕಟಿಸಿದ ಎಐಸಿಸಿ

7. ರುದ್ರಪ್ಪ ಲಮಾಣಿ

ಹಾವೇರಿ ಎಸ್‌ಸಿ ಮೀಸಲು ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಅವರು ಬಿ.ಎ. ಎಲ್‌ಎಲ್‌ಬಿ (B.A. LLB) ಪದವೀಧರರಾಗಿದ್ದು, ಸತತವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಂಜಾರ ಸಮುದಾಯದ ಪ್ರಮುಖ ನಾಯಕರಾದ ಇವರು ಪ್ರಸ್ತುತ ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದು, ಹಿಂದೆ ಜವಳಿ ಮತ್ತು ಮುಜರಾಯಿ ಸಚಿವರಾಗಿದ್ದರು.

8. ಟಿ. ರಘುಮೂರ್ತಿ

ಚಳ್ಳಕೆರೆ ಎಸ್‌ಟಿ ಮೀಸಲು ಕ್ಷೇತ್ರದ ಟಿ. ರಘುಮೂರ್ತಿ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. ಸತತವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಮೂರು ಬಾರಿ (2013, 2018, 2023) ಗೆದ್ದು ‘ಹ್ಯಾಟ್ರಿಕ್ ಹೀರೋ’ ಎನಿಸಿಕೊಂಡಿದ್ದಾರೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

9. ಡಾ. ಅಜಯ್ ಸಿಂಗ್

ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯ್ ಸಿಂಗ್ ಅವರು ಮಾಜಿ ಸಿಎಂ ಧರಂ ಸಿಂಗ್ ಅವರ ಪುತ್ರರಾಗಿದ್ದು, ಆರಂಭದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದು ಸತತ ಮೂರು ಬಾರಿ ಗೆಲುವು ಸಾಧಿಸಿ ಕಲಬುರಗಿ ಜಿಲ್ಲೆಯ ಪ್ರಾತಿನಿಧ್ಯವಾಗಿ ಸಂಪುಟ ಸೇರುತ್ತಿದ್ದಾರೆ.

10. ವಿಜಯಾನಂದ ಕಾಶಪ್ಪನವರ್

ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ನಾಯಕರಾಗಿದ್ದು, ಸಾಮಾಜಿಕ ಹಾಗೂ ಪರಿಸರ ಕಾಳಜಿಯ ಕೆಲಸಗಳಿಗಾಗಿ ಇಂದಿರಾ ಗಾಂಧಿ ರಾಷ್ಟ್ರೀಯ ಸೇವಾ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ ಸಿಎಂ ಡಿಕೆಶಿ ಕ್ಯಾಬಿನೆಟ್​​ನಲ್ಲಿ 11 ಮಂದಿ ಮಾತ್ರ ಹೊಸಬರು: ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ಕೊಕ್

11. ಗಾಯತ್ರಿ ಶಾಂತೇಗೌಡ

ವಿಧಾನ ಪರಿಷತ್ ಸದಸ್ಯೆ (MLC) ಗಾಯತ್ರಿ ಶಾಂತೇಗೌಡ ಅವರು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಅನುಭವ ಹೊಂದಿದ್ದು, ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸ್ಥಳೀಯ ಸಂಸ್ಥೆಗಳಿಂದ 2 ಬಾರಿ ಪರಿಷತ್‌ಗೆ ಆಯ್ಕೆಯಾಗಿ ನೂತನ ಮಹಿಳಾ ಪ್ರಾತಿನಿಧ್ಯವಾಗಿ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

12. ರಿಜ್ವಾನ್ ಅರ್ಷದ್

ಶಿವಾಜಿನಗರ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಅವರು ಬಿ.ಕಾಂ ಪದವೀಧರರಾಗಿದ್ದು, 1995-96ರಲ್ಲಿ NSUI ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದ ಇವರು, ಡಿಸೆಂಬರ್ 2019ರ ಶಿವಾಜಿನಗರ ಉಪಚುನಾವಣೆಯಲ್ಲಿ ಗೆದ್ದು ಪ್ರಥಮ ಬಾರಿಗೆ ಶಾಸಕರಾದರು. 2014 ಮತ್ತು 2019ರಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸದ್ಯ ಯುವ ನಾಯಕತ್ವದ ಸಂಕೇತವಾಗಿ ರಾಜಧಾನಿ ಬೆಂಗಳೂರಿನಿಂದ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

13. ಎಸ್. ಎಸ್. ಮಲ್ಲಿಕಾರ್ಜುನ್

ದಾವಣಗೆರೆಯ ಹಿರಿಯ ನಾಯಕ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಬಿಕಾಂ ಪದವೀಧರರಾಗಿದ್ದು, 1996, 1999, 2013 ಹಾಗೂ 2023ರಲ್ಲಿ ಶಾಸಕರಾಗಿ ಒಟ್ಟು ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ಪುತ್ರರಾದ ಇವರು, ಹಿಂದೆ ಎಸ್.ಎಂ. ಕೃಷ್ಣ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರಗಳಲ್ಲಿ ಯುವಜನ ಸೇವೆ, ತೋಟಗಾರಿಕೆ ಹಾಗೂ ಗಣಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವ ಇವರು ಇದೀಗ ನಾಲ್ಕನೇ ಬಾರಿಗೆ ಸಂಪುಟ ಸೇರುತ್ತಿದ್ದಾರೆ.

14. ಪಿ. ಎಂ. ನರೇಂದ್ರ ಸ್ವಾಮಿ

ಮಳವಳ್ಳಿ ಕ್ಷೇತ್ರದ ಶಾಸಕರಾದ ಪಿ. ಎಂ. ನರೇಂದ್ರ ಸ್ವಾಮಿ ಅವರು ಯೂತ್ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ನಾಯಕರಾಗಿದ್ದಾರೆ. 2013ರಲ್ಲೇ ಸಚಿವ ಸ್ಥಾನದ ರೇಸ್‌ನಲ್ಲಿದ್ದ ಇವರಿಗೆ, 2023ರಲ್ಲಿ ಸಚಿವ ಸ್ಥಾನ ಕೈತಪ್ಪಿತ್ತು. ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ನೇರ ಸಂಪರ್ಕ ಹೊಂದಿರುವ ಮೂಲ ಕಾಂಗ್ರೆಸ್‌ನ ಈ ಹಿರಿಯ ನಾಯಕರಿಗೆ ಇದೀಗ ಅರ್ಹ ಮಣೆ ಹಾಕಿ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿದೆ.

15. ಮಧು ಬಂಗಾರಪ್ಪ

ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಅವರು ಮಾಜಿ ಸಿಎಂ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರರಾಗಿದ್ದಾರೆ. ಬಿ.ಎ ಪದವೀಧರರಾದ ಇವರು 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಜುಲೈ 2021ರಲ್ಲಿ ಕಾಂಗ್ರೆಸ್ ಸೇರಿ, 2023ರಲ್ಲಿ ತಮ್ಮ ಸಹೋದರನ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪ್ರಸ್ತುತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಎರಡನೇ ಬಾರಿಗೆ ಸಂಪುಟಕ್ಕೆ ಆಯ್ಕೆಯಾಗಿದ್ದಾರೆ.

16. ಪುಟ್ಟರಂಗಶೆಟ್ಟಿ

ಚಾಮರಾಜನಗರ ಕ್ಷೇತ್ರದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಬಿ.ಎ. ಪದವೀಧರರಾಗಿದ್ದು, ವೃತ್ತಿಯಲ್ಲಿ ಕೃಷಿ ಮತ್ತು ಉದ್ಯಮದಲ್ಲಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಇವರು, 2013, 2018 ಮತ್ತು 2023ರಲ್ಲಿ ಸತತವಾಗಿ ಗೆದ್ದು 4ನೇ ಬಾರಿಗೆ ಶಾಸಕರಾಗಿದ್ದಾರೆ. ಎಂಎಸ್‌ಐಎಲ್ (MSIL) ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಪ್ರಭಾವಿ ಹಿಂದುಳಿದ ವರ್ಗಗಳ ನಾಯಕರಾಗಿ ಸಂಪುಟ ಸೇರುತ್ತಿದ್ದಾರೆ.

17. ಲಕ್ಷ್ಮಣ ಸವದಿ

ಅಥಣಿ ಕ್ಷೇತ್ರದ ಶಾಸಕರಾದ ಲಕ್ಷ್ಮಣ ಸವದಿ ಅವರು 4 ಬಾರಿ ಶಾಸಕರಾಗಿ ಹಾಗೂ 2 ಬಾರಿ ವಿಧಾನ ಪರಿಷತ್ (MLC) ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಹಿಂದೆ ಬಿಜೆಪಿಯಲ್ಲಿದ್ದ ಇವರು ಉಪಮುಖ್ಯಮಂತ್ರಿಯಾಗಿ, ಸಾರಿಗೆ ಹಾಗೂ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಭಾರಿ ಅಂತರದ ಗೆಲುವು ಸಾಧಿಸಿ, ಇದೀಗ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

18. ಕೆ. ಎಸ್. ಬಸವಂತಪ್ಪ

ದಾವಣಗೆರೆ ಜಿಲ್ಲೆಯ ಮಾಯಕೊಂಡ ಎಸ್‌ಸಿ ಮೀಸಲು ಕ್ಷೇತ್ರದ ಶಾಸಕರಾದ ಕೆ. ಎಸ್. ಬಸವಂತಪ್ಪ ಅವರು ಕೃಷಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ. 2023ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಥಮ ಬಾರಿಗೆ ಗೆದ್ದುಬಂದ ಈ ಯುವ/ಹೊಸ ಮುಖಕ್ಕೆ ನೂತನ ಸಂಪುಟದಲ್ಲಿ ಸಚಿವ ಸ್ಥಾನದ ಒಲವು ಸಿಕ್ಕಿದೆ.

19. ಕೆ. ಎಮ್. ಶಿವಲಿಂಗೇಗೌಡ

ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ. ಎಮ್. ಶಿವಲಿಂಗೇಗೌಡ ಅವರು ಬಿ.ಎ ಪದವೀಧರರಾಗಿದ್ದು, ಒಟ್ಟು 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆರಂಭದಲ್ಲಿ ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿದ್ದ ಇವರು, 2023ರ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಗೆಲುವು ಸಾಧಿಸಿದ್ದರು. ಪ್ರಸ್ತುತ ಕರ್ನಾಟಕ ಗೃಹ ಮಂಡಳಿ (KHB) ಅಧ್ಯಕ್ಷರಾಗಿದ್ದ ಇವರಿಗೆ ಇದೀಗ ಸಚಿವ ಸ್ಥಾನ ಲಭಿಸಿದೆ.

20. ಬಿ. ಝಡ್. ಜಮೀರ್ ಅಹ್ಮದ್ ಖಾನ್

ಚಾಮರಾಜಪೇಟೆ ಕ್ಷೇತ್ರದ ಶಾಸಕರಾದ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರು 5 ಬಾರಿ ಶಾಸಕರಾಗಿ ಆಯ್ಕೆಯಾದ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದಾರೆ. ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಇಲಾಖೆಯ ಸಚಿವರಾಗಿ, ಜೊತೆಗೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಇವರು, ಉದ್ಯಮ ಹಾಗೂ ಸಾರಿಗೆ ಕ್ಷೇತ್ರದಲ್ಲಿ ಆಳವಾದ ಹಿನ್ನೆಲೆ ಹೊಂದಿದ್ದು ಮತ್ತೆ ಸಂಪುಟದಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Mon, 3 August 26

Loading...
Unable to load recommendations.
Follow Us