ಸರ್ಕಾರಿ ಅಧಿಕಾರಿಗಳಿನ್ನು ಬೆಳಗ್ಗೆ 10 ಗಂಟೆಗೆ ಆಫೀಸ್​ನಲ್ಲಿರಲೇಬೇಕು: ಇಲ್ಲಾಂದ್ರೆ ಇಲಾಖಾ ಮುಖ್ಯಸ್ಥರಿಗೆ ಹೋಗುತ್ತೆ AI ರಿಪೋರ್ಟ್!

ರಾಜ್ಯ ಸರ್ಕಾರಿ ನೌಕರರ ಸರಣಿ ಗೈರುಹಾಜರಿ ಹಾಗೂ ವಿಳಂಬಕ್ಕೆ ಬ್ರೇಕ್ ಹಾಕಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಇನ್ಮುಂದೆ ಪ್ರತಿಯೊಬ್ಬ ಸಿಬ್ಬಂದಿಯೂ ಬೆಳಗ್ಗೆ 10 ಗಂಟೆಯೊಳಗೆ 'ಕರ್ತವ್ಯ' ಆಪ್ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ AI ತಂತ್ರಜ್ಞಾನದ ಮೂಲಕ ಸ್ವಯಂಚಾಲಿತವಾಗಿ ಇಲಾಖಾ ಮುಖ್ಯಸ್ಥರಿಗೆ ವರದಿ ರವಾನೆಯಾಗಲಿದೆ.

ಸರ್ಕಾರಿ ಅಧಿಕಾರಿಗಳಿನ್ನು ಬೆಳಗ್ಗೆ 10 ಗಂಟೆಗೆ ಆಫೀಸ್​ನಲ್ಲಿರಲೇಬೇಕು: ಇಲ್ಲಾಂದ್ರೆ ಇಲಾಖಾ ಮುಖ್ಯಸ್ಥರಿಗೆ ಹೋಗುತ್ತೆ AI ರಿಪೋರ್ಟ್!
ನೌಕರರ ಹಾಜರಾತಿ ಪತ್ತೆ ಹಚ್ಚಲು ಇ-ಆಡಳಿತ ಇಲಾಖೆಯಿಂದ 'ಕರ್ತವ್ಯ' ಆಪ್ ಬಳಕೆ

Updated on: Jun 06, 2026 | 2:36 PM

ಬೆಂಗಳೂರು, ಜೂನ್ 06: ರಾಜ್ಯದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಸರಣಿ ಗೈರುಹಾಜರಿ ಹಾಗೂ ವಿಳಂಬಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಈಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೊರೆ ಹೋಗಿದೆ. ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕೆಂದು ಮುಖ್ಯಮಂತ್ರಿಗಳು ಗುರುವಾರ (ಜೂನ್ 4) ನಡೆಸಿದ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ (CS) ಶಾಲಿನಿ ರಜನೀಶ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಮುಖ್ಯಾಂಶಗಳು

  • ಬೆಳಗ್ಗೆ 10 ಗಂಟೆಯೊಳಗೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಕಚೇರಿಗೆ ಹಾಜರಾಗುವುದು ಕಡ್ಡಾಯ.
  • ನೌಕರರ ಹಾಜರಾತಿ ಪತ್ತೆ ಹಚ್ಚಲು ಇ-ಆಡಳಿತ ಇಲಾಖೆಯಿಂದ ‘ಕರ್ತವ್ಯ’ ಆಪ್ ಬಳಕೆ.
  • ಲೇಟಾಗಿ ಬರುವ ಸಿಬ್ಬಂದಿಗಳ ಪಟ್ಟಿಯನ್ನು ಸ್ವಯಂಚಾಲಿತವಾಗಿ ಸಿದ್ಧಪಡಿಸಲಿದೆ AI ತಂತ್ರಜ್ಞಾನ.

‘ಕರ್ತವ್ಯ App’ ಬಳಕೆ ಕಡ್ಡಾಯ

ಸರ್ಕಾರಿ ನೌಕರರ ಹಾಜರಾತಿಯನ್ನು ಡಿಜಿಟಲೀಕರಣಗೊಳಿಸಲು ಇ-ಆಡಳಿತ ಇಲಾಖೆಯು ಕರ್ತವ್ಯ (KAAMS) App ಸಿದ್ಧಪಡಿಸಿದೆ. ಈಗಾಗಲೇ HRMS ತಂತ್ರಾಂಶದಲ್ಲಿ ಲಭ್ಯವಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಮಾಹಿತಿಯನ್ನು ಇದರಲ್ಲಿ ನೋಂದಾಯಿಸಲಾಗಿದೆ. ಆದರೆ, ಬಹಳಷ್ಟು ಸಿಬ್ಬಂದಿಗಳು ಈ ಆಪ್ ಅನ್ನು ನಿರಂತರವಾಗಿ ಬಳಸುತ್ತಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಹೀಗಾಗಿ, ಇನ್ನು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರೂ ಬೆಳಗ್ಗೆ 10 ಗಂಟೆಗೆ ಕರ್ತವ್ಯ ಆಪ್‌ನಲ್ಲಿ ಚೆಕ್ ಇನ್ ಹಾಗೂ ಚೆಕ್ ಔಟ್ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಲೇಟ್ ಆಗಿ ಬಂದ್ರೆ ಹಿಡಿಯುತ್ತೆ AI ತಂತ್ರಜ್ಞಾನ!

ಈ ನಿಯಮವನ್ನು ಕೇವಲ ಆದೇಶಕ್ಕೆ ಸೀಮಿತಗೊಳಿಸದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇ-ಆಡಳಿತ ಇಲಾಖೆಯು ಅತ್ಯಾಧುನಿಕ AI (ಕೃತಕ ಬುದ್ಧಿಮತ್ತೆ) ತಂತ್ರಾಂಶವನ್ನು ಬಳಸಿಕೊಳ್ಳುತ್ತಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಹಾಜರಾತಿ ದಾಖಲಿಸದ ಅಧಿಕಾರಿ ಮತ್ತು ಸಿಬ್ಬಂದಿಗಳ ಜಿಲ್ಲಾವಾರು ಹಾಗೂ ಕಚೇರಿವಾರು ಮಾಹಿತಿಯನ್ನು AI ತಂತ್ರಾಂಶವು ಸ್ವಯಂಚಾಲಿತವಾಗಿ ವರದಿ ಸಿದ್ಧಪಡಿಸಲಿದೆ. ಈ AI ಜನರೇಟೆಡ್ ವರದಿಯನ್ನು ಆಯಾ ಇಲಾಖೆಯ ಮುಖ್ಯಸ್ಥರ ವೈಯಕ್ತಿಕ ಲಾಗಿನ್ ಡ್ಯಾಶ್‌ ಬೋರ್ಡ್‌ಗೆ ನೇರವಾಗಿ ಕಳುಹಿಸಲಾಗುತ್ತದೆ. ಇಲಾಖಾ ಮುಖ್ಯಸ್ಥರು ಪ್ರತಿದಿನ ಈ ಡ್ಯಾಶ್‌ ಬೋರ್ಡ್ ಪರಿಶೀಲಿಸಿ, ಹಾಜರಾತಿ ದಾಖಲಿಸದವರಿಗೆ ತಕ್ಷಣವೇ ಸೂಕ್ತ ಸೂಚನೆ ಅಥವಾ ನೋಟಿಸ್ ನೀಡಬೇಕಾಗುತ್ತದೆ.

ಪ್ರವಾಸದಲ್ಲಿದ್ದರೆ ಏನು ಮಾಡಬೇಕು?

ಒಂದು ವೇಳೆ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಕಚೇರಿ ಕೆಲಸದ ನಿಮಿತ್ತ ಹೊರಗಡೆ ಪ್ರವಾಸದಲ್ಲಿದ್ದರೆ (On Official Duty), ಅದಕ್ಕೂ ಆ್ಯಪ್​ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂತಹ ನೌಕರರು ಆ್ಯಪ್​ನಲ್ಲಿರುವ OOD ಆಪ್ಶನ್ ಆಯ್ಕೆ ಮಾಡಿ, ತಮ್ಮ ಪ್ರವಾಸದ ಉದ್ದೇಶವನ್ನು ನಮೂದಿಸಿ ಹಾಜರಾತಿ ದಾಖಲಿಸಬೇಕು. ತದನಂತರ ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ಪರಿಶೀಲಿಸಿ ಧೃಡೀಕರಿಸಬೇಕಾಗುತ್ತದೆ.

ಇದನ್ನೂ ಓದಿ ದೇಶದಲ್ಲೇ ಮೊದಲು: AI ಬಳಸಿ ಅನುವಾದಗೊಂಡ ಕನ್ನಡ ಪುಸ್ತಕ ಮೈಸೂರಿನಲ್ಲಿ ಬಿಡುಗಡೆ!

ಈ ಆದೇಶವನ್ನು ಕಡ್ಡಾಯವೆಂದು ಪರಿಗಣಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಆ್ಯಪ್ ಬಳಕೆಯ ಹೆಚ್ಚಿನ ಮಾಹಿತಿಗಾಗಿ ಯುಟ್ಯೂಬ್‌ನಲ್ಲಿ (YouTube) ಲಭ್ಯವಿರುವ ‘Kartavya (KAAMS) APP’ ವಿಡಿಯೋ ವೀಕ್ಷಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:09 am, Sat, 6 June 26

Follow Us