ಇಂದಿನಿಂದ ರಾಜ್ಯಾದ್ಯಂತ SIR ಆರಂಭ: ಸಾರ್ವಜನಿಕರ ನೆರವಿಗಾಗಿ ಕಂಟ್ರೋಲ್ ರೂಂ, ಸಹಾಯವಾಣಿ

ಕರ್ನಾಟಕದಲ್ಲಿ ಜೂನ್ 30ರಿಂದ ಜುಲೈ 29ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದ್ದು, ಸಾರ್ವಜನಿಕರ ದೂರು ಹಾಗೂ ಗೊಂದಲಗಳ ನಿವಾರಣೆಗಾಗಿ ಬೆಂಗಳೂರು ನಗರ ಜಿಲ್ಲಾಡಳಿತವು ವಿಶೇಷ ಸಹಾಯವಾಣಿ ಕೇಂದ್ರ, ಸಂಖ್ಯೆ ಹಾಗೂ ಇ-ಮೇಲ್ ಸೌಲಭ್ಯವನ್ನು ಆರಂಭಿಸಿದೆ. ತಿದ್ದುಪಡಿ, ಹೆಸರು ಸೇರ್ಪಡೆ ಹಾಗೂ ಪ್ರಕ್ರಿಯೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇಂದಿನಿಂದ ರಾಜ್ಯಾದ್ಯಂತ SIR ಆರಂಭ: ಸಾರ್ವಜನಿಕರ ನೆರವಿಗಾಗಿ ಕಂಟ್ರೋಲ್ ರೂಂ, ಸಹಾಯವಾಣಿ
ಸಾಂದರ್ಭಿಕ ಚಿತ್ರ
Image Credit source: tv9

Updated on: Jun 30, 2026 | 6:56 AM

ಮುಖ್ಯಾಂಶಗಳು

  • ಸಹಾಯವಾಣಿ ಸಂಖ್ಯೆ 080-22967200 ಸ್ಥಾಪನೆ
  • ಮನೆ ಮನೆಗೆ ಬರಲಿದ್ದಾರೆ ಚುನಾವಣಾಧಿಕಾರಿಗಳು
  • ಅಕ್ಟೋಬರ್ 7 ರಂದು ಅಂತಿಮ ಪಟ್ಟಿ ಪ್ರಕಟ

ಬೆಂಗಳೂರು, ಜೂನ್ 30: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (Special Intensive Revision) ಕಾರ್ಯವು ಜೂನ್ 30ರಿಂದ ಅಧಿಕೃತವಾಗಿ ಆರಂಭವಾಗಿದೆ. ಜುಲೈ 29ರವರೆಗೆ ಒಂದು ತಿಂಗಳ ಕಾಲ ಬೂತ್ ಮಟ್ಟದ ಅಧಿಕಾರಿಗಳು (BLO) ನಿಮ್ಮ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲುಗಳ ನಿವಾರಣೆ, ದೂರು ಸಲ್ಲಿಕೆ ಹಾಗೂ ಸ್ಪಷ್ಟೀಕರಣಕ್ಕಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್. ತಿಳಿಸಿದ್ದಾರೆ.

ದೂರು ಸಲ್ಲಿಕೆಗೆ ದೂರವಾಣಿ, ಸೋಷಿಯಲ್ ಮೀಡಿಯಾ ಲಿಂಕ್

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಾದ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ಕ್ಷೇತ್ರಗಳ ಸಾರ್ವಜನಿಕರು ಈ ಸಹಾಯವಾಣಿ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಮತದಾರರು ತಮ್ಮ ಅಹವಾಲುಗಳಿಗಾಗಿ ಕಚೇರಿ ವೇಳೆಯಲ್ಲಿ ಸಹಾಯವಾಣಿ ಸಂಖ್ಯೆ 080-22967200 ಗೆ ಕರೆ ಮಾಡಬಹುದು ಅಥವಾ adeobangaloreurban@gmail.com ಗೆ ಇ-ಮೇಲ್ ಕಳುಹಿಸಬಹುದು. ಇದಲ್ಲದೆ ಜಿಲ್ಲಾಧಿಕಾರಿಗಳ ಅಧಿಕೃತ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ (Deputy Commissioner, Bengaluru Urban), ಇನ್‌ಸ್ಟಾಗ್ರಾಮ್ (dc_bangalore_urban) ಮತ್ತು ಎಕ್ಸ್ (DC_blrurban) ಮೂಲಕವೂ ಸಂಪರ್ಕಿಸಬಹುದಾಗಿದೆ.

ಮನೆ ಮನೆ ಭೇಟಿ ವೇಳೆ ಏನೆಲ್ಲ ಪ್ರಕ್ರಿಯೆ ನಡೆಯಲಿದೆ?

ನಿಮ್ಮ ವೋಟರ್ ಐಡಿಯಲ್ಲಿ ಹೆಸರು, ವಿಳಾಸ ತಪ್ಪುಗಳಿದ್ದರೆ ಸೂಕ್ತ ತಿದ್ದುಪಡಿ ಮಾಡಲು, 18 ವರ್ಷ ತುಂಬಿದ ಹೊಸ ಮತದಾರರ ಹೆಸರು ಸೇರಿಸಲು ಹಾಗೂ ವಲಸೆ ಹೋದವರು ಅಥವಾ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಬಿಎಲ್‌ಒಗಳು ಮನೆಗೆ ಬಂದಾಗ ಎಸ್‌ಐಆರ್ (SIR) ಅರ್ಜಿಯನ್ನು ನೀಡಲಿದ್ದಾರೆ. ಸಾರ್ವಜನಿಕರು ಈ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಸಹಿ ಹಾಕಿ, ಅಗತ್ಯ ದಾಖಲೆಗಳಾದ ಕುಟುಂಬ ಸದಸ್ಯರ ಗುರುತಿನ ಚೀಟಿ, ವೋಟರ್ ಐಡಿ, ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಸ್ಥಳದಲ್ಲೇ ಅಧಿಕಾರಿಗಳಿಗೆ ನೀಡಬೇಕು. ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿದ್ದರೆ ಅಥವಾ ವಂಶಾವಳಿ ಜೋಡಣೆಯಾಗದಿದ್ದರೆ ಅಂತಹ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.

ಚುನಾವಣಾ ಆಯೋಗದ ಅಧಿಕೃತ ವೇಳಾಪಟ್ಟಿ

ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಪ್ರಕಾರ, ಈ ಮಹತ್ವದ ಕಾರ್ಯಕ್ಕೆ ರಾಜ್ಯಾದ್ಯಂತ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಪ್ರಕ್ರಿಯೆಯ ವೇಳಾಪಟ್ಟಿ ಹೀಗಿದೆ;

  • ಜೂನ್ 30 ರಿಂದ ಜುಲೈ 29: ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಮತ್ತು ದಾಖಲೆ ಸಂಗ್ರಹಣೆ.
  • ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟಣೆ.
  • ಆಗಸ್ಟ್ 5 ರಿಂದ ಸೆಪ್ಟೆಂಬರ್ 4: ಕರಡು ಪಟ್ಟಿಗೆ ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸಲು ಅವಕಾಶ.
  • ಆಗಸ್ಟ್ 5 ರಿಂದ ಅಕ್ಟೋಬರ್ 3: ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಹಾಗೂ ವಿಲೇವಾರಿ.
  • ಅಕ್ಟೋಬರ್ 7: ಪರಿಷ್ಕೃತಗೊಂಡ ಅಂತಿಮ ಮತದಾರರ ಪಟ್ಟಿ ಪ್ರಕಟಣೆ.

ಮತದಾನದ ಹಕ್ಕನ್ನು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿರುವುದರಿಂದ, ಸಾರ್ವಜನಿಕರು ತಮ್ಮ ಮನೆಗೆ ಬರುವ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದು ಚುನಾವಣಾ ಆಯೋಗ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us