ಮತದಾರರಿಗೆ ಹಂಚಲು ಬ್ಯಾಗ್‌ ಸಂಗ್ರಹಿಸಿದ್ದ ಆರೋಪ: ಕೆಸಿ ನಾರಾಯಣಗೌಡ ಫೋಟೋ ಇರುವ 450 ಶಾಲಾ ಬ್ಯಾಗ್ ಜಪ್ತಿ

ಕ್ರೀಡಾ ಸಚಿವ, ಕೆ.ಆರ್.ಪೇಟೆ ಬಿಜೆಪಿ ಶಾಸಕ ಕೆ.ಸಿ.ನಾರಾಯಣಗೌಡ ಫೋಟೋ ಇರುವ 450 ಶಾಲಾ ಬ್ಯಾಗ್​​ಗಳನ್ನು ಜಪ್ತಿ ಮಾಡಲಾಗಿದೆ.

ಮತದಾರರಿಗೆ ಹಂಚಲು ಬ್ಯಾಗ್‌ ಸಂಗ್ರಹಿಸಿದ್ದ ಆರೋಪ: ಕೆಸಿ ನಾರಾಯಣಗೌಡ ಫೋಟೋ ಇರುವ 450 ಶಾಲಾ ಬ್ಯಾಗ್ ಜಪ್ತಿ
ಶಾಲಾ ಬ್ಯಾಗ್ ಜಪ್ತಿ

Updated on: Mar 26, 2023 | 9:49 PM

ಬೆಂಗಳೂರು: ಕ್ರೀಡಾ ಸಚಿವ, ಕೆ.ಆರ್.ಪೇಟೆ ಬಿಜೆಪಿ ಶಾಸಕ ಕೆ.ಸಿ.ನಾರಾಯಣಗೌಡ (KC Narayana Gowda) ಫೋಟೋ ಇರುವ 450 ಶಾಲಾ ಬ್ಯಾಗ್​​ಗಳನ್ನು ಜಪ್ತಿ ಮಾಡಲಾಗಿದೆ. ನಗರದ ಚಾಮರಾಜಪೇಟೆಯ 3ನೇ ಕ್ರಾಸ್‌ನ ಗೋದಾಮಿನಲ್ಲಿ  ಕೆ.ಆರ್.ಪೇಟೆ ಮತದಾರರಿಗೆ ಹಂಚಲು ಬ್ಯಾಗ್‌ ಸಂಗ್ರಹಿಸಿದ್ದ ಆರೋಪ ಕೇಳಿಬಂದಿದ್ದು, 450 ಶಾಲಾ ಬ್ಯಾಗ್​ಗಳನ್ನು GST ಅಧಿಕಾರಿಗಳು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಆರ್​ಎಸ್ ಪಕ್ಷದಿಂದ ಪೊಲೀಸರಿಗೆ ನೀಡಲಾದ ಮಾಹಿತಿ ಮೇರೆಗೆ ಪರಿಶೀಲನೆ ಮಾಡಲಾಗಿದೆ. ಜೊತೆಗೆ ಫೇಸ್ ಬುಕ್​ನಲ್ಲೂ ಸಹ ಕೆಆರ್​ಎಸ್ ಪಕ್ಷ ಈ ಬಗ್ಗೆ ಲೈವ್ ಮಾಡಿದೆ. 10 ಸಾವಿರದಷ್ಟು ಶಾಲೆಯ ಬ್ಯಾಗ್​ಗಳು ಇರಿಸಲಾಗಿದೆ ಎಂಬ ಆರೋಪ ಮಾಡಲಾಗಿದೆ.

ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ: ಮಂಜುನಾಥ್

ಈ ಕುರಿತಾಗಿ ಕೆಆರ್​ಎಸ್ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಮೂರು ಪಕ್ಷಗಳಿಂದ‌ ಸೀರೆ, ಕುಕ್ಕರ್ ಹಂಚಿಕೆಯ ಬಗ್ಗೆ ಚುನಾವಣಾ ಆಯೋಗಕ್ಕೆ ನಮ್ಮ ರಾಜ್ಯಾಧ್ಯಕ್ಷರು ದೂರು ನೀಡಿದ್ದಾರೆ. ಕೆಆರ್ ಪೇಟೆಯ ಶಾಸಕ ನಾರಾಯಣಸ್ವಾಮಿ ಅವರ ಫೋಟೋ ಇರುವ ಬ್ಯಾಗ್​ ಗಳಿದ್ದಾವೆ. ಸದ್ಯಕ್ಕೆ ತೆರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಗಿಫ್ಟ್ ಪಾಲಿಟಿಕ್ಸ್: ಇಂದು ರಾಜ್ಯದ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಸೀರೆ, ಬೆಳ್ಳಿ ಬಂಗಾರ ವಶಕ್ಕೆ

ನಿನ್ನೆ ರಾತ್ರಿಯೇ ಅಧಿಕಾರಿಗಳಿಗೆ ಬ್ಯಾಗ್​ಗಳು ಹಂಚಿಕೆ ಆಗುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ ಈ ಬಗ್ಗೆ ದಾಳಿ ಮಾಡಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ನಾವೇ ದಾಳಿ ಮಾಡಿದ್ದೇವೆ. ನಾವು ಮಾಹಿತಿ ಕೊಟ್ಟ 23ವರೆ ಗಂಟೆ ಬಳಿಕ ಅಧಿಕಾರಿಗಳು ದಾಳಿ ಮಾಡಿದ್ದು, 10 ಸಾವಿರ ಬ್ಯಾಗ್​ಗಳು ಸಿಕ್ಕಿವೆ.

ಪುಡ್ ಕಿಟ್​ಗಳು ವಶಕ್ಕೆ

ಕೋಲಾರ: ರಂಜಾನ್ ಹಬ್ಬದ ಪ್ರಯುಕ್ತ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಪುಡ್ ಕಿಟ್​ಗಳನ್ನು ನಗರ ಠಾಣಾ ಪೊಲೀಸರು​ ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಸುಲ್ತಾನ್ ತಿಪ್ಪಸಂದ್ರ ಬಳಿ ಇನಾಯತ್ ಎಂಬುವರಿಗೆ ಸೇರಿದ 1200 ಪುಡ್ ಕಿಟ್​ಗಳನ್ನು ಜಪ್ತಿ ಮಾಡಲಾಗಿದೆ. ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದು, ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Chintamani: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 22 ಲಕ್ಷ ಮೌಲ್ಯದ ಸೀರೆಗಳನ್ನು ಜಪ್ತಿ ಮಾಡಿದ GST ಅಧಿಕಾರಿಗಳು

3 ಕೋಟಿ ಮೌಲ್ಯದ ಕುಕ್ಕರ್, ಗಡಿಯಾರ ಜಪ್ತಿ

ಬೆಂಗಳೂರು: ಚುನಾವಣೆ ಹೊತ್ತಲ್ಲಿ GST ಅಧಿಕಾರಿಗಳು ದಾಳಿ ನಡೆಸಿದ್ದು ಬೆಂಗಳೂರಿನಲ್ಲಿ 3 ಕೋಟಿ ಮೌಲ್ಯದ ಕುಕ್ಕರ್, ಗಡಿಯಾರ ಜಪ್ತಿ ಮಾಡಿದ್ದಾರೆ. ಯಲಹಂಕ ಬಳಿಯ ಇಂಟರ್​ನ್ಯಾಷನಲ್​ ಶಾಲೆ ಹಿಂಬದಿ ಗೋದಾಮಿನ ಮೇಲೆ ದಾಳಿ ಮಾಡಿ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನೇಂದ್ರ ಕುಮಾರ್​ಗೆ ಸೇರಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಮತದಾರರಿಗೆ ಹಂಚಲು ಕುಕ್ಕರ್, ಗಡಿಯಾರಗಳು ಸಂಗ್ರಹಿಸಿಟಲಾಗಿತ್ತು.

ಅಕ್ರಮವಾಗಿ ಸಾಗಿಸ್ತಿದ್ದ 10 ಕೆಜಿ ಬೆಳ್ಳಿ ಆಭರಣ ವಶ

ಮತ್ತೊಂದೆಡೆ ಬೆಂಗಳೂರಿನ ಎಸ್‌.ಜೆ.ಪಾರ್ಕ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 10 ಕೆಜಿ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ. ಚುನಾವಣೆ ಸಮೀಪವಾಗ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದು ನಗರದಾದ್ಯಂತ ಬ್ಯಾರಿಕೇಡ್ ಹಾಕಿ ವಾಹನಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೈಕ್, ಕಾರು, ಆಟೋ, ಲಾರಿ ಸೇರಿದಂತೆ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ನಗರದಿಂದ ಹೊರ ಹೋಗುವ, ಒಳ ಬರುವ ಪ್ರಮುಖ ರಸ್ತೆಗಳಲ್ಲಿ, ಜಂಕ್ಷನ್, ಸರ್ಕಲ್ ಗಳಲ್ಲಿ ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಲಾಗಿದೆ.

ಚುನಾವಣೆ ಹಿನ್ನೆಲೆ ಅಕ್ರಮವಾಗಿ ಹಣ, ಮದ್ಯ, ಗಿಫ್ಟ್ ಗಳು, ಸೇರಿದಂತೆ ಅನುಮಾನಾಸ್ಪದ ವಸ್ತುಗಳ ಬಗ್ಗೆ ನಿಗಾ ಇಡಲಾಗುತ್ತಿದೆ. ಎರಡು ಲಕ್ಷಕ್ಕೂ ಅಧಿಕ ನಗದು ಸಾಗಾಟ ಮಾಡುವಂತಿಲ್ಲ. ಎರಡು ಲೀಟರ್ ಗೂ‌ ಹೆಚ್ಚು ಮದ್ಯ ಸಾಗಾಟ ಮಾಡುವಂತಿಲ್ಲ. ಒಂದು ವೇಳೆ ದೊಡ್ಡ ಮೊತ್ತದ ಹಣ, ವಸ್ತುಗಳು ಸಾಗಾಟ ಮಾಡಿದ್ರೆ ಸೂಕ್ತ ದಾಖಲೆ ನೀಡಬೇಕು. ಸದ್ಯ ನಗರದೆಲ್ಲೆಡೆ  ಪೊಲೀಸರ ತಪಾಸಣೆ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:49 pm, Sun, 26 March 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us