Sign In

By signing in or creating an account, you agree with Associated Broadcasting Company's Terms & Conditions and Privacy Policy.

S Suresh Kumar: 3 ಕೋಟಿ ಬಾಕಿ ಹಣ ಪಾವತಿಸಿದ ಗೃಹ ಮಂಡಳಿ, ಬಂಡೇಮಠ ಕೆಎಚ್​​ಬಿ ಬಡಾವಣೆ ಬಿಬಿಎಂಪಿಗೆ ಹಸ್ತಾಂತರ

ಇದರೊಂದಿಗೆ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡಿರುವ 480ಕ್ಕೂ ಹೆಚ್ಚು ನಿವಾಸಿಗಳು ಬಿಬಿಎಂಪಿ ತಮ್ಮ ಬಡಾವಣೆಯನ್ನು ಅಭಿವೃದ್ಧಿಪಡಿಸುತ್ತದೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.

S Suresh Kumar: 3 ಕೋಟಿ ಬಾಕಿ ಹಣ ಪಾವತಿಸಿದ ಗೃಹ ಮಂಡಳಿ, ಬಂಡೇಮಠ ಕೆಎಚ್​​ಬಿ ಬಡಾವಣೆ ಬಿಬಿಎಂಪಿಗೆ ಹಸ್ತಾಂತರ
ಬಂಡೇಮಠ ಕೆಎಚ್​​ಬಿ ಬಡಾವಣೆ ಬಿಬಿಎಂಪಿಗೆ ಹಸ್ತಾಂತರ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 31, 2022 | 1:29 PM

ಬೆಂಗಳೂರು: ಮೂಲಸೌಕರ್ಯ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿದ್ದ ಕೆಂಗೇರಿ ಬಂಡೇಮಠ (Bandemutt) ಕೆ.ಎಚ್.ಬಿ. ಬಡಾವಣೆಯನ್ನು (KHB extension) ಬಿಬಿಎಂಪಿಗೆ (BBMP) ಹಸ್ತಾಂತರ ಮಾಡಬೇಕು ಎಂಬ ಸ್ಥಳೀಯರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ವಿಧಾನಸಭೆಯ ಅರ್ಜಿಗಳ ಸಮಿತಿಯಲ್ಲಿ ತೀರ್ಮಾನವಾಗಿದ್ದಂತೆ, ಬಂಡೇಮಠ ಕೆ.ಎಚ್.ಬಿ. ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ಕರ್ನಾಟಕ ಗೃಹ ಮಂಡಳಿಯು ಬಿಬಿಎಂಪಿಗೆ 5 ಕೋಟಿ ರೂಪಾಯಿ ಪಾವತಿಸುವ ಮೂಲಕ ಈ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ.

ಈ ಬಡಾವಣೆಯ ಅಭಿವೃದ್ಧಿಯ ಜವಾಬ್ದಾರಿಯನ್ನು ಡಿಸೆಂಬರ್ 30ರಿಂದ ಅನ್ವಯವಾಗುವಂತೆ ಬಿಬಿಎಂಪಿಗೆ ವಹಿಸಲಾಗಿದೆ. ಕರ್ನಾಟಕ ಗೃಹ ಮಂಡಳಿಯ ಕಾಯ್ದೆ 29ರನ್ವಯ ಪೂರ್ಣಗೊಳಿಸಿದ ವಸತಿ ಬಡಾವಣೆಗಳನ್ನು ಮುಂದಿನ ನಿರ್ವಹಣೆಗಾಗಿ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕು ಎಂಬ ನಿಯಮ ಇದೆ.

2016ರಿಂದ ಕೆ.ಎಚ್.ಬಿ. ಬಂಡೇಮಠ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಪ್ರಯತ್ನ ಮಾಡಿತ್ತಾದರೂ, ಅಭಿವೃದ್ಧಿ ವಿಚಾರದಲ್ಲಿ ಎರಡೂ ಸಂಸ್ಥೆಗಳ ಹಗ್ಗ ಜಗ್ಗಾಟದಿಂದ ನೆನೆಗುದಿಗೆ ಬಿದ್ದಿತ್ತು. ಇದರ ಪರಿಣಾಮವಾಗಿ, ನಾಗರಿಕರು ಮೂಲಸೌಕರ್ಯ ವಂಚಿತರಾಗಿ ಸಂಕಷ್ಟ ಪಡುವಂತಾಗಿತ್ತು.

ತಮ್ಮ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಬೇಕು ಮತ್ತು ಮೂಲಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಬಡಾವಣೆಯ ನಾಗರಿಕರು ಪ್ರತಿಭಟನೆಯನ್ನೂ ನಡೆಸಿದ್ದರು. ಮುಖ್ಯಮಂತ್ರಿಗಳಿಗೆ, ವಸತಿ ಸಚಿವರಿಗೆ, ಯಶವಂತಪುರ ಶಾಸಕರಿಗೆ ಹಲವು ಮನವಿಗಳನ್ನೂ ಸಲ್ಲಿಸಿದ್ದರು. ಆದರೂ ಮೂಲಸೌಕರ್ಯ ದೊರೆಯದ ಹಿನ್ನೆಲೆಯಲ್ಲಿ, ದಾರಿ ಕಾಣದೆ ಬಡಾವಣೆಯ ನಿವಾಸಿಗಳು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ಮಧ್ಯೆ ಕಳೆದ ಜುಲೈ 29ರಂದು ವಸತಿ ಸಚಿವ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಕೆ.ಎಚ್.ಬಿ. 2 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಪಾವತಿಸಬೇಕು ಮತ್ತು ಒಂದು ಸಿಎ ನಿವೇಶನ ನೀಡಬೇಕು ಹಾಗೂ ಬಿಬಿಎಂಪಿ ಬಡಾವಣೆಯ ಅಭಿವೃದ್ಧಿ ಪಡಿಸಬೇಕು ಎಂದು ನಿರ್ಣಯಿಸಲಾಗಿತ್ತು.

ಅದರಂತೆ ಕೆ.ಎಚ್.ಬಿ. ಸೆಪ್ಟೆಂಬರ್ 13ರಂದು 2 ಕೋಟಿ ರೂ. ಆರ್.ಟಿ.ಜಿ.ಎಸ್. ಸಹ ಮಾಡಿತ್ತು ಆದರೆ, ಬಿಬಿಎಂಪಿ ಈ ಬಡಾವಣೆಯಲ್ಲಿ ಒಂದೇ ಒಂದು ಉದ್ಯಾನವನವೂ ಅಭಿವೃದ್ಧಿಯಾಗಿಲ್ಲ. ದಕ್ಷಿಣ ಬ್ಲಾಕ್ ನಲ್ಲಿ 2017ರಲ್ಲಿ ನೀರು ಮತ್ತು ಒಳಚರಂಡಿ ಕೊಳವೆ ಅಳವಡಿಸಲು ಅಗೆದ ಬಳಿಕ ಮರು ರಸ್ತೆ ಅಭಿವೃದ್ಧಿ ಮಾಡದ ಕಾರಣ ಹಾಗೂ ರಸ್ತೆಗಳು ಕಳಪೆ ಗುಣಮಟ್ಟದಿಂದ ಕಿತ್ತು ಹೋಗಿರುವ ಹಿನ್ನೆಲೆಯಲ್ಲಿ 10 ಕೋಟಿ ರೂ. ಕೊಡಬೇಕು ಎಂದು ಪಟ್ಟು ಹಿಡಿದಿತ್ತು.

ಬಿಬಿಎಂಪಿ-ಕೆಎಚ್.ಬಿ. ನಡುವಿನ ಸಂಘರ್ಷದಿಂದಾಗಿ ಬಡಾವಣೆ ಹಸ್ತಾಂತರ ಆಗದೆ ನಾಗರಿಕರು ತ್ರಿಶಂಕು ಸ್ಥಿತಿಯಲ್ಲಿದ್ದು. ಅಂತಿಮವಾಗಿ ಬಂಡೇಮಠ ಕೆ.ಎಚ್.ಬಿ. ಬಡಾವಣೆ ನಾಗರಿಕರು ಸಂಘಟಿತರಾಗಿ ವಿಧಾನಸಭೆಗಳ ಅರ್ಜಿಗಳ ಸಮಿತಿ ಮೊರೆ ಹೋದರು. ಶಾಸಕ ಎಸ್. ಸುರೇಶ್ ಕುಮಾರ್ ಅಧ್ಯಕ್ಷತೆಯ ಅರ್ಜಿಗಳ ಸಮಿತಿ ಬಿಬಿಎಂಪಿ ಮತ್ತು ಕೆ,ಎಚ್.ಬಿ.ನಡುವಿನ ತಿಕ್ಕಾಟ ಪರಿಹರಿಸುವ ಹೊಣೆಯನ್ನು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ವಹಿಸಿತು.

ಅದರಂತೆ ರಾಕೇಶ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 28ರಂದು ನಡೆದ ಸಭೆಯಲ್ಲಿ ಬಂಡೇಮಠ ಕೆ.ಎಚ್.ಬಿ. ಬಡಾವಣೆ ಅಭಿವೃದ್ಧಿಗೆ 10 ಕೋಟಿ ರೂ. ಅಗತ್ಯವಿದ್ದು, ಇದರಲ್ಲಿ ಅರ್ಧ ಹಣವನ್ನು ಅಂದರೆ 5 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಕೆ.ಎಚ್.ಬಿ ಪಾವತಿಸಬೇಕು ಮತ್ತು ಉಳಿದ 5 ಕೋಟಿಯನ್ನು ಬಿಬಿಎಂಪಿಯೇ ಭರಿಸಬೇಕೆಂದು ತೀರ್ಮಾನಿಸಿ, ಕೆ.ಎಚ್.ಬಿ. 2 ಕೋಟಿ ರೂ. ಪಾವತಿಸಿದ್ದು, 3 ಕೋಟಿ ಬಾಕಿ ಕಟ್ಟಿದ ದಿನದಿಂದಲೇ ಬಡಾವಣೆಯನ್ನು ಬಿಬಿಎಂಪಿ ಹಸ್ತಾಂತರಿಸಿಕೊಂಡು ಅಭಿವೃದ್ಧಿ ಪಡಿಸಬೇಕು ಎಂದು ನಿರ್ಣಯಿಸಲಾಗಿತ್ತು. ಅದರಂತೆ ಕೆ.ಎಚ್.ಬಿ. ಉಳಿದ 3 ಕೋಟಿ ರೂಪಾಯಿಗಳನ್ನು ಡಿ.30ರಂದು ಪಾವತಿಸಿದ್ದು ಅಧಿಕೃತವಾಗಿ ಬಡಾವಣೆ ಬಿಬಿಎಂಪಿಗೆ ಹಸ್ತಾಂತರವಾಗಿದೆ.

ಇದರೊಂದಿಗೆ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡಿರುವ 480ಕ್ಕೂ ಹೆಚ್ಚು ನಿವಾಸಿಗಳು ಬಿಬಿಎಂಪಿ ತಮ್ಮ ಬಡಾವಣೆಯನ್ನು ಅಭಿವೃದ್ಧಿಪಡಿಸುತ್ತದೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯ ಅರ್ಜಿಗಳ ಸಮಿತಿಯ ಅಧ್ಯಕ್ಷರಾದ ಎಸ್. ಸುರೇಶ್ ಕುಮಾರ್ ಮತ್ತು ಸಮಿತಿಯ ಎಲ್ಲ ಸದಸ್ಯ ಶಾಸಕರಿಗೆ ಹಾಗೂ ಇದಕ್ಕಾಗಿ ಹೋರಾಟ ನಡೆಸಿದ ಬಂಡೇಮಠ ಕೆ.ಎಚ್.ಬಿ. ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ