KPSC Scam: ಫಿಲ್ಮಿ ಸ್ಟೈಲ್‌ನಲ್ಲಿ ನಡೀತಿತ್ತು ಪ್ರಶ್ನೆ ಪತ್ರಿಕೆ ಲೀಕ್; OMR ಶೀಟ್ ತಿದ್ದುತ್ತಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ!

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕೈಯಿಂದ ಪ್ರಶ್ನೆ ಬರೆದು ಲೀಕ್ ಮಾಡಿ, OMR ಶೀಟ್ ತಿದ್ದುತ್ತಿದ್ದ ಸ್ಫೋಟಕ ಮಾಹಿತಿ ಬಯಲಾಗಿದೆ. ಪ್ರಮುಖ ಆರೋಪಿ ಕನ್ನಾಳೆ ಮನೆಯಲ್ಲಿ ಬಿ ಗ್ರೂಪ್ ಪರೀಕ್ಷೆಯ ಹಾಲ್ ಟಿಕೆಟ್‌ಗಳು ಜಪ್ತಿಯಾಗಿದ್ದು, ಸಚಿವ ಈಶ್ವರ ಖಂಡ್ರೆ-ಕನ್ನಾಳೆ ಫೋಟೋ ಹಂಚಿಕೊಂಡು ರಾಜ್ಯ ಸರ್ಕಾರವನ್ನು ಜೆಡಿಎಸ್ ತೀವ್ರವಾಗಿ ಪ್ರಶ್ನಿಸಿದೆ.

KPSC Scam: ಫಿಲ್ಮಿ ಸ್ಟೈಲ್‌ನಲ್ಲಿ ನಡೀತಿತ್ತು ಪ್ರಶ್ನೆ ಪತ್ರಿಕೆ ಲೀಕ್; OMR ಶೀಟ್ ತಿದ್ದುತ್ತಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ!
OMR ಶೀಟ್ ತಿದ್ದುತ್ತಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ!

Updated on: Sep 02, 2026 | 10:18 AM

ಮುಖ್ಯಾಂಶಗಳು

  • ಕೆಪಿಎಸ್‌ಸಿ ಅಕ್ರಮದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಸ್ವತಃ OMR ಶೀಟ್ ತಿದ್ದಿದ್ದ.
  • ಬಸವರಾಜ್ ಕನ್ನಾಳೆ ಮನೆಯಲ್ಲಿ2025 ಬಿ ಗ್ರೂಪ್ ಹಾಲ್ ಟಿಕೆಟ್‌ಗಳು ಪತ್ತೆ.
  • ಸಚಿವ ಈಶ್ವರ ಖಂಡ್ರೆ-ಕನ್ನಾಳೆ ಫೋಟೋ ಹಂಚಿಕೊಂಡು ಪ್ರಶ್ನಿಸಿದ ಜೆಡಿಎಸ್

ಬೆಂಗಳೂರು, ಸೆಪ್ಟೆಂಬರ್ 02: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ. 400 ಹುದ್ದೆಗಳ ಭಾರಿ ಅಕ್ರಮದ ಇಡೀ ಜಾಲ ಪರೀಕ್ಷಾ ನಿಯಂತ್ರಕ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಕಂಟ್ರೋಲ್‌ನಲ್ಲಿ ಫಿಲ್ಮಿ ಸ್ಟೈಲ್‌ನಲ್ಲಿ ನಡೆದಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.

ಮೂರು ಹಂತಗಳಲ್ಲಿ ನಡೀತಿತ್ತು ಅಕ್ರಮ ಕಾರ್ಯಾಚರಣೆ

    • ಮೊದಲ ಹಂತ (ಪ್ರಶ್ನೆ ಪತ್ರಿಕೆ ಲೀಕ್): ಪರೀಕ್ಷೆಗೂ ಮುನ್ನ ಸಿದ್ಧವಾಗುತ್ತಿದ್ದ 5 ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿ ಅಂತಿಮಗೊಳ್ಳುತ್ತಿದ್ದ ಪ್ರಶ್ನೆಗಳನ್ನು ಜ್ಞಾನೇಂದ್ರ ಕುಮಾರ್ ತನ್ನ ಕೈಯಿಂದ ಬರೆದುಕೊಳ್ಳುತ್ತಿದ್ದ. ಪರೀಕ್ಷೆಗೆ ಇನ್ನೆರಡು ದಿನ ಇರುವಾಗ ಈ ಪ್ರಶ್ನೆಗಳನ್ನು ಬಸವರಾಜ್‌ಗೆ ತಲುಪಿಸಲಾಗುತ್ತಿತ್ತು. ಬಸವರಾಜ್ ರಾಜಾಜಿನಗರ ಕಚೇರಿಯಲ್ಲಿ ಡೀಲ್ ಮಾಡಿದ ಅಭ್ಯರ್ಥಿಗಳನ್ನು ಬೆಂಗಳೂರು, ತುಮಕೂರು ಹಾಗೂ ಆಂಧ್ರಪ್ರದೇಶದ ರೆಸಾರ್ಟ್‌ಗಳಲ್ಲಿರಿಸಿ ಉತ್ತರಗಳನ್ನು ತಯಾರು ಮಾಡಿಸಿ, ಬಳಿಕ ಖಾಸಗಿ ಬಸ್‌ಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತರುತ್ತಿದ್ದ.
    • ಎರಡನೇ ಹಂತ (OMR ಶೀಟ್ ತಿದ್ದುಪಡಿ): ಪರೀಕ್ಷೆ ಸರಿಯಾಗಿ ಬರೆಯದ ಅಭ್ಯರ್ಥಿಗಳ OMR ಶೀಟ್‌ಗಳನ್ನು ಜ್ಞಾನೇಂದ್ರ ಕುಮಾರ್ ಸ್ವತಃ ತಿದ್ದಿ, ಅವರಿಗೆ ಮೆರಿಟ್ ಬರುವಂತೆ ಅಂಕ ಹೆಚ್ಚಿಸುತ್ತಿದ್ದ.
    • ಕೊನೆಯ ಹಂತ (ಸಂದರ್ಶನ ಮತ್ತು ನೇಮಕಾತಿ): 1:3 ಅನುಪಾತದಲ್ಲಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಮುಂದೆ ಹಾಜರಾಗುತ್ತಿದ್ದ ಅಭ್ಯರ್ಥಿಗಳ ಲಿಖಿತ ಹಾಗೂ ಸಂದರ್ಶನದ ಅಂಕಗಳನ್ನು ಮ್ಯಾಚ್ ಮಾಡಿ ನೇಮಕಾತಿ ಆದೇಶ ಕೊಡಿಸಲಾಗುತ್ತಿತ್ತು.

YouTube video player

ಕನ್ನಾಳೆ ಮನೆಯಲ್ಲಿ ಮತ್ತಷ್ಟು ಹಾಲ್ ಟಿಕೆಟ್ ಜಪ್ತಿ!

ಸಿಐಡಿ (CID) ಅಧಿಕಾರಿಗಳಿಗೆ ಪ್ರಮುಖ ಆರೋಪಿ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಮನೆಯಲ್ಲಿ ಮತ್ತಷ್ಟು ಸ್ಫೋಟಕ ಸಾಕ್ಷ್ಯಾಧಾರಗಳು ಲಭ್ಯವಾಗಿವೆ.ನಸಿಐಡಿ ಅಧಿಕಾರಿಗಳು ಬಸವರಾಜ್ ಕನ್ನಾಳೆ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದ ವೇಳೆ, ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿದ್ದ 6 ಅಭ್ಯರ್ಥಿಗಳ ಪ್ರವೇಶಪತ್ರಗಳು (Hall Tickets) ಜಪ್ತಿಯಾಗಿವೆ. ಈ ಪ್ರವೇಶಪತ್ರಗಳು 2025ರಲ್ಲಿ ನಡೆದ ಬಿ ಗ್ರೂಪ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ್ದಾಗಿವೆ ಎಂದು ತಿಳಿದುಬಂದಿದೆ.

ಪಶುವೈದ್ಯಾಧಿಕಾರಿ ಪರೀಕ್ಷೆ ಮಾತ್ರವಲ್ಲದೆ, ಬಿ ಗ್ರೂಪ್ ಹುದ್ದೆಗಳ ನೇಮಕಾತಿಯಲ್ಲೂ ಕನ್ನಾಳೆ ಅಕ್ರಮ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಜಪ್ತಿಯಾದ ಹಾಲ್ ಟಿಕೆಟ್‌ಗಳಲ್ಲಿದ್ದ 6 ಅಭ್ಯರ್ಥಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ಬುಲಾವ್ ನೀಡಿದ್ದಾರೆ. ಈ ಮೂಲಕ KPSC ನೇಮಕಾತಿ ಅಕ್ರಮದ ಜಾಲ ಮತ್ತಷ್ಟು ವಿಸ್ತರಿಸುವ ಲಕ್ಷಣಗಳು ಕಂಡುಬರುತ್ತಿವೆ.

ಸಚಿವ ಖಂಡ್ರೆ ಫೋಟೋ ವೈರಲ್!

ಇದೇ ವೇಳೆ ಜೆಡಿಎಸ್ ಪಕ್ಷವು ಬಸವರಾಜ್ ಕನ್ನಾಳೆಗೆ ಸಚಿವ ಈಶ್ವರ ಖಂಡ್ರೆ ಸಿಹಿ ತಿನ್ನಿಸುವ ಫೋಟೋವನ್ನು ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದೆ. “ಕಿಂಗ್‌ಪಿನ್‌ಗಳಿಗೆ ಸಿಹಿ ಊಟ ನೀಡುತ್ತಿರುವ ಸಚಿವರು ಹಾಗೂ ಸರ್ಕಾರದ ಪರ್ಸೆಂಟೇಜ್ ಪಾತ್ರವೇನು?” ಎಂದು ಪ್ರಶ್ನಿಸಿರುವ ಜೆಡಿಎಸ್, ನಿರುದ್ಯೋಗಿ ಯುವಜನತೆಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ವರದಿ: ಕಿರಣ್ ಹೆಚ್.ವಿ ಮತ್ತು ಪ್ರಜ್ವಲ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:23 am, Wed, 2 September 26

Loading...
Unable to load recommendations.
Follow Us