ಮತ್ತೆ ಆಪರೇಷನ್ ಗೌನ್ ತೊಟ್ಟ ಕಾಂಗ್ರೆಸ್ ಶಾಸಕ ಡಾ. ಎಚ್​ಡಿ ರಂಗನಾಥ್; ಕೈ ಶಸ್ತ್ರಚಿಕಿತ್ಸೆ ನೆರವೇರಿಸಿ ರೋಗಿಗೆ ನೆರವು

ಡಾ. ಎಚ್​ಡಿ ರಂಗನಾಥ್ ಅವರು ಈ ರೀತಿ ಶಸ್ತ್ರಚಿಕಿತ್ಸೆ ನೆರವೇರಿಸುತ್ತಿರುವುದು ಇದೇ ಮೊದಲಲ್ಲ. ಮೂಳೆ ಶಸ್ತ್ರಚಿಕಿತ್ಸಕರಾಗಿರುವ ರಂಗನಾಥ್ ಈಗಾಗಲೇ ಎರಡು ಬಾರಿ ಸರ್ಜಿಕಲ್ ಗೌನ್ ಧರಿಸಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಇದು ಅವರು ನಡೆಸಿದ ಮೂರನೇ ಶಸ್ತ್ರಚಿಕಿತ್ಸೆಯಾಗಿದೆ.

ಮತ್ತೆ ಆಪರೇಷನ್ ಗೌನ್ ತೊಟ್ಟ ಕಾಂಗ್ರೆಸ್ ಶಾಸಕ ಡಾ. ಎಚ್​ಡಿ ರಂಗನಾಥ್; ಕೈ ಶಸ್ತ್ರಚಿಕಿತ್ಸೆ ನೆರವೇರಿಸಿ ರೋಗಿಗೆ ನೆರವು
ಕಾಂಗ್ರೆಸ್ ಶಾಸಕ ಡಾ.ಎಚ್.ಡಿ.ರಂಗನಾಥ್ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು.
Edited By:

Updated on: Oct 16, 2023 | 5:26 PM

ಬೆಂಗಳೂರು, ಅಕ್ಟೋಬರ್ 16: ಕುಣಿಗಲ್ ವಿಧಾನಸಭಾ ಕ್ಷೇತ್ರದ (Kunigal Assembly Constituency) ಕಾಂಗ್ರೆಸ್ ಶಾಸಕ ಡಾ. ಎಚ್​ಡಿ ರಂಗನಾಥ್ (Dr HD Ranganath) ಅವರು ಸೋಮವಾರ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಕೈ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕುಣಿಗಲ್ ನಗರದ ನಿವಾಸಿ ಗಂಗಾ ಹನುಮಯ್ಯ ಅವರು ತಮ್ಮ ಎಡಗೈಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಸಹಾಯ ಕೋರಿ ಡಾ. ರಂಗನಾಥ್ ಅವರನ್ನು ಸಂಪರ್ಕಿಸಿದ್ದರು. ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಹನುಮಯ್ಯ ಅವರಿಗೆ ರಂಗನಾಥ್ ಭರವಸೆ ನೀಡಿದ್ದರು. ಅದರಂತೆಯೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿ ನೆರವಾಗಿದ್ದಾರೆ.

ಡಾ. ಎಚ್​ಡಿ ರಂಗನಾಥ್ ಅವರು ಈ ರೀತಿ ಶಸ್ತ್ರಚಿಕಿತ್ಸೆ ನೆರವೇರಿಸುತ್ತಿರುವುದು ಇದೇ ಮೊದಲಲ್ಲ. ಮೂಳೆ ಶಸ್ತ್ರಚಿಕಿತ್ಸಕರಾಗಿರುವ ರಂಗನಾಥ್ ಈಗಾಗಲೇ ಎರಡು ಬಾರಿ ಸರ್ಜಿಕಲ್ ಗೌನ್ ಧರಿಸಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಇದು ಅವರು ನಡೆಸಿದ ಮೂರನೇ ಶಸ್ತ್ರಚಿಕಿತ್ಸೆಯಾಗಿದೆ. ಶಾಸಕರಾಗುವ ಮುನ್ನ ಅವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಜೂನ್‌ನಲ್ಲಿ, ಕುಣಿಗಲ್‌ನ 42 ವರ್ಷದ ಮಹಿಳೆಯೊಬ್ಬರಿಗೆ ಸೊಂಟದ ಶಸ್ತ್ರಚಿಕಿತ್ಸೆಗೆ ರಣಗನಾಥ್ ಸಹಾಯ ಮಾಡಿದ್ದರು. ಜುಲೈನಲ್ಲಿ, ಅವರು ತಮ್ಮ ಕ್ಷೇತ್ರದ ರೈತರೊಬ್ಬರಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿದ್ದರು.

ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವೇನು? ಮುನಿಸು ತಣಿಸಿದ್ರಾ ಕೆಸಿ ವೇಣುಗೋಪಾಲ್?

ಕುಣಿಗಲ್​​ನ ಕುಂದೂರು ಗ್ರಾಮದ ಆಶಾ ಎಂಬ ಮಹಿಳೆಗೆ ಸೊಂಟದ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಶಸ್ತ್ರಚಿಕಿತ್ಸೆಗೆ ಸುಮಾರು ನಾಲ್ಕರಿಂದ ಐದು ಲಕ್ಷ ರೂಪಾಯಿ ಬೇಕಾಗಿದ್ದು ಮಹಿಳೆಯರು ನೆರವಿಗಾಗಿ ಶಾಸಕರ ಬಳಿ ಮನವಿ ಮಾಡಿದ್ದರು. ಯಶಸ್ವಿನಿ ಯೋಜನೆ ಅಡಿ ಒಂದು ಬಾರಿ ಆಪರೇಷನ್ ಮಾಡಿಸಿಕೊಂಡಿದ್ದರಿಂದ ಮತ್ತೊಮ್ಮೆ ಅದರ ಪ್ರಯೋಜನ ಪಡೆಯುವುದು ಸಾಧ್ಯವಿರಲಿಲ್ಲ. ಹೀಗಾಗಿ ಅವರು ಶಾಸಕರ ಬಳಿ ಮನವಿ ಮಾಡಿದ್ದರು. ಮಹಿಳೆಯ ಮನವಿಗೆ ಸ್ಪಂದಿಸಿದ ಶಾಸಕರು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ