ಆನೇಕಲ್: ಮಗಳು-ಅಳಿಯನ ಕುತಂತ್ರ, ನಿಧಿಯ ಆಸೆಗೆ ಹಣ, ಜಮೀನು ಕಳೆದುಕೊಂಡ ತಂದೆ

ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಅನ್ನೋ ಗಾದೆ ಮಾತಿದೆ. ಅದರಲ್ಲೂ ಹಣದ ವ್ಯಾಮೋಹಕ್ಕೆ ಬಿದ್ದರೆ ಅಲ್ಲಿ ಸಂಬಂಧಗಳಿಗೆ ಬೆಲೆನೇ ಇರುವುದಿಲ್ಲ. ಅದೇ ರೀತಿ ಇಲ್ಲೊಂದು ವೃದ್ಧ ದಂಪತಿ ಹಾಗೂ ಪುತ್ರನಿಗೆ ನಿಧಿಯ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿ ಪಂಗನಾಮ ಹಾಕಿದ್ದಾರೆ. ಸ್ವಂತ ಮಗಳು ಅಳಿಯನೇ ಈ ವಂಚನೆ ಎಸಗಿದ್ದಾರೆ.

ಆನೇಕಲ್: ಮಗಳು-ಅಳಿಯನ ಕುತಂತ್ರ, ನಿಧಿಯ ಆಸೆಗೆ ಹಣ, ಜಮೀನು ಕಳೆದುಕೊಂಡ ತಂದೆ
ವಂಚನೆಗೊಳಗಾದ ತಿಮ್ಮರಾಯಪ್ಪ ಮತ್ತು ಕುತಂತ್ರ ನಡೆಸಿದ ಮಗಳು ಮತ್ತು ಅಳಿಯ
Edited By: Rakesh Nayak Manchi

Updated on: Sep 05, 2023 | 8:40 PM

ಆನೇಕಲ್, ಸೆ.5: ಹೆಣ್ಣು ಹೊನ್ನು ಮಣ್ಣಿಗಾಗಿ ಜನರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಜನ ಏನೆಲ್ಲಾ ಬಣ್ಣದ ಕಥೆಗಳನ್ನ ಕಟ್ಟಿ ಅಮಾಯಕರಿಗೆ ವಂಚನೆ ಮಾಡುತ್ತಾರೆ ಅನ್ನೋದಕ್ಕೆ ಬೆಂಗಳೂರು (Bengaluru) ಹೊರವಲಯ ಆನೇಕಲ್ ತಾಲೂಕಿನ ಬಂಡಾಪುರ ಗ್ರಾಮದಲ್ಲಿ ನಡೆದ ಘಟನೆಯೇ ಸಾಕ್ಷಿ. ತಿಮ್ಮರಾಯಪ್ಪ ದಂಪತಿ ಹಾಗೂ ಪುತ್ರ ಪ್ರದೀಪ್ ಕುಮಾರ್ ಎಂಬವರಿಗೆ ನಿಧಿಯ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ. ಅಷ್ಟಕ್ಕೂ ಈ ವಂಚನೆ ಎಸಗಿದ್ದು ತಿಮ್ಮರಾಯಪ್ಪ ಅವರ ಮಗಳು ಮತ್ತು ಅಳಿಯ.

ತಿಮ್ಮರಾಯಪ್ಪಗೆ ಸೇರಿದ ಜಮೀನು ಹಾಗೂ ಹಣವನ್ನ ಲಪಟಾಯಿಸಲು ಹೊಂಚು ಹಾಕಿದ ಪುತ್ರಿ ಮಂಜುಳ ಹಾಗೂ ಅಳಿಯ ಮಂಜುನಾಥ್, ತಮಿಳುನಾಡು ಮೂಲದ ಕಳ್ಳ ಜ್ಯೋತಿಷಿ ನವೀನ್ ಎಂಬಾತನನ್ನು ಮನೆಗೆ ಕರೆತಂದಿದ್ದಾರೆ. ನಿಮ್ಮ ಮನೆಯಲ್ಲಿ ನಿಧಿ ಇದೇ ಇದಕ್ಕಾಗಿ ನೀವು ಹೋಮಹವನ ಮಾಡಿಸಿ ಕುರಿ ಬಲಿಕೊಟ್ಟರೆ ನಿಧಿ ಸಿಗುತ್ತದೆ ಅಂತ ನಂಬಿಸಿದ್ದಾರೆ.

ನಿಧಿ ತೆಗಿಬೇಕಾದರೆ ಪೂಜೆ ಮಾಡಬೇಕು. ಅದಕ್ಕೆಲ್ಲ ದುಡ್ಡು ಆಗುತ್ತೆ ಅಂತ ನವೀನ್ ಕಥೆ ಕಟ್ಟಿದ್ದ. ಅದರಂತೆ ತಿಮ್ಮರಾಯಪ್ಪ ದುಡ್ಡಿಗೆ ಏನು ಮಾಡುವುದು ಅಂತ ಯೋಚನೆ ಮಾಡುತ್ತಿರಬೇಕಾದರೆ ಮಗಳು ಅಳಿಯ ಗೊತ್ತಿರುವವರೊಬ್ಬರಿದ್ದಾರೆ ಅವರ ಬಳಿ ಹೋಗೋಣ ಎಂದು ಹೇಳಿ ಜಮೀನನ್ನು ಅಡವಿಟ್ಟು ಹದಿನೇಳು ಲಕ್ಷ ತಂದು ಹೋಮಹವನಕ್ಕೆಂದು ನೀಡಿದ್ದರು. ಬಳಿಕ ಪೂರ್ತಿ ಜಮೀನನ್ನು ಲಪಟಾಯಿಸುವ ಪ್ಲಾನ್ ಮಾಡಿದ ಅಳಿಯ ಮಂಜುನಾಥ್ ಮತ್ತು ಮಗಳು ಮಂಜುಳಾ ತಂದೆ ತಿಮ್ಮರಾಯಪ್ಪ ಹಾಗೂ ಸಹೋದರ ಪ್ರದೀಪ್ ಕುಮಾರ್ ಕೈನಲ್ಲಿ ಸಹಿ ಮಾಡಿಸಿಕೊಂಡು ಜಮೀನನ್ನು ಖಾಸಗಿ ವ್ಯಕ್ಯಿಗೆ ಆಗ್ರಿಮೆಂಟ್ ಮಾಡಿಕೊಟ್ಟು ಯಾರಿಗೂ ಗೊತ್ತಿಲ್ಲದಂತೆ 33 ಲಕ್ಷ ಹಣ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ವಿದೇಶಿ ಪ್ರಜೆಗಳಿಗೆ ಆಟೋ ಚಾಲಕನಿಂದ ಮಹಾ ಮೋಸ; ವಿಡಿಯೋ ಇಲ್ಲಿದೆ

ನಿಧಿ ಆಸೆಯಿಂದ ಮಗಳು ಹಾಗೂ ಅಳಿಯನನ್ನ ನಂಬಿ ಜ್ಯೋತಿಷಿಗೆ ಲಕ್ಷ ಲಕ್ಷ ಹಣವನ್ನ ನೀಡಿದ್ದಾರೆ. ಕಳ್ಳ ಜ್ಯೋತಿಷಿ ನವೀನ ನಿಧಿ ತೆಗೆಯುವುದಕ್ಕೆ ಎಂಟು ಅಡಿ ಗುಂಡಿಯನ್ನು ತೆಗೆಸಿದ್ದನಂತೆ. ರಾತ್ರಿ ಎಲ್ಲಾ ಪೂಜೆ ಮಾಡಿದ್ದು ಈ ವಿಚಾರವನ್ನು ಯಾರಿಗೂ ಹೇಳದಂತೆಯೂ ಸೂಚಿಸಿದ್ದಾನೆ. ಪೂಜೆ, ಹೋಮ ಮಾಡಲು ತಮಿಳುನಾಡಿನಿಂದಲೇ ಕಳ್ಳ ಸ್ವಾಮೀಜಿ ನವೀನ ಇಪ್ಪತ್ತಕ್ಕೂ ಅಧಿಕ ಮಂದಿಯನ್ನ ಕರೆತಂದಿದ್ದ.

ಬೆಳಗಾಗುವವರೆಗೆ ಗುಂಡಿ ಅಗೆದು ಬಳಿಕ ನಿಧಿ ಬೇರೆಡೆಗೆ ಜರುಗಿ ಹೋಗಿದೆ ಅದಕ್ಕೆ ಮತ್ತೊಂದು ಪೂಜೆ ಮಾಡಬೇಕು ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ವಿಷಯ ಯಾರಿಗಾದರು ಹೇಳಿದರೆ ಮಾಟಮಂತ್ರ ಮಾಡೋದಾಗಿ ಹೆದರಿಸಿ ಅಸಾಮಿಗಳು ಎಸ್ಕೇಪ್ ಆಗಿದ್ದು, ಭಯಗೊಂಡ ವೃದ್ಧ ದಂಪತಿ ಹಾಗೂ ಪುತ್ರ ಇದ್ದ ಮನೆಯನ್ನ ಬಿಟ್ಟು ಬೇರೆಡೆ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಒಟ್ಟಿನಲ್ಲಿ ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದ ತಿಮ್ಮರಾಯಪ್ಪಗೆ ಮಗಳು ಹಾಗೂ ಅಳಿಯ ನಿಧಿ ಆಸೆ ತೋರಿಸಿ ಇದ್ದ ಜಮೀನನ್ನ ಮಾರಾಟ ಮಾಡಿಸಿ ವಂಚಿಸಿದ್ದು, ಈಗ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿರುವ ವೃದ್ಧ ದಂಪತಿ ಹಾಗೂ ಪುತ್ರ ಅತ್ತ ಇರಲು ಮನೆಯು ಇಲ್ಲದೆ ಇತ್ತ ಜಮೀನು ಇಲ್ಲದೆ ಬೀದಿಗೆ ಬಿದ್ದಿದ್ದಾರೆ.

ವಂಚನೆಗೊಳಗಾದ ತಿಮ್ಮರಾಯಪ್ಪ ಅತ್ತಿಬೆಲೆ ಮತ್ತು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ ದೂರನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇನ್ನಾದರೂ ಪೋಲೀಸರು ಪ್ರಕರಣ ದಾಖಲಿಸಿ ವಂಚಕರ ವಿರುದ್ಧ ಕ್ರಮ ಕೈಗೊಂಡು ವಂಚನೆಗೊಳಗಾದವರಿಗೆ ನ್ಯಾಯ ದೊರಕಿಸಿ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us