ನಾನ್ ವೆಜ್ ಪ್ರಿಯರ ಗಮನಕ್ಕೆ: ಜ 30ರಂದು ಬೆಂಗಳೂರಿನಲ್ಲಿ ಮಾಂಸ ಸಿಗಲ್ಲ, ಕಾರಣವೇನು?
ಜನವರಿ 30 ರಂದು ಗಾಂಧೀಜಿ ಹುತಾತ್ಮ ದಿನದಂದು ಬೆಂಗಳೂರಿನ ಬಿಬಿಎಂಪಿ ಮಾಂಸ ಮಾರಾಟವನ್ನು ನಿಷೇಧಿಸಿದೆ. ಎಲ್ಲಾ ಕಸಾಯಿಖಾನೆ ಮತ್ತು ಮಾಂಸದ ಅಂಗಡಿಗಳಲ್ಲಿ ಮಾಂಸ ಮಾರಾಟ ಮಾಡದಂತೆ ಆದೇಶಿಸಲಾಗಿದೆ. ನಿಷೇಧದಿಂದ ಮಾಂಸಪ್ರಿಯರಿಗೆ ಶಾಕ್ ಉಂಟಾಗಿದೆ. ಬಿಬಿಎಂಪಿ ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಬೆಂಗಳೂರು, ಜನವರಿ 28: ಮಹಾತ್ಮ ಗಾಂಧೀಜಿ ಹುತಾತ್ಮ (Mahatma Gandhi) ದಿನದ ಪ್ರಯುಕ್ತ ಜ.30ರಂದು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯಗಳಲ್ಲೂ ಮಾಂಸ ಮಾರಾಟ ನಿಷೇಧಿಸಲಾಗಿದೆ. ಬೆಂಗಳೂರಿನ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಹಾಗೂ ಅಂಗಡಿಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಬಿಬಿಎಂಪಿಯ ಪಶುಪಾಲನಾ ವಿಭಾಗದಿಂದ ಮಂಗಳವಾರ ಆದೇಶ ಹೊರಡಿಸಲಾಗಿದೆ.
ಸದ್ಯ ಬಿಬಿಎಂಪಿ ಆದೇಶದಿಂದ ಮಾಂಸಪ್ರಿಯರಿಗೆ ಶಾಕ್ ಆಗಿದೆ. ಆದರೆ ಪ್ರತಿ ಬಾರಿಯಂತೆ ಈ ಬಾರಿಯೂ ಸರ್ವೋದಯ ದಿನದಂದು ಪ್ರಾಣಿವಧೆ ಹಾಗೂ ಅಂಗಡಿಗಳಲ್ಲಿ ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿಷೇಧಿಸುತ್ತಾ ಬರುತ್ತಿರುತ್ತಿದೆ. ಹಾಗಾಗಿ ಎಲ್ಲರೂ ಬಿಬಿಎಂಪಿ ಆದೇಶವನ್ನು ಪಾಲಿಸಲೇಬೇಕಿದೆ. ಒಂದು ವೇಳೆ ಆದೇಶವನ್ನು ಮೀರಿ ಮಾಂಸ ಮಾರಾಟ ಮಾಡಿದರೆ ಬಿಬಿಎಂಪಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸದ್ಯಕ್ಕಿಲ್ಲ ಮೆಟ್ರೋ ರೈಲು ಟಿಕೆಟ್ ದರ ಏರಿಕೆ
ಜನವರಿ 30 ಗಾಂಧೀಜಿ ಅವರ ಪುಣ್ಯ ಸ್ಮರಣೆಯ ದಿನವನ್ನು ಹುತಾತ್ಮರ ದಿನವಾಗಿಯೂ ಆಚರಿಸಲಾಗುತ್ತದೆ. ಈ ದಿನದಂದು ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಲಾಗುತ್ತದೆ. ಗಾಂಧಿ ಅವರು ಅಹಿಂಸೆಯ ಪ್ರತಿರೂಪ ಆಗಿರುವುದರಿಂದ ಅವರ ಪುಣ್ಯ ಸ್ಮರಣೆಯಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೆ ಕಡಿವಾಣ ಹಾಕಲಾಗುತ್ತಿದೆ.
ಭಾರತ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರ ಸ್ಮರಣೆ ಹಿನ್ನಲೆ ಜನವರಿ 30ರಂದು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಇದನ್ನು ‘ಶಹೀದ್ ದಿವಸ್’ ಅಥವಾ ‘ಸರ್ವೋದಯ ದಿನ’ ಎಂದೂ ಕರೆಯಲಾಗುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆ ಕೂಡ ಇದೇ ದಿನದಂದು ನಡೆದಿದ್ದು, ಹಾಗಾಗಿ ಈ ದಿನ ಮಹತ್ವ ಹೊಂದಿದೆ.
ಇದನ್ನೂ ಓದಿ: Viral:ಅಶೋಕ ಚಕ್ರದ ಬದಲು ರಾಷ್ಟ್ರಧ್ವಜದ ರಂಗೋಲಿಯಲ್ಲಿ ಕರ್ನಾಟಕ ನಕ್ಷೆ ಬಿಡಿಸಿದ ವಿದ್ಯಾರ್ಥಿಗಳು; ಫೋಟೋ ವೈರಲ್
1948 ರಲ್ಲಿ, ನವದೆಹಲಿಯ ಬಿರ್ಲಾ ಹೌಸ್ನಲ್ಲಿರುವ ‘ಗಾಂಧಿ ಸ್ಮೃತಿ’ಯಲ್ಲಿ ಸಂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಮಯದಲ್ಲಿ ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಹತ್ಯೆಗೈದಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೂಂಚೂಣಿಯಲ್ಲಿದ್ದ ಗಾಂಧೀಜಿ, ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಶಾಂತಿಯುತ ಮತ್ತು ಅಹಿಂಸಾತ್ಮಕ ಮಾರ್ಗವನ್ನು ಅನುಸರಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.