ಕೆಸಿ ಜನರಲ್ ಆಸ್ಪತ್ರೆಯಲ್ಲಿ ಔಷಧಿ ಕೊರತೆ: ಬಡ ರೋಗಿಗಳ ಪರದಾಟ

ಬೆಂಗಳೂರಿನ ಪ್ರತಿಷ್ಠಿತ ಕೆಸಿ ಜನರಲ್ ಸರ್ಕಾರಿ ಆಸ್ಪತ್ರೆಯಲ್ಲಿ ಗಂಭೀರ ಸ್ವರೂಪದ ಔಷಧಿಗಳ ಕೊರತೆ ಎದುರಾಗಿದ್ದು, ಬಡ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೈದ್ಯರು ಬರೆದುಕೊಡುವ ಅಗತ್ಯ ಮಾತ್ರೆಗಳು ಮತ್ತು ಸಿರಪ್‌ಗಳು ಆಸ್ಪತ್ರೆಯ ಫಾರ್ಮಸಿಯಲ್ಲಿ ಸಿಗುತ್ತಿಲ್ಲ, ಖಾಸಗಿ ಮೆಡಿಕಲ್​ಗಳಿಂದ ಖರೀದಿಸಬೇಕಾಗುತ್ತಿದೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿವೆ.

ಕೆಸಿ ಜನರಲ್ ಆಸ್ಪತ್ರೆಯಲ್ಲಿ ಔಷಧಿ ಕೊರತೆ: ಬಡ ರೋಗಿಗಳ ಪರದಾಟ
ಕೆಸಿ ಜನರಲ್ ಆಸ್ಪತ್ರೆ (ಸಂಗ್ರಹ ಚಿತ್ರ)
Image Credit source: tv9
Edited By:

Updated on: Jun 23, 2026 | 9:33 AM

ಬೆಂಗಳೂರು, ಜೂನ್ 23: ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆಸರೆಯಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳೇ ಇದೀಗ ರೋಗಿಗಳಿಗೆ ನಿರಾಸೆ ಮೂಡಿಸುತ್ತಿವೆ. ಬೆಂಗಳೂರು (Bengaluru) ನಗರದ ಪ್ರತಿಷ್ಠಿತ ಕೆಸಿ ಜನರಲ್ ಆಸ್ಪತ್ರೆಗೆ (KC General Hospital) ಬರುವ ನೂರಾರು ರೋಗಿಗಳಿಗೆ ಸರಿಯಾದ ಚಿಕಿತ್ಸೆಯೇನೋ ಸಿಗುತ್ತಿದೆ, ಆದರೆ ವೈದ್ಯರು ಬರೆದುಕೊಡುವ ಉಚಿತ ಔಷಧಿಗಳು ಮಾತ್ರ ಲಭ್ಯವಾಗುತ್ತಿಲ್ಲ. ಆಸ್ಪತ್ರೆಯ ಸಿಬ್ಬಂದಿ ‘ಸ್ಟಾಕ್ ಇಲ್ಲ’ ಎಂದು ಹೇಳುತ್ತಿದ್ದು, ಇದರಿಂದ ರೋಗಿಗಳು ಮತ್ತು ಅವರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಾಂಶಗಳು

  • ಉಚಿತ ಔಷಧಿ ವಿಭಾಗದಲ್ಲಿ ತೀವ್ರ ಸ್ಟಾಕ್ ಕೊರತೆ.
  • ಮಕ್ಕಳ ವಿಟಮಿನ್ ಡಿ ಸಿರಪ್‌ಗಳೂ ಲಭ್ಯವಿಲ್ಲ.
  • ಖಾಸಗಿ ಅಂಗಡಿಗಳಲ್ಲಿ ದುಬಾರಿ ಹಣಕ್ಕೆ ಖರೀದಿ.

ಹೊರಗಡೆ ಖರೀದಿಸುವಂತೆ ರೋಗಿಗಳಿಗೆ ಸೂಚನೆ

ಔಷಧಿ ಸಿಗದ ಬಗ್ಗೆ ಆಸ್ಪತ್ರೆಗೆ ಬರುವ ನೂರಾರು ಬಡ ರೋಗಿಗಳು ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ನಡೆಸಿ ಚೀಟಿ ಬರೆದುಕೊಟ್ಟರೆ, ಅಲ್ಲಿನ ಫಾರ್ಮಸಿಯಲ್ಲಿ ಅಗತ್ಯವಿರುವ ಮಾತ್ರೆ ಹಾಗೂ ಸಿರಪ್‌ಗಳು ಸಿಗುತ್ತಿಲ್ಲ. ಮಕ್ಕಳ ಪ್ರಮುಖ ವಿಟಮಿನ್ ಡಿ ಸಿರಪ್ ಸೇರಿದಂತೆ ಪ್ರಾಣರಕ್ಷಕ ಔಷಧಿಗಳ ಕೊರತೆ ಎದ್ದು ಕಾಣಿಸುತ್ತಿದೆ. ಆಸ್ಪತ್ರೆ ಸಿಬ್ಬಂದಿ ನಮ್ಮಲ್ಲಿ ಸ್ಟಾಕ್ ಇಲ್ಲ, ಹೊರಗಡೆಯೇ ಕೊಂಡುಕೊಳ್ಳಿ ಎಂದು ಉಡಾಫೆಯಾಗಿ ಹೇಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಾಗದಂತೆ ನಿರಂತರವಾಗಿ ಸ್ಟಾಕ್ ಇಡಲಾಗಿದೆ ಎಂದು ಹೇಳಿಕೆ ನೀಡುವ ಆರೋಗ್ಯ ಇಲಾಖೆಯ ನೈಜ ಸ್ಥಿತಿಗೆ ಕೆಸಿ ಜನರಲ್ ಆಸ್ಪತ್ರೆಯ ಸದ್ಯದ ಪರಿಸ್ಥಿತಿಯೇ ಸಾಕ್ಷಿಯಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನಸಾಮಾನ್ಯರಿಗೆ ಹೊರಗಿನ ಮೆಡಿಕಲ್ ಶಾಪ್‌ಗಳಲ್ಲಿ ನೂರಾರು ರೂಪಾಯಿ ನೀಡಿ ಮಾತ್ರೆಗಳನ್ನು ಖರೀದಿಸುವುದು ಭರಿಸಲಾಗದ ಹೊರೆಯಾಗಿದೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವವರಿಗೆ ಯುಟಿ ಖಾದರ್ ಬಿಗ್ ಗಿಫ್ಟ್! ದೂರುಗಳ ನಿವಾರಣೆಗೆ ಬರಲಿದೆ 24×7 ಹೆಲ್ಪ್‌ಲೈನ್

ನೂತನ ಆರೋಗ್ಯ ಸಚಿವರು ಕೂಡಲೇ ಈ ಗಂಭೀರ ಸಮಸ್ಯೆಯತ್ತ ಗಮನಹರಿಸಿ, ಬಡವರ ಆಸ್ಪತ್ರೆಯಲ್ಲಿ ಉಚಿತ ಔಷಧಿಗಳ ಸಮರ್ಪಕ ಸರಬರಾಜಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us