ಸುರಂಗ ಕೊರೆಯುವ ಯಂತ್ರಗಳಿಗೆ ಬಂಡೆಗಳು ಅಡ್ಡಿ; ಮೆಟ್ರೋ ಪಿಂಕ್ ಲೈನ್ ಸುರಂಗ ಕಾಮಗಾರಿ ವಿಳಂಬ

| Updated By: ಗಣಪತಿ ಶರ್ಮ

Updated on: Jun 14, 2024 | 7:32 AM

ನಮ್ಮ ಮೆಟ್ರೋ ಪಿಂಕ್ ಲೈನ್ ಕಾಮಗಾರಿಗೆ ಈಗ ಹೊಸದೊಂದು ಅಡ್ಡಿ ಎದುರಾಗಿದೆ. ಪರಿಣಾಮವಾಗಿ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದೆ. ಸುರಂಗ ಕೊರೆಯುವ ಮಷಿನ್​ಗಳಿಗೆ ಎದುರಾದ ಸಮಸ್ಯೆ ಏನು? ಇದರಿಂದ ಕಾಮಗಾರಿ ಎಷ್ಟು ವಿಳಂಬವಾಗಲಿದೆ? ಈ ಬಗ್ಗೆ ಬಿಎಂಆರ್​ಸಿಎಲ್ ಅಧಿಕಾರಿಗಳು ಹೇಳಿದ್ದೇನು? ಎಲ್ಲ ವಿವರಗಳು ಇಲ್ಲಿವೆ.

ಸುರಂಗ ಕೊರೆಯುವ ಯಂತ್ರಗಳಿಗೆ ಬಂಡೆಗಳು ಅಡ್ಡಿ; ಮೆಟ್ರೋ ಪಿಂಕ್ ಲೈನ್ ಸುರಂಗ ಕಾಮಗಾರಿ ವಿಳಂಬ
ಸುರಂಗ ಕೊರೆಯುವ ಯಂತ್ರ
Follow us on

ಬೆಂಗಳೂರು, ಜೂನ್ 14: ನಮ್ಮ ಮೆಟ್ರೋದ (Namma Metro) ಬಹುನಿರೀಕ್ಷಿತ ಪಿಂಕ್ ಲೈನ್ (Pink LIne) ಕಾಮಗಾರಿ ‌ಮತ್ತಷ್ಟು ವಿಳಂಬವಾಗಲಿದೆ. ಈ ಮಾರ್ಗದ ಅಂಡರ್ ಗ್ರೌಂಡ್ ಕಾಮಗಾರಿಗಾಗಿ ನೆಲದೊಳಕ್ಕೆ ಇಳಿಸಿದ್ದ ಎರಡು ಟಿಬಿಎಂ ಮಷಿನ್​ಗಳಿಗೆ ಬಂಡೆಗಲ್ಲುಗಳು ಅಡ್ಡಿಯಾಗಿವೆ. ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಪಿಂಕ್‌ ಲೈನ್​ನ 21 ಕಿಮೀ ಮಾರ್ಗದ 13 ಕಿಮೀ ಸುರಂಗ ಮಾರ್ಗದಲ್ಲಿ ಮೆಟ್ರೋ ಲೈನ್ ಹಾದು ಹೋಗ್ತಿದ್ದು ಇದು ಬೆಂಗಳೂರಿನ ಅತಿ ದೊಡ್ಡ ಮೆಟ್ರೋ ಸುರಂಗ ಕಾಮಗಾರಿಯಾಗಿದೆ. ಈ ಕಾಮಗಾರಿಗೆ ಈಗಾಗಲೇ ಒಂಬತ್ತು ಟಿಬಿಎಂ ಮಷಿನ್​ಗಳ‌ ಮೂಲಕ ಸುರಂಗ ಕಾಮಗಾರಿ ಮಾಡಲಾಗ್ತಿದೆ. ಏಳು ಟಿಬಿಎಂ ಮಷಿನ್​​​ಗಳು ಯಶ್ವಸಿಯಾಗಿ ಸುರಂಗ ಕೊರೆದು ಹೊರಗೆ ಬಂದಿದ್ದು, ಎರಡು ಟಿಬಿಎಂ ಮಷಿನ್​​ಗಳಿಗೆ ಇದೀಗ ಬಂಡೆಕಲ್ಲಿನ ಸವಾಲು ಎದುರಾಗಿದೆ ಇದರಿಂದ ಮೆಟ್ರೋ ಕಾಮಗಾರಿ ವಿಳಂಬವಾಗಲಿದೆ.

ತುಂಗಾ ಮತ್ತು ಭದ್ರಾ ಟಿಬಿಎಂ ಮಷಿನ್​​ಗಳು ಆಗಸ್ಟ್ ಒಳಗೆ ಸುರಂಗ ಕೊರೆದು ಹೊರ ಬರಬೇಕಿತ್ತು. ಆದರೆ ಬಂಡೆ ಕಲ್ಲುಗಳು ಸಿಕ್ಕಿರುವ ‌ಕಾರಣ ಈ ವರ್ಷದ ಕೊನೆಯವರೆಗೂ ಕಾಮಗಾರಿ ನಡೆಯಲಿದೆಯಂತೆ. ಮುಂದೆಯೂ ಬಂಡೆ ಕಲ್ಲುಗಳು ಎದುರಾದರೆ ಮತ್ತಷ್ಟು ವಿಳಂಬ ವಾಗಲಿದೆ. ತುಂಗಾ ಟಿಬಿಎಂ ಶೇ 45 ರಷ್ಟು ಸುರಂಗ ಕೊರೆದಿದ್ದು, ಭದ್ರಾ ಶೇ 22 ರಷ್ಟು ಸುರಂಗ ಕೊರೆದಿದೆ. ಈ ಎರಡು ಟಿಬಿಎಂಗಳು ಪ್ರತಿದಿನ ಐದು ಕಿಮೀ ನಷ್ಟು ಸುರಂಗ ಕೊರೆಯುವ ಸಾಮರ್ಥ್ಯ ಹೊಂದಿದ್ದು ಬಂಡೆಗಲ್ಲು ಸಿಕ್ಕಿರುವ ಕಾರಣ 3 ಕಿಮೀ ನಷ್ಟು ಮಾತ್ರ ಕೊರೆಯಲು ಸಾಧ್ಯವಾಗಲಿದೆ.

ಈ ಮಾರ್ಗದಲ್ಲಿ ಒಟ್ಟು 18 ಸ್ಟೇಷನ್ ಬರಲಿದ್ದು ಅದರಲ್ಲಿ ಆರು ಎಲಿವೇಟೆಡ್ 12 ಅಂಡರ್ ಗ್ರೌಂಡ್ ಸ್ಟೇಷನ್​​ಗಳು ಇರಲಿದೆ. ಈ ಬಗ್ಗೆ ಮಾತಾನಾಡಿದ ಮೆಟ್ರೋ ಅಧಿಕಾರಿಗಳು, ಸುರಂಗ ಕೊರೆಯುವ ಕಾರ್ಯ ಎರಡ್ಮೂರು ತಿಂಗಳು ಸುರಂಗ ತಡವಾಗಬಹುದು ಎಂದಿದ್ದಾರೆ. ಈ ಬಗ್ಗೆ ಬಿಎಂಆರ್​ಸಿಎಲ್​​​ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಕೂಡ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೆಟ್ಟು ನಿಂತ ಮೆಟ್ರೋ: ಡೋರ್ ಓಪನ್ ಆಗದೆ ಒಳಗಿದ್ದ ಪ್ರಯಾಣಿಕರು ಪರದಾಟ

ಒಟ್ಟಿನಲ್ಲಿ ಆಗಸ್ಟ್ ವೇಳೆಗೆ ಎರಡು ಟಿಬಿಎಂ ಮಷಿನ್​ಗಳು ಸುರಂಗ ಕೊರೆದು ಹೊರಗೆ ಬರುತ್ತದೆ ಅಂದುಕೊಂಡಿದ್ದ ಮೆಟ್ರೋ ಅಧಿಕಾರಿಗಳಿಗೆ ಈ ಬಂಡೆಗಲ್ಲು ಅಡ್ಡಲಾಗಿ ಸಿಕ್ಕಿರುವುದು ದೊಡ್ಡ ತಲೆ ನೋವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ