ಹೃದಯ ವಿದ್ರಾವಕ ಘಟನೆ: ಮದುವೆಗೆ ಹೊರಡಬೇಕೆನ್ನುವಷ್ಟರಲ್ಲಿ ಸಂಪ್​ಗೆ ಮಗು ಬಿದ್ದು ಸಾವು

ಮಕ್ಕಳ ಬಗ್ಗೆ ಪೋಷಕರು ಎಷ್ಟು ಕಾಳಜಿ ವಹಿಸಿದರೂ ಕಡಿಮೆ. ಮಕ್ಕಳನ್ನ ಅವರ ಪಾಡಿಗೆ ಬಿಡುವಂತಿಲ್ಲ, ಆಗಾಗ ಅವರ ಕಡೆ ಗಮನಹರಿಸುತ್ತಿರಬೇಕು. ಸ್ವಲ್ಪ ಯಾಮಾರಿದರೂ ಸಹ ದೊಡ್ಡ ಅನಾಹುತಗಳೇ ನಡೆದುಹೋಗುತ್ತವೆ. ಅದರಂತೆ ತಂದೆ ಕಾರು ತೊಳೆಯುವಾಗ ಮಗುವನ್ನ ನಿರ್ಲಕ್ಷ್ಯ ಮಾಡಿದ್ದಕ್ಕೆ ಘೋರ ದುರಂತವೊಂದು ನಡೆದಿದೆ.

ಹೃದಯ ವಿದ್ರಾವಕ ಘಟನೆ: ಮದುವೆಗೆ ಹೊರಡಬೇಕೆನ್ನುವಷ್ಟರಲ್ಲಿ ಸಂಪ್​ಗೆ ಮಗು ಬಿದ್ದು ಸಾವು
ಮೃತ ಮಗು
Image Credit source: tv9 kannada

Updated on: Mar 12, 2026 | 6:11 PM

ನೆಲಮಂಗಲ, ಮಾರ್ಚ್​ 12: ಸಂಪ್​ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವಂತಹ (death) ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಅಣ್ಣಯ್ಯ ಮತ್ತು ಋತು ದಂಪತಿಯ ಎರಡೂವರೆ ವರ್ಷದ ಚಿರಾಗ್ ಮೃತ ಮಗು. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಮೃತ ಮಗುವನ್ನು ನೆಲಮಂಗಲ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

ನಡೆದಿದ್ದೇನು?

ಬೆಂಗಳೂರು ಉತ್ತರ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಡರಹಳ್ಳಿಯ ನಿವಾಸಿಗಳಾದ ಅಣ್ಣಯ್ಯ ಮತ್ತು ಋತು ದಂಪತಿ ನಿನ್ನೆ ಮದುವೆ ಹಿನ್ನೆಲೆ ಕುಟುಂಬಸ್ಥರು ರೆಡಿಯಾಗುತ್ತಿದ್ದರು. ಚಿರಾಗ್​​​ನಿಗೆ ಕೂಡ ಸ್ನಾನ ಮಾಡಿಸಿ ತಾಯಿ ರೆಡಿ ಮಾಡಿಸಿದ್ದರು. ಈ ವೇಳೆ ಅಣ್ಣಯ್ಯ ಕಾರ್ ವಾಶ್ ಮಾಡುತ್ತಿದ್ದರು. ಸಂಪ್ ಕ್ಯಾಪ್ ಓಪನ್ ಮಾಡಿ ನೀರು ತೆಗೆದುಕೊಂಡಿದ್ದಾರೆ. ಕಾರ್ ವಾಶ್ ಮಾಡಿದ ನಂತರ ಕ್ಯಾಪ್ ಮುಚ್ಚಲು ಮರೆತ ಅಣ್ಣಯ್ಯ ಮನೆ ಒಳಗೆ ಹೋಗಿದ್ದಾರೆ. ವಾಪಸ್ ಬಂದು ನೋಡುವಷ್ಟರಲ್ಲಿ ಚಿರಾಗ್ ಸಂಪ್​ನಲ್ಲಿ ಬಿದ್ದು ಮೃತಪಟ್ಟಿದ್ದ.

ಸ್ನೇಹಿತನಿಗೆ ಮೆಸೇಜ್ ಮಾಡಿ ನೇಣಿಗೆ ಶರಣಾದ ಯುವಕ

ಆತ 19ರ ಹದಿಹರೆಯದ ಯುವಕ, ಹುಟ್ಟು ಕೋಪಿಷ್ಟ. ಓದಿಗೆ ವಿದಾಯ ಹೇಳಿ ಜೀವನಕ್ಕಾಗಿ ಡ್ರೈವರ್ ಕೆಲಸ ಮಾಡುತ್ತಿದ್ದ. ತಂದೆ ಕಳೆದುಕೊಂಡಿದ್ದ ಆತ ಮನೆಯ ಜವಾಬ್ದಾರಿ ಹೊತ್ತಿದ್ದ. ತನ್ನ ತಾಯಿಗೆ ನೆರವಾಗಲು ಕೆಲಸಕ್ಕೆ ತೆರಳುತ್ತಿದ್ದವನು ನಿನ್ನೆ ಸಂಜೆ ಅದೇನಾಯ್ತೋ ಗೊತ್ತಿಲ್ಲ ನೇಣಿಗೆ ಶರಣಾಗಿ ಬಿಟ್ಟಿದ್ದಾನೆ.

ಇದನ್ನೂ ಓದಿ: ಕೊಪ್ಪಳ: ಇಬ್ಬರು ಪುತ್ರಿಯರ ಜೊತೆ ಕೆರೆಗೆ ಹಾರಿ ತಾಯಿಯೂ ಆತ್ಮಹತ್ಯೆ

ಚೇತನ್ (19) ಆತ್ಮಹತ್ಯೆ ಮಾಡಿಕೊಂಡ ಹುಡುಗ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾವ್ಯಾಪ್ತಿ ಗೌಡಹಳ್ಳಿಯ ನಿವಾಸಿ. ಹಲವು ವರ್ಷಗಳ ಹಿಂದೆ ತನ್ನ ತಂದೆಯನ್ನ ಕಳೆದುಕೊಂಡಿದ್ದ. ಎಸ್​ಎಸ್​ಎಲ್​ಸಿ ಮುಗಿಸಿ ಪಿಯುಸಿ ಓದುತ್ತಿದ್ದವನು ದ್ವಿತಿಯ ಪಿಯುಸಿ ಮುಗಿಸಿ ಅರ್ಧಕ್ಕೆ ಬಿಟ್ಟಿದ್ದ. ಮನೆಯಲ್ಲಿದ್ದವನು ತಾಯಿಗೆ ನೆರವಾಗಲು ಪರಿಶ್ರಮ ಅಕಾಡೆಮಿಯಲ್ಲಿ ಕಾಲೇಜು ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.

ಎಂದಿನಂತೆ ನಿನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಚೇತನ್, ತಾಯಿ ಹಾಲು ಕರೆಯಲು ಹಸುವಿನ ಶೆಡ್​​ಗೆ ಹೋಗಿದ್ದಾರೆ. ಈ ವೇಳೆ ಅದೇನಾಯ್ತೋ ಗೊತ್ತಿಲ್ಲ ಸ್ನೇಹಿತನಿಗೆ ನಾನು ಮನೆ ಬಿಟ್ಟು ಹೋಗ್ತಿನಿ, ಇಲ್ಲವಾದರೆ ಸಾಯ್ತೀನಿ, ನೀನು ಮನೆ ಬಳಿ ಬಾ ಎಂದು ಮೆಸೇಜ್ ಮಾಡಿದ್ದ. ಈ ವೇಳೆ​ ಸ್ನೇಹಿತ ಮನೆ ಬಳಿ ಬರುವಷ್ಟರಲ್ಲಿ ಚೇತನ್ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಸದ್ಯ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಮಡಿಕೇರಿ ಡಬಲ್ ಮರ್ಡರ್​​​​ ಕೇಸಿಗೆ ಬಿಗ್ ಟ್ವಿಸ್ಟ್:ಹೆಂಡ್ತಿ ಇದ್ರೂ ತಂಗಿ ಸಂಗ ಬೆಳೆಸಿದ್ದ ಅಣ್ಣ

ಇನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಆದರೆ ಚೇತನ್ ಸಾವಿಗೆ ಅಸಲಿ ಕಾರಣ ಏನು ಎಂಬುದು ನಿಗೂಢವಾಗಿದೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us