
ಬೆಂಗಳೂರು, ಸೆಪ್ಟೆಂಬರ್ 2: ನೇಪಾಳ–ಟಿಬೆಟ್ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದಿಂದ (Nepal Flood) ಸ್ವಲ್ಪದರಲ್ಲೇ ಪಾರಾಗಿದ್ದ 17 ಮಂದಿ ಕರ್ನಾಟಕದ ನಿವಾಸಿಗಳು ಮಂಗಳವಾರ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ನೇಪಾಳ ಏರ್ಲೈನ್ಸ್ನ RA 225 ವಿಮಾನದ ಮೂಲಕ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬಂದಿಳಿದರು. ಒಟ್ಟು 23 ಮಂದಿ ಚಾರಣಿಗರ ತಂಡ ನೇಪಾಳಕ್ಕೆ ತೆರಳಿತ್ತು. ಈ ಪೈಕಿ ಇನ್ನೂ ಇಬ್ಬರು ಇಂದು ಬೆಂಗಳೂರಿಗೆ (Bengaluru) ಆಗಮಿಸುವ ನಿರೀಕ್ಷೆಯಿದೆ. ಈ ಚಾರಣ ತಂಡದಲ್ಲಿದ್ದ ಬಹುತೇಕರು ಚಾರಣದ ಅನುಭವ ಹೊಂದಿರಲಿಲ್ಲ. ನೇಪಾಳದ ‘ಮೂನ್ ಹಿಮಾಲಯ ಅಡ್ವೆಂಚರ್ (Moon Himalaya Adventure) ಎಂಬ ಟ್ರೆಕ್ಕಿಂಗ್ ಕಂಪನಿಯ ಸೇವೆಯನ್ನು ತಂಡ ಪಡೆದುಕೊಂಡಿತ್ತು.
ತಂಡದಲ್ಲಿದ್ದ ಬೆಂಗಳೂರಿನ ನಿವಾಸಿ ಶ್ರೀನಿವಾಸುಲು ಯಾದತಿ ಮಾತನಾಡಿ, ಪ್ರವಾಹ ದುರಂತ ಸಂಭವಿಸುವ ಒಂದು ದಿನದ ಮುನ್ನವೇ ತಾವು ನ್ಯಾಲಂನಲ್ಲಿದ್ದ ಹೋಟೆಲ್ನಿಂದ ಹೊರಟಿದ್ದಾಗಿ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ನೇಪಾಳ ರಾಜಧಾನಿ ಕಠ್ಮಂಡುವಿನಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಟಿಬೆಟ್ ಗಡಿ ಪಟ್ಟಣ ನ್ಯಾಲಂನಲ್ಲಿ ಅವರು ತಂಗಿದ್ದರು.
‘ನಾವು ಪ್ರವಾಹ ದುರಂತದಿಂದ ಕೇವಲ ಒಂದು ದಿನದ ಅಂತರದಲ್ಲಿ ಪಾರಾಗಿದ್ದೇವೆ. ನಾವು ಹೋಟೆಲ್ನಿಂದ ಹೊರಟ ಮರುದಿನ ಇಡೀ ಹೋಟೆಲ್ ಕಟ್ಟಡವೇ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ ಎಂಬುದು ತಿಳಿಯಿತು’ ಎಂದು ಶ್ರೀನಿವಾಸುಲು ತಿಳಿಸಿರುವುದನ್ನೂ ವರದಿ ಉಲ್ಲೆಖಿಸಿದೆ. ತಂಡದ ಸದಸ್ಯರು ಹಲವು ತಿಂಗಳ ಹಿಂದೆಯೇ ತಮ್ಮ ಪ್ರವಾಸದ ಭಾಗವಾಗಿ ರಿಟರ್ನ್ ಫ್ಲೈಟ್ ಟಿಕೆಟ್ ಕಾಯ್ದಿರಿಸಿದ್ದರು. ಹೀಗಾಗಿ ಸಾಮಾನ್ಯ ವಿಮಾನದಲ್ಲೇ ಬೆಂಗಳೂರಿಗೆ ಮರಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಂದ ದೂರವಿದ್ದ ಕಾರಣ ರಾಜ್ಯ ಸರ್ಕಾರದ ನೇರ ನೆರವಿನ ಅಗತ್ಯ ತಮಗೆ ಇರಲಿಲ್ಲ ಎಂದು ತಂಡದ ಸದಸ್ಯರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (KSDMA) ಅಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಿ ಸುರಕ್ಷತೆ ಬಗ್ಗೆ ಮಾಹಿತಿ ಪಡೆದಿದ್ದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ವಿಡಿಯೋ ಕಾಲ್ ಮೂಲಕ ತಂಡದ ಸದಸ್ಯರೊಂದಿಗೆ ಮಾತನಾಡಿ ಅವರ ಸುರಕ್ಷತೆ ವಿಚಾರಿಸಿದ್ದರು.
ಇದನ್ನೂ ಓದಿ: ನೇಪಾಳ ಪ್ರವಾಹದಲ್ಲಿ ತೇಲಿಬಂದ ಬೃಹತ್ ಗಾತ್ರದ ಮೀನುಗಳು: ಸೇವನೆ, ಮಾರಾಟ ಮಾಡದಂತೆ ಬಿಹಾರ ಸರ್ಕಾರ ಎಚ್ಚರಿಕೆ
ಟಿಬೆಟ್ನ ಡಾರ್ಚೆನ್ನಿಂದ ಕಠ್ಮಂಡುವಿಗೆ ತೆರಳಿ ವಿಮಾನ ಪ್ರಯಾಣಕ್ಕೆ ಅನುವಾಗಬೇಕಿದ್ದ ಮಾರ್ಗದಲ್ಲಿ ಅಪಾಯಕಾರಿ ರಸ್ತೆಗಳ ಮೂಲಕ ಪ್ರಯಾಣಿಸಬೇಕಾಗಿದ್ದರಿಂದ ಕೆಲವು ನೆರವು ಕೇಳಿದ್ದಾಗಿ ಯಾದತಿ ತಿಳಿಸಿದ್ದಾರೆ. ಆದರೆ ಆ ಪ್ರದೇಶದಲ್ಲಿ ರಾಜ್ಯ ಸರ್ಕಾರಕ್ಕೆ ನೇರವಾಗಿ ನೆರವು ನೀಡಲು ಸಾಧ್ಯವಾಗಿರಲಿಲ್ಲ. ಕಠ್ಮಂಡುವಿಗೆ ತಲುಪಿದಾಗ ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಂಡವನ್ನು ಬರಮಾಡಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ