
ಬೆಂಗಳೂರು, ಆಗಸ್ಟ್ 09: ಮಲಯಾಳಿ ಬಾಂಧವರ ಪ್ರಮುಖ ಹಬ್ಬವಾದ ‘ಓಣಂ’ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೇರಳದ ವಿವಿಧ ಭಾಗಗಳಿಗೆ ತೆರಳುವ ಸಾರ್ವಜನಿಕರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಭರ್ಜರಿ ಕೊಡುಗೆ ನೀಡಿದೆ. ಹಬ್ಬದ ದಿನಗಳಲ್ಲಿ ಉಂಟಾಗುವ ಭಾರಿ ಜನದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಕೇರಳದ ಪ್ರಮುಖ ನಗರಗಳಿಗೆ ಹೆಚ್ಚುವರಿಯಾಗಿ 90 ವಿಶೇಷ ಬಸ್ಗಳನ್ನು ಕಾರ್ಯಾಚರಣೆಗೊಳಿಸಲು ಕೆಎಸ್ಆರ್ಟಿಸಿ ತೀರ್ಮಾನಿಸಿದೆ.
ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಸ್ಯಾಟಲೈಟ್ ಬಸ್ ನಿಲ್ದಾಣ (ಮೈಸೂರು ರಸ್ತೆ) ಮತ್ತು ಶಾಂತಿನಗರ ಬಸ್ ನಿಲ್ದಾಣಗಳಿಂದ ಕೇರಳದ ಕಣ್ಣೂರು, ಕೊಚ್ಚಿನ್, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್ ಹಾಗೂ ತಿರುವನಂತಪುರಂ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಈ ವಿಶೇಷ ಬಸ್ಗಳು ಸಂಚರಿಸಲಿವೆ. ಐಷಾರಾಮಿ ಮಲ್ಟಿ-ಆಕ್ಸಲ್ ವೋಲ್ವೋ, ಇವಿ ಪವರ್ ಪ್ಲಸ್, ಸ್ಲೀಪರ್ ಹಾಗೂ ರಾಜಹಂಸ ಬಸ್ಗಳನ್ನು ಈ ವಿಶೇಷ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಹಬ್ಬದ ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಪ್ರಯಾಣಿಕರು ಕೆಎಸ್ಆರ್ಟಿಸಿಯ ಅಧಿಕೃತ ವೆಬ್ಸೈಟ್ ಮೂಲಕ ಮುಂಗಡವಾಗಿ ಆನ್ಲೈನ್ ಟಿಕೆಟ್ ಕಾಯ್ದಿರಿಸಲು ಸಾರಿಗೆ ಸಂಸ್ಥೆ ಅವಕಾಶ ಕಲ್ಪಿಸಿದೆ. ನಿಯಮಿತ ಬಸ್ಗಳ ಟಿಕೆಟ್ಗಳು ಈಗಾಗಲೇ ಭರ್ತಿಯಾಗುತ್ತಿರುವುದರಿಂದ, ಹೆಚ್ಚುವರಿ ಬಸ್ಗಳ ವೇಳಾಪಟ್ಟಿ ಮತ್ತು ಮಾರ್ಗಗಳ ವಿವರಗಳನ್ನು ವೆಬ್ಸೈಟ್ನಲ್ಲಿ ಪರಿಶೀಲಿಸಿ ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ವಿನಂತಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ