AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: 36 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ ಕಸ್ಟಮ್ಸ್

ಬೆಂಗಳೂರು ನಗರ ಕಸ್ಟಮ್ಸ್ ಕಮಿಷನರೇಟ್ 36 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಿದೆ. ಕೊಕೇನ್ ಮತ್ತು ಗಾಂಜಾ ಸೇರಿದಂತೆ 11.997 ಕಿಲೋಗ್ರಾಂಗಳಷ್ಟು ಮಾದಕ ದ್ರವ್ಯಗಳನ್ನು ಜನವರಿ 24 ರಂದು ದಹಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಮಾದಕ ವ್ಯಸನದ ಬಗ್ಗೆಯೂ ಕಳವಳ ವ್ಯಕ್ತವಾಗಿದ್ದು, ಪೋಷಕರೂ ಸಹ ಮಕ್ಕಳ ಮೇಲೆ ನಿಗಾ ಇರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: 36 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ ಕಸ್ಟಮ್ಸ್
ಸಾಂದರ್ಭಿಕ ಚಿತ್ರ
Ganapathi Sharma
|

Updated on: Jan 28, 2025 | 8:08 AM

Share

ಬೆಂಗಳೂರು, ಜನವರಿ 28: ಮಾದಕ ದ್ರವ್ಯಗಳ ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಬೆಂಗಳೂರು ನಗರ ಕಸ್ಟಮ್ಸ್ ಕಮಿಷನರೇಟ್ ಸುಮಾರು 36 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ನಾಶಪಡಿಸಿದೆ. ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. ಕೊಕೇನ್ ಮತ್ತು ಗಾಂಜಾ ಸೇರಿದಂತೆ ಒಟ್ಟು 11.997 ಕಿಲೋದಷ್ಟು ನಿಷೇಧಿತ ಡ್ರಗ್ಸ್ ಅನ್ನು ಜನವರಿ 24 ರಂದು ದಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಮಾದಕವಸ್ತು ಕಳ್ಳಸಾಗಣೆ ಮತ್ತು ಅದರ ಅಕ್ರಮ ವಿತರಣೆ ತಡೆಗಟ್ಟುವುದಕ್ಕಾಗಿ ಕೇಂದ್ರ ನೇರ ತೆರಿಗೆಗಳ ಮಂಡಳಿ ಮತ್ತು ಕಸ್ಟಮ್ಸ್ (ಸಿಬಿಐಸಿ) ಆರಂಭಿಸಿದ ಮಾದಕ ದ್ರವ್ಯ ವಿಲೇವಾರಿ ಅಭಿಯಾನದಡಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾದಕವಸ್ತು ಕಳ್ಳಸಾಗಣೆಯನ್ನು ತಡೆಗಟ್ಟುವಲ್ಲಿ ಮತ್ತು ವ್ಯಾಪಕವಾಗುತ್ತಿರುವ ಮಾದಕ ವ್ಯಸನವನ್ನು ತಡೆಗಟ್ಟುವಲ್ಲಿ ಈ ಉಪಕ್ರಮ ಮಹತ್ವದ ಹೆಜ್ಜೆ ಎಂದು ಕಸ್ಟಮ್ಸ್ ಕಮಿಷನರ್ ಹೇಳಿದ್ದಾರೆ. ಅಲ್ಲದೆ, ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ. ಹೆಚ್ಚಿನ ಜಾಗರೂಕತೆಯೊಂದಿಗೆ ಡ್ರಗ್ಸ್ ವಿರುದ್ಧದ ಹೋರಾಟವನ್ನು ಮುಂದುವರೆಸುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

394 ಕೆಜಿ ಗಾಂಜಾ ನಾಶಪಡಿಸಿದ ಪೊಲೀಸರು

ನ್ಯಾಯಾಲಯದ ಒಪ್ಪಿಗೆ ಮೇರೆಗೆ ಕೇಂದ್ರ ವ್ಯಾಪ್ತಿಯ ಆರು ವಲಯಗಳು ವಶಪಡಿಸಿಕೊಂಡ 394 ಕಿಲೋ ಗಾಂಜಾವನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 112.67 ಕಿಲೋ ಗಾಂಜಾ ಮತ್ತು 5 ಲೀಟರ್ ಹಶಿಶ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.

ಕೋಲಾರ ಪೊಲೀಸರು 97.624 ಕಿಲೋದಷ್ಟು ಗಾಂಜಾ ವಶಪಡಿಸಿಕೊಂಡರೆ, ಕೆಜಿಎಫ್ ಪೊಲೀಸರು 83.45 ಕಿಲೋ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ತುಮಕೂರು ಜಿಲ್ಲಾ ಪೊಲೀಸರು 51.7 ಕಿಲೋ ಗಾಂಜಾ ಮತ್ತು 47 ಗ್ರಾಂ ಎಂಡಿಎಂಎ, ರಾಮನಗರ ಜಿಲ್ಲಾ ಪೊಲೀಸರು 27.8 ಕಿಲೋ, ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು 24.760 ಕಿಲೋ ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಏರ್ ಶೋಗೆ ಬರುವವರಿಗೆ ಬಿಎಂಟಿಸಿ ಉಚಿತ ಬಸ್ ವ್ಯವಸ್ಥೆ, ಈ ಜಾಗದಲ್ಲಿ ಪಾರ್ಕಿಂಗ್

ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನದ ಚಟಕ್ಕೆ ಬಲಿಯಾಗುತ್ತಿರುವ ಬಗ್ಗೆ ವರದಿಯಾಗುತ್ತಿದ್ದು, ಅವರ ಭವಿಷ್ಯ ಮತ್ತು ಹಿತ ಕಾಪಾಡಲು ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತಿದೆ. ಪೋಷಕರು ಕೂಡ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ಮತ್ತು ಅವರ ಚಟುವಟಿಕೆಗಳ ಮೇಲೆ ನಿಗಾ ಇಡುವ ಮೂಲಕ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಪೊಲೀಸರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ