ದೇವನಹಳ್ಳಿ: 15 ದಿನದಿಂದ ವಿದ್ಯುತ್ ಇಲ್ಲದೆ ಜನ ಹೈರಾಣು; ಬೆಸ್ಕಾಂ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು
ದೇವನಹಳ್ಳಿ ತಾಲೂಕಿನ ಗೆಜ್ಜಿಕುಪ್ಪೆ ಗ್ರಾಮ ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದೆ ಸಂಪೂರ್ಣ ಕತ್ತಲಲ್ಲಿ ಮುಳುಗಿದೆ. ಟ್ರಾನ್ಸ್ಫಾರ್ಮರ್ ಸುಟ್ಟು ಹೋದರೂ ಬೆಸ್ಕಾಂ ಇಲಾಖೆ ನಿರ್ಲಕ್ಷ್ಯ ತೋರಿದೆ. ರಾತ್ರಿ ವೇಳೆ ಹಾವು, ಚೇಳು ಹಾಗೂ ಕಳ್ಳರ ಭಯದಲ್ಲಿ ಗ್ರಾಮಸ್ಥರು ವಾಸಿಸುವಂತಾಗಿದೆ. ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ.

ದೇವನಹಳ್ಳಿ, ಫೆಬ್ರವರಿ 19: ಅದು ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ಮುನಿಯಪ್ಪ ಅವರ ಸ್ವಕ್ಷೇತ್ರದ ಕುಗ್ರಾಮ. ದಲಿತರೇ ವಾಸಿಸುವ ಆ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿದೆ. ಹೀಗಾಗಿ 15 ದಿನಗಳಿಂದ ವಿದ್ಯುತ್ (power outage) ಇಲ್ಲಿದೆ ಕತ್ತಲಲ್ಲಿ ಜೀವನ ಕಳೆಯುವಂತಾಗಿದೆ. ಬೆಸ್ಕಾಂ (BESCOM) ಕಚೇರಿಗೆ ಅಲೆದು ಅಲೆದು ಸುಸ್ತಾದ ಗ್ರಾಮಸ್ಥರು ಇದೀಗ ಕರೆಂಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಬೆಸ್ಕಾಂ ವಿರುದ್ಧ ಆಕ್ರೋಶ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೆಜ್ಜಿಕುಪ್ಪೆ ಗ್ರಾಮದಲ್ಲಿ ಸುಮಾರು 30 ಮನೆಗಳಿದ್ದು, 150ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ದಲಿತರೇ ವಾಸಿಸುವ ಈ ಕುಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಟ್ರಾನ್ಸ್ಫಾರ್ಮರ್ ಸುಟ್ಟುಹೋಗಿದೆ. ಅಂದಿನಿಂದ ಇಂದಿನವರೆಗೆ ರಾತ್ರಿ ಹೊತ್ತಲ್ಲಿ ಗ್ರಾಮದಲ್ಲಿ ಕರೆಂಟ್ ಇಲ್ಲದೆ ಜನ ಕಗ್ಗತ್ತಲಿನಲ್ಲಿ ಇದ್ದು ಹೈರಾಣಾಗಿದ್ದಾರೆ. ಜೊತೆಗೆ ಹಾವು, ಚೇಳುಗಳ ಭಯ ಸೇರಿದಂತೆ ಮತ್ತೊಂದೆಡೆ ಕಳ್ಳರ ಕಾಟ. ಕುರಿಗಳ ಕಳ್ಳತನ ಮಾಡುತ್ತಿದ್ದಾರೆ ಅಂತ ಜನ ಜಾಗರಣೆ ಮಾಡುವಂತಾಗಿದೆ. ವಿದ್ಯುತ್ ಸಮಸ್ಯೆ ಸರಿಪಡಿಸದ ಬೆಸ್ಕಾಂ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತಾಯಿಯ ಫೋಟೋ ಶೂಟ್ ವೇಳೆ ಅವಘಡ: ನೀರಿಗೆ ಬಿದ್ದು ಕಣ್ಮುಚ್ಚಿದ 3 ವರ್ಷದ ಕಂದಮ್ಮ
ರಾಜ್ಯದಲ್ಲಿ ಗೃಹಜ್ಯೋತಿ ಜಾರಿಯಲ್ಲಿದ್ದು, ಈ ಗ್ರಾಮದಲ್ಲೂ ನಿರಂತರ 24 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿತ್ತು. ಆದರೆ 25 ಕೆವಿ ಟ್ರಾನ್ಸ್ಫಾರ್ಮರ್ ಗ್ರಾಮದ 30 ಮನೆಗಳಿಗೆ ವಿದ್ಯುತ್ ಒದಗಿಸಿದಲ್ಲದೆ ಕೆಲವರು ಬೋರ್ವೆಲ್ಗೂ ಇದೇ ಟ್ರಾನ್ಸ್ಫಾರ್ಮರ್ ಬಳಸುತ್ತಿದ್ದಾರಂತೆ. ಹೀಗಾಗಿ ಟ್ರಾನ್ಸ್ಫಾರ್ಮರ್ ಸುಟ್ಟುಹೋಗಿ 15 ದಿನಗಳಿಂದ ಕತ್ತಲಲ್ಲೇ ಜನ ವಾಸ ಮಾಡುವಂತಾಗಿದೆ. ಕೆಲ ಮನೆಯ ವಿದ್ಯಾರ್ಥಿಗಳು ಕರೆಂಟ್ ಇಲ್ಲದೆ ಊರನ್ನ ತೊರದಿದ್ದಾರಂತೆ.
ಇನ್ನು ಟ್ರಾನ್ಸ್ಫಾರ್ಮರ್ ಸರಿಪಡಿಸಿ ಗ್ರಾಮಕ್ಕೆ ಕರೆಂಟ್ ನೀಡುವಂತೆ ಬೆಸ್ಕಾಂ ಅಧಿಕಾರಿಗಳ ಬಳಿ ಅಲೆದು ಅಲೆದು ಸುಸ್ತಾದ ಜನ ಇಂದು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಇನ್ನು ನಾಳೆ ಒಳಗೆ ಗ್ರಾಮಕ್ಕೆ ಕರೆಂಟ್ ಬಾರದೇ ಹೋದರೆ ವಿಜಯಪುರ ಬೆಸ್ಕಾಂ ಬಳಿ ಗ್ರಾಮಸ್ಥರಿಂದ ಅಡುಗೆ ಮಾಡಿ ಅಲ್ಲಿಯೇ ವಾಸ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 1.5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ
ಒಟ್ಟಾರೆ ಗೆಜ್ಜಿಕುಪ್ಪೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮದ ಜನ ಹೈರಾಣಾಗಿದ್ದು, ಬೆಸ್ಕಾಂ ಇಲಾಖೆ ಅಧಿಕಾರಿಗಳು ಜಾಣ ನಿದ್ರೆಗೆ ಜಾರಿದ್ದಾರೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಬೆಸ್ಕಾಂ ಅಧಿಕಾರಿಗಳು ಟ್ರಾನ್ಸ್ಫಾರ್ಮರ್ ಅಳವಡಿಸಿ ಕಗ್ಗತ್ತಲಲ್ಲಿಂದ ಕೂಡಿರುವ ಗ್ರಾಮಕ್ಕೆ ಬೆಳಕು ನೀಡುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.